ಸರಣಿ ಅತ್ಯಾಚಾರಿ, ಕೊಲೆಗಾರ ಸೈನೈಡ್ ಮೋಹನ್ 4ನೇ ಕೇಸಿನಲ್ಲೂ ದೋಷಿ
ಮಂಗಳೂರು, ಸೆಪ್ಟೆಂಬರ್ 14: ದೇಶವನ್ನೇ ಬೆಚ್ಚಿ ಬೀಳಿಸಿದ ಸಿರಿಯಲ್ ಕಿಲ್ಲರ್, ಸರಣಿ ಅತ್ಯಾಚಾರ ಪ್ರಕರಣಗಳ ಆರೋಪಿ ಸೈನೈಡ್ ಮೋಹನ್ ನಾಲ್ಕನೇ ಪ್ರಕರಣದಲ್ಲೂ ದೋಷಿ ಎನ್ನುವುದು ಸಾಬೀತಾಗಿದೆ.
ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಬುಧವಾರ ಕೊಲೆ ಹಾಗೂ ಅತ್ಯಾಚಾರದ ನಾಲ್ಕನೇ ಪ್ರಕರಣದಲ್ಲೂ ಸೈನೈಡ್ ಮೋಹನ್ ದೋಷಿ ಎಂದು ತೀರ್ಪು ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಯ ಪ್ರಮಾಣವನ್ನು ಸೆ.15ರಂದು ನ್ಯಾಯಾಲಯ ಪ್ರಕಟಿಸಲಿದೆ.
ಸೈನೈಡ್ ಮೋಹನ್ 2004ರಿಂದ 2009ರ ಅವಧಿಯಲ್ಲಿ ಒಟ್ಟು 20 ಮಂದಿ ಯುವತಿಯರನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ. ಇದರಲ್ಲಿ 2013ರಲ್ಲಿ ಈತ ಒಟ್ಟು ಮೂರು ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದಾನೆ. ಇದೀಗ ನಾಲ್ಕನೇ ಪ್ರಕರಣದಲ್ಲಿಯೂ ದೋಷಿ ಎಂಬುದು ಸಾಬೀತಾಗಿದೆ.
ಪುತ್ತೂರು ತಾಲೂಕಿನ ಪಟ್ಟೆಮಜಲು ಎಂಬಲ್ಲಿನ 22 ವರ್ಷದ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಮೋಹನ್ನನ್ನು ದೋಷಿ ಎಂದು ತೀರ್ಪು ನೀಡಿದೆ. ಪಟ್ಟೆಮಜಲಿನ ಬೀಡಿ ಕಟ್ಟುವ ಯುವತಿಯನ್ನು ಮೋಹನ, ತನ್ನ ಹೆಸರು ಆನಂದ್ ಎಂದು
ಹೇಳಿ ಪರಿಚಯಿಸಿಕೊಂಡಿದ್ದ. ನಂತರ ಮೊಬೈಲ್ ನಂಬರ್ ಪಡೆದುಕೊಂಡು ಸಂಪರ್ಕ ಬೆಳೆಸಿದ್ದ. ಆಕೆಯನ್ನು ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ನಂಬಿಸಿದ್ದ.
ನಂತರ ಆಕೆಯನ್ನು 17-9-2009ರಂದು ಪುತ್ತೂರಿನ ಬಸ್ ನಿಲ್ದಾಣಕ್ಕೆ ಒಡವೆ ಹಾಕಿಕೊಂಡು ಬಾ ಎಂದು ನಂಬಿಸಿ. ಇಬ್ಬರೂ ಮಡಿಕೇರಿಗೆ ಹೋಗಿ ಅಲ್ಲಿನ ವಸತಿ ನಿಲಯದಲ್ಲಿ ತಂಗಿದ್ದರು. ಯುವತಿಯೊಡನೆ ಲೈಂಗಿಕ ಸಂಪರ್ಕ ನಡೆಸಿ ಇದರಿಂದ ಗರ್ಭ ಧರಿಸುವ ಸಾಧ್ಯತೆ ಇದೆ ಹಾಗಾಗಿ ನಾನು ಕೊಡುವ ಗುಳಿಗೆ ತಿಂದರೆ ಗರ್ಭ ನಿಲ್ಲುವುದಿಲ್ಲ ಎಂದು ಸೈನೈಡ್ ನೀಡಿದ್ದ.
ಅದನ್ನು ತಿಂದು ಯುವತಿ ಶೌಚಾಲಯದಲ್ಲಿ ಮೃತಪಟ್ಟ ಬಳಿಕ. ಆಕೆಯ ಬಳಿ ಇದ್ದ ಚಿನ್ನ, ಮೊಬೈಲ್ನೊಂದಿಗೆ ಮೋಹನ್ ಪರಾರಿಯಾಗಿದ್ದ. ಮಡಿಕೇರಿಯಲ್ಲಿ ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಾಗಿತ್ತು.
ಬಂಟ್ವಾಳದ ಬರಿಮಾರಿನ ಯುವತಿಯ ಕೊಲೆ ಪ್ರಕರಣದ ಪತ್ತೆಯೊಂದಿಗೆ ಸೆನೈಡ್ ಮೋಹನನ ಸರಣಿ ಹತ್ಯೆ ವಿಚಾರ ಬಯಲಾಗಿತ್ತು. ಸೈನೈಡ್ ಮೋಹನನ ಬಂಧನದೊಂದಿಗೆ ಇತರ ಪ್ರಕರಣಗಳೂ ಬೆಳಕಿಗೆ
ಬಂದಿದ್ದವು. ಆತನ ಮನೆ ಶೋಧದ ವೇಳೆ ಪಟ್ಟೆಮಜಲಿನ ಯುವತಿಯ ಮೊಬೈಲ್ ಕೂಡಾ ಪತ್ತೆಯಾಗಿತ್ತು.