ತೌಕ್ತೆ ಚಂಡಮಾರುತ ಅಬ್ಬರ: ಭಾರೀ ಮಳೆಗೆ ದ.ಕ ಜಿಲ್ಲೆ ತತ್ತರ
ಮಂಗಳೂರು, ಮೇ 15: ರಾಜ್ಯದ ಕರಾವಳಿ ಭಾಗಕ್ಕೆ ತೌಕ್ತೆ ಚಂಡಮಾರುತ ಅಪ್ಪಳಿಸಿದ್ದು, ಶುಕ್ರವಾರ ರಾತ್ರಿಯಿಂದ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ.
Recommended Video
ಮಂಗಳೂರು ನಗರ ಭಾಗದಲ್ಲಿ ಅತ್ಯಧಿಕ ಮಳೆಯಾಗುತ್ತಿದ್ದು, ತಗ್ಗು ಪ್ರದೇಶದ ರಸ್ತೆಗಳೆಲ್ಲಾ ಜಲಾವೃತವಾಗಿವೆ. ಮಂಗಳೂರು ಕೊಟ್ಟಾರಚೌಕಿ, ಕೆ.ಎಸ್ ರಾವ್ ರೋಡ್, ಪಡೀಲ್, ಆನೆ ಗುಡ್ಡೆ ಮುಂತಾದ ಪ್ರದೇಶಗಳಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದ್ದು, ವಾಹನ ಸಂಚಾರಕ್ಕೂ ಅಡ್ಡಿ ಉಂಟಾಗಿದೆ.
ಚಂಡಮಾರುತ ಪ್ರಭಾವ; ಅಲೆಗಳ ಅಬ್ಬರಕ್ಕೆ ಸ್ಮಶಾನ, ಮನೆ ಸಮುದ್ರ ಪಾಲಾಗುವ ಭೀತಿ
ಅರಬ್ಬೀ ಸಮುದ್ರ ಅಬ್ಬರಿಸಿ ಬೊಬ್ಬೆರಿಯುತ್ತಿದ್ದು, ಭಾರೀ ಗಾತ್ರದ ಅಲೆಗಳು ದಡವನ್ನು ಅಪ್ಪಳಿಸುತ್ತಿವೆ. ಸೋಮೇಶ್ವರ ಭಾಗದಲ್ಲಿ ಕಡಲ್ಕೊರೆತ ತೀವ್ರವಾಗಿದ್ದು, ಸಮುದ್ರ ತೀರದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇಂದು ಮತ್ತು ನಾಳೆ 205 ಮಿ.ಮೀಗೂ ಅಧಿಕ ಮಳೆಯಾಗಲಿದ್ದು, ಜನ ಎಚ್ಚರವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಸಮುದ್ರ ಭಾಗದಲ್ಲಿ ಭಾರೀ ಗಾಳಿ ಬೀಸುತ್ತಿದ್ದರಿಂದ ಹಲವು ಮನೆಗಳ ಹಂಚು ಛಾವಣಿ ಹಾರಿಹೋಗಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಮಳೆ ನಿರಂತರ ಸುರಿದಲ್ಲಿ ಮಂಗಳೂರಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಗಳಿದ್ದು, ತಗ್ಗು ಪ್ರದೇಶದ ಜನರು ಸುರಕ್ಷಿತ ಪ್ರದೇಶಗಳಿಗೆ ಬರುವಂತೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮನವಿ ಮಾಡಿದ್ದಾರೆ.
ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಸ್ವಕೇಂದ್ರಗಳಲ್ಲೇ ಕಡ್ಡಾಯವಾಗಿ ಇರಬೇಕೆಂದು ಸೂಚನೆ ನೀಡಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸೂಚನೆ ನೀಡಿದ್ದಾರೆ.