ತೌಕ್ತೆ ಚಂಡಮಾರುತ: ಅರಬ್ಬೀ ಸಮುದ್ರದಲ್ಲಿ ಹೆಚ್ಚಾದ ಅಲೆಗಳ ನರ್ತನ
ಮಂಗಳೂರು, ಮೇ 15: ಅರಬ್ಬೀ ಸಮುದ್ರದಲ್ಲಿ ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಜಡಿ ಮಳೆ ಮುಂದುವರಿದಿದೆ. ಮಂಗಳೂರು ಕಡಲ ತೀರದಲ್ಲಿ ಅಲೆಗಳ ನರ್ತನವೂ ಜಾಸ್ತಿಯಾಗಿದ್ದು, ಸದ್ಯ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ.
Recommended Video
ಕಡಲ ತಡಿಗೆ ದೈತ್ಯ ಅಲೆಗಳು ಅಪ್ಪಳಿಸುತ್ತಿದ್ದು, ಮಂಗಳೂರು ಹೊರವಲಯದ ಉಳ್ಳಾಲ, ಕೋಟೆಪುರ, ಸೋಮೇಶ್ವರ, ಕೈಕೊ ಪ್ರದೇಶದಲ್ಲಿ ಕಡಲ ಕೊರೆತದ ಆತಂಕ ಎದುರಾಗಿದೆ.
ಸಮುದ್ರ ತೀರ ಪ್ರದೇಶದಲ್ಲಿ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿದೆ. 2 ದಿನಗಳ ಕಾಲ ಮಂಗಳೂರಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಕೊರೊನಾ ಮಾಹಾಮಾರಿಯ ನಡುವೆ ತೌಕ್ತೆ ಚಂಡಮಾರುತದ ಸವಾಲು ಎದುರಾಗಿದೆ. ಎನ್.ಡಿ.ಆರ್.ಎಫ್ ತಂಡವನ್ನು ಜಿಲ್ಲಾಡಳಿತ ಸನ್ನದ್ಧ ಸ್ಥಿತಿಯಲ್ಲಿರಿಸಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಮುದ್ರ ಪಾತ್ರದ ಜನರಿಗೆ ಧ್ವನಿವರ್ಧಕ ಮೂಲಕ ಎಚ್ಚರಿಕೆ ನೀಡಲಾಗಿದೆ. ಸೋಮೇಶ್ವರ ಪುರಸಭೆ ಅಧಿಕಾರಿಗಳಿಂದ ಸಮುದ್ರ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಸಮುದ್ರ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಸೋಮೇಶ್ವರ, ಉಳ್ಳಾಲ, ಉಚ್ಚಿಲ, ಭಾಗದ ಜನರಿಗೆ ಎಚ್ಚರಿಕೆಯಿಂದ ಇರಲು ಮನವಿ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಜನರಿಗೆ ಅಗತ್ಯವಾಗಲು ಕಾಳಜಿ ಕೇಂದ್ರವನ್ನು ತೆರಯಲಾಗಿದೆ.