ಸರಣಿ ಅತ್ಯಾಚಾರಿ, ಹಂತಕ ಸೈನೆಡ್ ಮೋಹನ್ ಕ್ರೈಂ ಕಥಾನಕ
ಮಂಗಳೂರು, ಜೂನ್ 25: ಇಡೀ ದೇಶದ ಗಮನವನ್ನು ತನ್ನತ್ತ ಸೆಳೆಯುವಂತೆ ಮಾಡಿದ್ದ ಸೀರಿಯಲ್ ಕಿಲ್ಲರ್ ಹಾಗು ಸರಣಿ ಅತ್ಯಾಚಾರ ಪ್ರಕರಣಗಳ ಆರೋಪಿ ಸೈನೈಡ್ ಮೋಹನ್ಗೆ 20ನೇ ಪ್ರಕರಣದಲ್ಲೂ ಜೀವಾವಧಿ ಶಿಕ್ಷೆಯಾಗಿದೆ.
Recommended Video
6ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್ ಜಡ್ಜ್ ಸಯೀದುನ್ನುನೀಸಾ ಅವರು ಶಿಕ್ಷೆ ಪ್ರಕಟಿಸಿದರು. 57 ವರ್ಷ ವಯಸ್ಸಿನ ಮೋಹನ್ ಈಗಾಗಲೇ ಹಲವು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ(ಸಾಯುವ ತನಕ) ಅನುಭವಿಸುತ್ತಿದ್ದಾನೆ. 5 ಪ್ರಕರಣಗಳಲ್ಲಿ ಸಾಯುವ ತನಕ ಜೈಲುವಾಸ, ಮಿಕ್ಕ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಪಡೆದುಕೊಂಡಿದ್ದಾನೆ.
ಕೊಲೆ , ಅತ್ಯಾಚಾರ ,ಚಿನ್ನಾಭರಣ ಲೂಟಿ ಸೇರಿದಂತೆ 2003 ರಿಂದ 2009 ರವರೆಗೆ ಮೋಹನ್ ಮೇಲೆ ಸುಮಾರು 20 ಪ್ರಕರಣಗಳಲ್ಲಿ ಸೈನೈಡ್ ಮೋಹನ್ ಅಪರಾಧಿ ಎನಿಸಿಕೊಂಡಿದ್ದಾನೆ. ಅನಿತಾ ಬರಮಾರ್ ಎನ್ನುವರ ಕೊಲೆ ಪ್ರಕರಣದಲ್ಲಿ ಆರೋಪಿ ಮೋಹನ್ ಗೆ ಮರಣದಂಡನೆ ಬದಲಾಗಿ ಸಾಯುವವರೆಗೆ ಸಾಧಾರಣ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಲಾಗಿತ್ತು. ನ್ಯಾಯಮೂರ್ತಿ ರವಿ ಮಳೀಮಠ್ ಹಾಗೂ ಜಾನ್ ಮೈಕೆಲ್ ಖುನ್ಹಾ ಅವರಿದ್ದ ವಿಭಾಗೀಯ ಪೀಠ ಗುರುವಾರ ತೀರ್ಪು ನೀಡಿದ್ದರು.
20ನೇ ಪ್ರಕರಣದಲ್ಲಿ ಬಂದ ತೀರ್ಪೇನು?
ಜಡ್ಜ್ ಸಯೀದುನ್ನುನೀಸಾ ಅವರು ಮೋಹನ್ ಗೆ ಶಿಕ್ಷೆ ಪ್ರಕಟಿಸಿ, ಐಪಿಸಿ ಸೆಕ್ಷನ್ 302 ಅನ್ವಯ 25,000 ರು ದಂಡ, 10 ವರ್ಷ ಶಿಕ್ಷೆ, ಕಿಡ್ನಾಪ್ ಮಾಡಿದ್ದಕ್ಕೆ 5,000 ರು ದಂಡ, 10 ವರ್ಷ ಶಿಕ್ಷೆ, ವಿಷಪ್ರಾಶನ ಮಾಡಿಸಿದ್ದಕ್ಕೆ 5,000 ರು ದಂಡ, 7 ವರ್ಷ ಶಿಕ್ಷೆ, ಅತ್ಯಾಚಾರ ಎಸಗಿದ್ದಕ್ಕೆ 5000 ರು ದಂಡ 5 ವರ್ಷ ಶಿಕ್ಷೆ, ಆಭರಣ ಕಳುವು, ವಂಚನೆ, ಸಾಕ್ಷ್ಯ ನಾಶಕ್ಕೆ 5000 ರು ದಂಡ, ಜೈಲುವಾಸ ವಿಧಿಸಿದರು. ಒಟ್ಟು 46 ಸಾಕ್ಷಿ, 89 ದಾಖಲೆ, 31 ಜಪ್ತಿ ವಸ್ತುಗಳನ್ನು ವಿಚಾರಣೆ ಸಂದರ್ಭದಲ್ಲಿ ಪರಿಗಣಿಸಲಾಗಿದೆ.
ಮಾಣಿ ಗ್ರಾಮ ಪಂಚಾಯತ್ ನಲ್ಲಿ ಯುವತಿ ಕೊಲೆ
ಬಂಟ್ವಾಳ ಮಾಣಿ ಗ್ರಾಮ ಪಂಚಾಯತ್ ನ 25 ವರ್ಷದ ಯುವತಿಯೊಬ್ಬರನ್ನು ಸೈನೈಡ್ ಕಿಲ್ಲರ್ ಮೋಹನ್ ಕುಮಾರ್ ವೆನ್ಲಾಕ್ ಆಸ್ಪತ್ರೆಯಲ್ಲಿ ಪರಿಚಯಿಸಿಕೊಂಡಿದ್ದ. ಈ ಸಂದರ್ಭ ತನ್ನನ್ನು ಸದಾನಂದ ನಾಯ್ಕ ಎಂದು ಮೋಹನ್ ಪರಿಚಯಿಸಿಕೊಂಡಿದ್ದ. ಯುವತಿ ಕೈಯಲ್ಲಿ ಮೊಬೈಲ್ ಇಲ್ಲದ ಕಾರಣ ಆಕೆಯ ನೆರೆಮನೆಯ ವ್ಯಕ್ತಿಯ ಮೊಬೈಲ್ ನಂಬರ್ ಪಡೆದುಕೊಂಡಿದ್. ನಂತರ ಆಕೆಗೆ ಮದುವೆಯಾಗುವುದಾಗಿ ನಂಬಿಸಿದ್ದ. ಬಳಿಕ 2008ರ ಜನವರಿ 2ರಂದು ಪುತ್ತೂರು ಬಸ್ ನಿಲ್ದಾಣಕ್ಕೆ ಚಿನ್ನಾಭರಣ ಧರಿಸಿ ಬರಲು ಹೇಳಿದ್ದ. ಅದರಂತೆ ಯುವತಿ ಬಂದ ಬಳಿಕ ಇಬ್ಬರೂ ಮಡಿಕೇರಿಗೆ ತೆರಳಿ ಅಲ್ಲಿನ ಖಾಸಗಿ ವಸತಿ ಗೃಹದಲ್ಲಿ ರೂಮ್ ಪಡೆದುಕೊಂಡಿದ್ದಾರೆ.
ಲಾಡ್ಜ್ ನಲ್ಲಿ ಮತ್ತೊಂದು ಹೆಸರು, ಸೈನೈಡ್ ಮಾತ್ರೆ
ಲಾಡ್ಜ್ ನಲ್ಲಿ ಮೋಹನ ತನ್ನನ್ನು ಆನಂದ ನಾಯ್ಕ ಎಂದು ಪರಿಚಯಿಸಿ ರಿಜಿಸ್ಟ್ರಿ ಬರೆದಿದ್ದ. ಬಳಿಕ ಯುವತಿಯ ವಿರೋಧದ ಮಧ್ಯೆಯೂ ರಾತ್ರಿ ಅತ್ಯಾಚಾರ ಎಸಗಿದ್ದ.
ಮರುದಿನ ಬೆಳಗ್ಗೆ ಜನವರಿ 3ರಂದು ಮೋಹನ ಯುವತಿಯ ಬಳಿ ‘ನಿನ್ನ ಚಿನ್ನಾಭರಣ, ಹಣ ರೂಮಿನಲ್ಲಿಡು, ನಾವು ಹೊರಗೆ ಹೋಗಿ ಬರೋಣ' ಎಂದು ನಂಬಿಸಿ, ಮಡಿಕೇರಿ ಬಸ್ ನಿಲ್ದಾಣ ಬಳಿ ಕರೆದೊಯ್ದಿದ್ದಾನೆ.
ಬಳಿಕ ಯುವತಿಯ ಬಳಿ ‘ನಿನ್ನೆ ಲೈಂಗಿಕ ಸಂಪರ್ಕ ಮಾಡಿದ ಕಾರಣ ಗರ್ಭಿಣಿಯಾಗದಂತೆ ತಡೆಯಲು ಶೌಚಾಲಯಕ್ಕೆ ಹೋಗಿ ಈ ಮಾತ್ರೆ ಸೇವಿಸು' ಎಂದು ಸೈನೈಡ್ ತುಂಬಿದ ಮಾತ್ರೆ ನೀಡಿದ್ದ. ಇದನ್ನು ನಂಬಿದ ಯುವತಿ ಮಾತ್ರೆ ಸೇವಿಸಿ, ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಳು. ಇದಾದ ಕೂಡಲೇ ಮೋಹನ್ ರೂಮಿಗೆ ತೆರಳಿ ಚಿನ್ನಾಭರಣ ಸಹಿತ ಅಲ್ಲಿಂದ ಪರಾರಿಯಾಗಿದ್ದ.
ಅನಿತಾ ಬರಮಾರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣ
ಅನಿತಾ ಎನ್ನುವರನ್ನು ದಿನಾಂಕ 17-9-2009ರಂದು ಪುತ್ತೂರಿನ ಬಸ್ ನಿಲ್ದಾಣಕ್ಕೆ ಒಡವೆ ಹಾಕಿಕೊಂಡು ಬಾ ಎಂದು ನಂಬಿಸಿ. ಇಬ್ಬರೂ ಮಡಿಕೇರಿಗೆ ಹೋಗಿ ಅಲ್ಲಿನ ವಸತಿ ನಿಲಯದಲ್ಲಿ ತಂಗಿದ್ದರು.
ಯುವತಿಯೊಡನೆ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಬಳಿಕ ಗರ್ಭ ಧರಿಸುವ ಸಾಧ್ಯತೆ ಇದೆ ಹಾಗಾಗಿ ನಾನು ಕೊಡುವ ಗುಳಿಗೆ ತಿಂದರೆ ಗರ್ಭ ನಿಲ್ಲುವುದಿಲ್ಲ ಎಂದು ಸೈನೈಡ್ ನೀಡಿದ್ದ. ಆಕೆ ಅದನ್ನು ತಿಂದು ಮೃತಪಟ್ಟ ಬಳಿಕ. ಆಕೆಯ ಬಳಿ ಇದ್ದ ಚಿನ್ನ, ಮೊಬೈಲ್ನೊಂದಿಗೆ ಮೋಹನ್ ಪರಾರಿಯಾಗಿದ್ದ. ಈ ಪ್ರಕರಣದಲ್ಲಿ ಮೋಹನ್ ಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್ ಮರಣ ದಂಡನೆ ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಮೋಹನ್ ಹೈಕೋರ್ಟ್ ಮೊರೆ ಹೋಗಿದ್ದ. ನಂತರ ಜೀವಾವಧಿ ಶಿಕ್ಷೆ ಪಡೆದುಕೊಂಡಿದ್ದ.
ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದ ಮೋಹನ್
ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದ ಕರಾವಳಿ ಮೂಲದವನೇ ಆಗಿದ್ದು, ಕರ್ನಾಟಕ, ಕೇರಳ ಗಡಿ ಭಾಗದ ಮಹಿಳೆಯರನ್ನು ನಂಬಿಸಿ, ವಂಚಿಸಿ, ಅತ್ಯಾಚಾರ ಎಸಗಿ ಸಯನೈಡ್ ಕೊಟ್ಟು ಕೊಲ್ಲುವ ವಿಧಾನವನ್ನು ಎಲ್ಲಾ ಪ್ರಕರಣಗಳನ್ನು ಬಳಸಿದ್ದ.ಹೀಗಾಗಿ ಸೈನೈಡ್ ಕಿಲ್ಲರ್ ಮೋಹನ ಎಂಬ ಹೆಸರು ಪಡೆದುಕೊಂಡ. ಒಟ್ಟು 20 ಮಹಿಳೆಯರನ್ನು ಸಾಯಿಸಿದ್ದಾನೆ.
ತಪ್ಪಿತಸ್ಥ ಸಯನೈಡ್ ಕಿಲ್ಲರ್ ಮೋಹನನಿಗೆ ಇಬ್ಬರು ಮಕ್ಕಳು ಮತ್ತು ಒಬ್ಬ ಪತ್ನಿ ಇದ್ದಾರೆ. ಶಿಕ್ಷಕ ಮೋಹನ್ ಕುಮಾರ್ ಬಂಟ್ವಾಳದ ಬರಿಮಾರು ಅನಿತಾ ಹಾಗೂ ವಾಮದಪದವಿನ ಲೀಲಾವತಿ ಹಾಗೂ ಸುಳ್ಯ ಪೆರುವಾಜೆಯ ಸುನಂದಾ ಕೊಲೆ ಪ್ರಕರಣಗಳಲ್ಲಿ ಅಪರಾಧಿ ಎಂದು ಮೊದಲಿಗೆ ಸಾಬೀತಾಯಿತು. ಈಗ 20 ಪ್ರಕರಣಗಳಲ್ಲೂ ಅಪರಾಧಿ ಎನಿಸಿದ್ದು ಸಾಯುವ ತನಕ ಜೈಲಿನಲ್ಲಿರಬೇಕಿದೆ.