ಸರಣಿ ಅತ್ಯಾಚಾರಿ ಸೈನೆಡ್ ಮೋಹನ್ 17ನೇ ಪ್ರಕರಣದಲ್ಲೂ ಅಪರಾಧ ಸಾಬೀತು
ಮಂಗಳೂರು, ಜುಲೈ13: ಯುವತಿಯರನ್ನು ನಂಬಿಸಿ, ಅವರ ಮೇಲೆ ಅತ್ಯಾಚಾರ ನಡೆಸಿ, ಸೈನೈಡ್ ಮೂಲಕ ಕೊಲೆ ಮಾಡಿ ತಲೆಮರೆಸಿಕೊಳ್ಳುತ್ತಿದ್ದ ಸರಣಿ ಹಂತಕ ಸೈನೈಡ್ ಮೋಹನ್ ವಿರುದ್ಧದ 17ನೇ ಕೊಲೆ ಪ್ರಕರಣದಲ್ಲೂ ಆರೋಪ ಸಾಬೀತಾಗಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಯುವತಿಯ ಕೊಲೆ ಪ್ರಕರಣದಲ್ಲಿ ಸೈನೈಡ್ ಮೋಹನ್ ಅಪರಾಧ ಮಂಗಳೂರು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 18ರಂದು ಅಂತಿಮ ವಿಚಾರಣೆ ನಡೆದು, ಅಂದು ಆರೋಪಿಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
ಕುಖ್ಯಾತ ದನಗಳ್ಳನನ್ನು ಬಂಧಿಸಿದ ಮಂಗಳೂರು ಪೊಲೀಸರು
2006ರಲ್ಲಿ ಕಾಸರಗೋಡಿನ ಪೈವಳಿಕೆ ಗ್ರಾಮದ 26 ವರ್ಷದ ಯುವತಿಯನ್ನು ಸೈನೈಡ್ ಮೋಹನ್, ತನ್ನ ಹೆಸರು ಸುಧಾಕರ ಎಂದು ಪರಿಚಯಿಸಿಕೊಂಡಿದ್ದ. ತಾನು ವಿಮೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಯುವತಿಯನ್ನು ನಂಬಿಸಿದ್ದ. ಪೈವಳಿಕೆಯ ಮನೆಯೊಂದರಲ್ಲಿ ಕೆಲಸಕ್ಕೆ ಇದ್ದ ಯುವತಿಯನ್ನು ಜೂನ್ 20ರಂದು ಮಂಗಳೂರಿಗೆ ಕರೆಸಿಕೊಂಡಿದ್ದ. ವಿವಾಹಕ್ಕೆ ವರನ ನೋಡುವ ಕಾರಣ ಆಕೆಯ ಜೊತೆಗೆ ಅತ್ತೆ ಕೂಡ ಮಂಗಳೂರಿಗೆ ಬಂದಿದ್ದರು.
ಮಂಗಳೂರಿನ ಸ್ಟೇಟ್ಬ್ಯಾಂಕ್ನಲ್ಲಿ ಈ ಮೂರು ಮಂದಿ ಭೇಟಿಯಾಗಿ ವಿವಾಹದ ಬಗ್ಗೆ ಮಾತುಕತೆ ನಡೆಸಿದ್ದರು. ಬಳಿಕ ಯುವತಿಯನ್ನು ನೇರವಾಗಿ ಮಡಿಕೇರಿಗೆ ಕರೆದುಕೊಂಡು ಹೋದ ಮೋಹನ್ ಕುಮಾರ್, ಅಲ್ಲಿ ವಸತಿಗೃಹದಲ್ಲಿ ವಾಸ್ತವ್ಯ ಹೂಡಿದ್ದನು. ಮರುದಿನ ಆಕೆ ಮೇಲೆ ಅತ್ಯಾಚಾರಗೈದು ಸೈನೈಡ್ ನೀಡಿ ಕೊಲೆ ಮಾಡಿದ್ದ. ಕೊಲೆ ನಂತರ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನಾಭರಣವನ್ನು ದೋಚಿ ಮಂಗಳೂರಿನ ಫೈನಾನ್ಸ್ ಕಂಪನಿಯೊಂದರಲ್ಲಿ ಅಡವಿರಿಸಿದ್ದ.
ಉಡುಪಿಯಲ್ಲಿ ಖಾಸಗಿ ಬಸ್ ನೌಕರನ ಬರ್ಬರ ಹತ್ಯೆ
ಪೊಲೀಸರಿಂದ 2009ರಲ್ಲಿ ಬಂಧಿತನಾದ ಮೋಹನ್ ವಿಚಾರಣೆ ವೇಳೆ, ಸೈನೈಡ್ ನೀಡಿ ಯುವತಿಯರ ಕೊಲೆ ಮಾಡಿರುವುದನ್ನು ಬಾಯಿಬಿಟ್ಟಿದ್ದ. ವಿಚಾರಣೆ ಸಂದರ್ಭ ಮಂಜೇಶ್ವರದ ಯುವತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸರು ಆತನನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದರು.
ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಯುವಕನ ಬಂಧನ
ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಕೊಲೆ ಆರೋಪ ಸಾಬೀತಾಗಿದೆ. ಈ ಪ್ರಕರಣದ ತೀರ್ಪನ್ನು ನ್ಯಾಯಾಧೀಶರು ಜುಲೈ 18 ರಂದು ಪ್ರಕಟಿಸಲಿದ್ದಾರೆ.