ಕರಾವಳಿ ಕರ್ನಾಟಕಕ್ಕೆ ಚಂಡಮಾರುತ ಭೀತಿ; ಗಾಳಿಯ ವೇಗ ಗಂಟೆಗೆ 65 ಕಿ.ಮೀ
ಮಂಗಳೂರು, ಮೇ 12: ರಾಜ್ಯದ ಕರಾವಳಿ ಭಾಗಕ್ಕೆ ವರ್ಷದ ಮೊದಲ ಚಂಡಮಾರುತ ಅಪ್ಪಳಿಸಲಿದೆ. ಅರಬ್ಬೀ ಸಮುದ್ರದಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದ ಚಂಡಮಾರುತ ಎದ್ದಿದ್ದು, ಈ ಚಂಡಮಾರುತವನ್ನು "ಟೌಕ್ಟೇ ಚಂಡಮಾರುತ' ಅಂತಾ ಹೆಸರಿಸಲಾಗಿದೆ. ಇದು ಅರಬ್ಬೀ ಸಮುದ್ರದಲ್ಲಿ ಉಂಟಾದ ಅತ್ಯಂತ ಪ್ರಬಲ ಚಂಡಮಾರುತ ಅಂತಾ ಹೇಳಲಾಗಿದೆ.
ಮೇ 14 ರಂದು ಈ ಚಂಡಮಾರುತ ದಕ್ಷಿಣ ಕೇರಳದ ಕರಾವಳಿಗೆ ಅಪ್ಪಳಿಸಲಿದ್ದು, ಮೇ 15ನೇ ತಾರೀಖು ರಾಜ್ಯದ ಕರಾವಳಿ ಭಾಗಕ್ಕೆ ಅಪ್ಪಳಿಸಲಿದೆ. ಮೇ 16ನೇ ತಾರೀಖಿನಂದು ಮಹಾರಾಷ್ಟ್ರದ ಕರಾವಳಿ ಮೂಲಕ ಗುಜರಾತ್ ಕರಾವಳಿಯನ್ನು ತಲುಪಲಿದೆ.
ಮೇ 16ರಂದು ಅಪ್ಪಳಿಸಲಿದೆ ಚಂಡಮಾರುತ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆ ನಿರೀಕ್ಷೆ
ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದ ಗಾಳಿಯ ವೇಗ ಗಂಟೆಗೆ 60-65 ಕಿ.ಮೀ ವೇಗದಲ್ಲಿ ಇರಲಿದೆ ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮೇ 15 ಮತ್ತು ಮೇ 16ನೇ ತಾರೀಖಿನಂದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು ಜಿಲ್ಲೆಗಳು ಸೇರಿದಂತೆ, ಕೊಡಗು, ಸೋಮವಾರ ಪೇಟೆ, ಸಕಲೇಶಪುರ, ಮೂಡಿಗೆರೆ, ಆಗುಂಬೆ, ಶೃಂಗೇರಿ, ತೀರ್ಥಹಳ್ಳಿ, ಕೊಪ್ಪ, ಹೊಸನಗರ, ಸಾಗರ ಸೇರಿದಂತೆ ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ.
ಕರಾವಳಿ ಭಾಗದಲ್ಲಿ ನಾಳೆಯಿಂದ ಒಂದು ವಾರಗಳ ಕಾಲ ಮೀನುಗಾರರು ಕಡಲಿಗಿಳಿಯದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಚನೆ ನೀಡಿದೆ. ಅಲ್ಲದೇ ಈಗಾಗಲೇ ಕಡಲಿಗೆ ಮೀನುಗಾರಿಕೆಗೆ ತೆರಳಲಿರುವ ಮೀನುಗಾರರು ದಡವನ್ನು ಸೇರಬೇಕೆಂದು ಜಿಲ್ಲಾಡಳಿತ ಸ್ಪಷ್ಟ ಸೂಚನೆ ಕೊಟ್ಟಿದೆ.