ವಿಎಚ್ಪಿ, ಭಜರಂಗದಳ ತ್ರಿಶೂಲ ದೀಕ್ಷೆ ನೀಡಿದ ನಂತರ ಅಪರಾಧ ಪ್ರಕರಣ ಹೆಚ್ಚಳ: ಯು.ಟಿ. ಖಾದರ್
ಮಂಗಳೂರು, ನ.27: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಮಂಗಳೂರಿನಲ್ಲಿ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ಮಾಡಿದ ಬಳಿಕ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಜಾಸ್ತಿಯಾಗಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ತ್ರಿಶೂಲ ದೀಕ್ಷೆ ಮಾಡಿದ ಉದ್ದೇಶ ಏನು? ದೀಕ್ಷೆ ನೀಡಿದ ಬಳಿಕ ಜಿಲ್ಲೆಯಲ್ಲಿ ಹಲ್ಲೆ ಪ್ರಕರಣಗಳು ಹೆಚ್ಚಾಗಲು ಕಾರಣ ಯಾರು? ಈ ಬಗ್ಗೆ ಸರ್ಕಾರ ತನಿಖೆ ಮಾಡಬೇಕು ಎಂದು ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದರು.
ಜಿಲ್ಲೆಯ ಕೆಲವಡೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳನ್ನು ಗಮನಿಸಿದಾಗ, ದೀಕ್ಷೆ ಸಂಧರ್ಭದಲ್ಲಿ ನೀಡಿದ ತ್ರಿಶೂಲ ಬಳಕೆ ಮಾಡಲಾಗುತ್ತಿದೆ ಎಂಬುದು ಕಂಡುಬರುತ್ತಿದೆ. ದೀಕ್ಷೆ ನೀಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಜನರ ಕೈಗೆ ಪೆನ್ನು ಕೊಡುವುದು ಬಿಟ್ಟು, ತ್ರಿಶೂಲ ಕೊಟ್ಟರೆ ಏನು ಗತಿ. ಇವರು ಬಹಿರಂಗವಾಗಿ ಕೊಟ್ಟಿದ್ದಾರೆ. ಇನ್ನೂ ಕೆಲವರು ಗುಟ್ಟಾಗಿ ಕೊಡುತ್ತಾರೆ ಎಂದು ಯುಟಿ ಖಾದರ್ ಆರೋಪ ಮಾಡಿದ್ದಾರೆ.
ಕರಾವಳಿಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಅಹಿತಕರ ಘಟನೆಗಳು ನಡೆಯುತ್ತಿದೆ. ಸರ್ಕಾರ ಪೊಲೀಸ್ ಇಲಾಖೆಗೆ ಕೈ ಕಟ್ಟಿ ಹಾಕಿದೆ. ಅಲ್ಲದೇ ರಾಜಕೀಯ ಒತ್ತಡಗಳು ಅಧಿಕಾರಿಗಳನ್ನು ಕೈ ಕಟ್ಟುವಂತೆ ಮಾಡಿದೆ. ಅಧಿಕಾರಿಗಳು ರಾಜಕಾರಣಿಗಳ ಮಾತು ಮೀರಿ ಕ್ರಮ ವಹಿಸಿದರೆ ಅವರಿಗೆ ವರ್ಗಾವಣೆ ಶಿಕ್ಷೆಯಾಗುತ್ತದೆ ಎಂದು ಆರೋಪಿದರು.
ಜಿಲ್ಲೆಯಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕೋಮುದಳ್ಳುರಿ ಸೃಷ್ಟಿ ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಬಹಿರಂಗವಾಗಿಯೇ ಜಿಲ್ಲಾಧಿಕಾರಿ ಕೊರಳಪಟ್ಟಿ ಹಿಡಿಯುತ್ತೇವೆ, ಪೊಲೀಸರ ಕಾಲು ಮುರಿಯುತ್ತೇವೆ ಎಂದು ಬೆದರಿಕೆ ಹಾಕಲಾಗುತ್ತಿದೆ. ಇದೆಲ್ಲಾ ಬಿಜೆಪಿ ಸರ್ಕಾರ ಜನರಿಗೆ ನೀಡಿದ ಕೊಡುಗೆಯಾಗಿದೆ ಎಂದು ಖಾದರ್ ಲೇವಡಿ ಮಾಡಿದ್ದಾರೆ.
ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಎರಡು ಧರ್ಮದ ವಿದ್ಯಾರ್ಥಿಗಳ ನಡುವೆ ಗಲಾಟೆಯಾಗಿದೆ. ಎರಡೂ ಕಡೆಯ ವಿದ್ಯಾರ್ಥಿಗಳು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ಗಲಾಟೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಸಂಘಟನೆಗಳ ಪ್ರತಿನಿಧಿಗಳು ಪ್ರಚೋದನೆ ನೀಡಿದ್ದಾರೆ. ರಾಜಕೀಯ ಮೂಲಕ ಅಶಾಂತಿ ಸೃಷ್ಟಿಸುವ ಕೆಲಸ ಆಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕಾನೂನು ಸುವ್ಯವಸ್ಥೆ ಬಗ್ಗೆ ಅಧಿಕಾರಿಗಳ ಸಭೆ ಕರೆದು ಜಿಲ್ಲೆಯ ಕಾನೂನು ಸುವ್ಯವಸ್ಥೆ ಸರಿಮಾಡಬೇಕೆಂದು ಖಾದರ್ ಆಗ್ರಹಿಸಿದ್ದಾರೆ..
ಇತ್ತೀಚೆಗೆ ಉಳ್ಳಾಲದಲ್ಲಿ ನಡೆದ ಎಸ್ಡಿಪಿಐ ಪಕ್ಷದ ನೂತನ ಕಛೇರಿಯ ಉದ್ಘಾಟನಾ ಸಮಾರಂಭದಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬೂಬುಕ್ಕರ್ ಕುಳಾಯಿ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಯುಟಿ ಖಾದರ್, ಕೋಮುವಾದಿಗಳು ತಲೆ ಕಡಿಯುತ್ತೇನೆ, ಕಾಲು ಕಡಿಯುತ್ತೇನೆ ಎಂದು ಹೇಳುವುದು ಇದೇ ಮೊದಲ ಬಾರಿಯಲ್ಲ. ಕೆಲವು ಪಕ್ಷದ ಡಿಎನ್ಎ ದ್ವೇಷದಿಂದ ಕೂಡಿದೆ. ಕೆಲವು ಪಕ್ಷಗಳು ಹುಟ್ಟಿಕೊಂಡಿದ್ದೇ ದ್ವೇಷ ಸಾಧಿಸಲು ಎಂಬಂತಾಗಿದೆ. ಕೋಮುವಾದಿಗಳು ನನ್ನನ್ನು ಬೆದರಿಸೋದು ಇದೇ ಮೊದಲ ಬಾರಿ ಅಲ್ಲ. ಸಾರ್ವಜನಿಕ ಜೀವನದಲ್ಲಿರುವ ನಾನು ಯಾರ ಬೆದರಿಕೆಗೂ ಜಗ್ಗುವುದಿಲ್ಲ. ಸೌಹಾರ್ದತೆಯೇ ನನ್ನ ಬದುಕಿನ ಮೊದಲ ಆದ್ಯತೆ ಎಂದು ಯುಟಿ ಖಾದರ್ ಹೇಳಿದರು.