'ಹೆತ್ತವರು ಇಂಗ್ಲಿಷ್ ಮೀಡಿಯಂನಲ್ಲೇ ಮಕ್ಕಳು ಕಲಿಯಬೇಕೆಂದರೆ ತಪ್ಪಲ್ಲ'
ಮಂಗಳೂರು, ಜನವರಿ 6: ಎಲ್ಲ ದಾನಗಳಿಗಿಂತಲೂ ಮಿಗಿಲು ವಿದ್ಯಾದಾನ. ಬದುಕು ಕಟ್ಟಿಕೊಳ್ಳಲು ನೆರವಾಗುವ ವಿದ್ಯೆ ಎಲ್ಲ ಮಕ್ಕಳಿಗೂ ಲಭ್ಯವಾಗಿಸುವುದರಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ರಾಜ್ಯಪಾಲ ವಜೂಬಾಯಿ ರೂಡಾಬಾಯಿವಾಲ ಅಭಿಪ್ರಾಯಪಟ್ಟಿದ್ದಾರೆ.
ದಡ್ಡಲಕಾಡು ಮೇಲಂತಸ್ತಿನ ವಿದ್ಯಾದೇಗುಲ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಭವಿಷ್ಯವನ್ನು ಬೆಳಗುವ ವಿದ್ಯೆ ಧೈರ್ಯ, ಸಾಧನೆಗೆ ಸೋಪಾನ. ಎಲ್ಲ ಮಕ್ಕಳಿಗೂ ಏಕರೂಪದ ವಿದ್ಯೆ ದೊರೆಯುವುದರಿಂದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಭೇದವಿರುವುದಿಲ್ಲ. ಏಕರೂಪದ ಶಿಕ್ಷಣದಿಂದ ಪ್ರತಿಭಾನ್ವಿತ ಮಕ್ಕಳು ತಮ್ಮ ಪ್ರತಿಭೆಗಳಿಂದ ದೇಶವನ್ನು ಬೆಳಗಬಲ್ಲರು ಎಂದರು.
ಎರಡು ರಾಜ್ಯದ ಮಕ್ಕಳು ಬರುವ ಒಂದು ಕನ್ನಡ ಶಾಲೆಯ ಕಥೆ
ನಮ್ಮೆಲ್ಲರ ಮೂಲ ಹಳ್ಳಿಯೇ ಆಗಿದ್ದು, ಪ್ರತಿಯೋರ್ವ ಹೆತ್ತವರಿಗೂ ಇಂದಿನ ಕಾಲದಲ್ಲಿ ತಮ್ಮ ಮಕ್ಕಳು ಉತ್ತಮವಾಗಿ ಇಂಗ್ಲಿಷ್ ಮೀಡಿಯಂನಲ್ಲೇ ಕಲಿಯಬೇಕೆಂಬ ಹಂಬಲ ತಪ್ಪಲ್ಲ ಎಂದು ಹೇಳಿದ ರಾಜ್ಯಪಾಲರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜೆಗಳು ತಮ್ಮ ದನಿಯನ್ನು, ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುವುದರಿಂದ ರಾಜ್ಯ ಸರ್ಕಾರಗಳು ನೀತಿ ನಿರೂಪಣೆ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಇಲ್ಲಿನ ಗ್ರಾಮೀಣ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಸದಸ್ಯರು ವಿದ್ಯಾರ್ಥಿಗಳ ಏಳಿಗೆಯನ್ನು ಗಮನದಲ್ಲಿರಿಸಿ ಶಾಲೆಯನ್ನು ಅಭಿವೃಧ್ದಿಪಡಿಸಿರುವುದು ರಾಜ್ಯಕ್ಕೆ ಮಾದರಿಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿಯಾಗಲಿದೆ. 30ರಷ್ಟಿದ್ದ ಮಕ್ಕಳ ಸಂಖ್ಯೆ ಗ್ರಾಮೀಣರ ಸಹಕಾರದಿಂದಾಗಿ ಇಂದು 500ಕ್ಕೆ ಏರಿರುವುದು ನಿಜವಾದ ಸಾಧನೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಶೇ.100 ರಷ್ಟು ಅಂಕ ಗಳಿಸಿದ್ರೆ ಶಿಕ್ಷಕರಿಗೆ ಪ್ರೋತ್ಸಾಹಧನ
ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬೆಂಗಳೂರಿನ ವಕೀಲರಾದ ಎಸ್ ರಾಜಶೇಖರ್ ಹಿಳಿಯೂರು ಪಾಲ್ಗೊಂಡರು.