ದಕ್ಷಿಣ ಕನ್ನಡ; ಜಿಲ್ಲೆಯ ಕಟ್ಟ ಕಡೆ ಹಳ್ಳಿ ತಲುಪಿದ ಲಸಿಕೆ
ಮಂಗಳೂರು, ಜೂನ್ 24; ದಕ್ಷಿಣ ಕನ್ನಡ ಜಿಲ್ಲೆಯ ಕಟ್ಟಕಡೆಯ ಹಳ್ಳಿಗೂ ಕೊರೊನಾ ಲಸಿಕೆ ತಲುಪಿದೆ. ಸೋಂಕಿನ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಿ ರಾಜ್ಯಕ್ಕೆ ಮಾದರಿ ಗ್ರಾಮವಾಗಿ ಗುರುತಿಸಿದ ಬೆಳ್ತಂಗಡಿಯ ನೆರಿಯ ಗ್ರಾಮದ ಬಾಂಜಾರುಮಲೆ ಊರಿಗೆ, ಜಿಲ್ಲಾಡಳಿತವೇ ಲಸಿಕೆ ತಲುಪಿಸುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಿದೆ.
ಪಶ್ಚಿವ ಘಟ್ಟದ ತಪ್ಪಲಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಟ್ಟಕಡೆಯ ಹಳ್ಳಿಯಾದ ಬಾಂಜಾರು ಮಲೆಯಲ್ಲಿ 180ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಸುಮಾರು 40 ಕಿ. ಮೀ. ದೂರವಿರುವ ಬಾಂಜಾರುಮಲೆಯಲ್ಲಿ ಎರಡೂ ಅಲೆಯಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ಕಾಣಿಸಿಕೊಂಡಿಲ್ಲ.
ಮಂಗಳೂರು; ಖಾಸಗಿ ಬಸ್ ಓಡಿಸಲ್ಲ ಎಂದ ಮಾಲೀಕರು!
ಊರಿಗೆ ಬೇಕಾದ ಅಗತ್ಯ ಸಾಮಾನುಗಳನ್ನು ಊರಿನ ಇಬ್ಬರು ವಾರದ ಒಂದು ದಿನ ಪೇಟೆಯಿಂದ ತಂದು ಕೊಡುತ್ತಾರೆ. ಊರಿಂದ ಯಾರೂ ಹೊರಗೆ ಹೋಗದೆ, ಊರಿಗೆ ಹೊರಗಿನಿಂದ ಯಾರೂ ಬರದ ಹಾಗೆ ಅಖಿಲಿತ ನಿಯಮ ಮಾಡಿ ಕೊರೊನಾ ವಿರುದ್ಧ ಜನರು ಒಗ್ಗಟ್ಟಿನ ಹೋರಾಟ ಮಾಡಿದ್ದರು.
ರಾಜ್ಯಕ್ಕೆ ಮಾದರಿಯಾದ ಬಾಂಜಾರುಮಲೆ ಗ್ರಾಮ; ಒಂದೂ ಕೋವಿಡ್ ಪ್ರಕರಣವಿಲ್ಲ
ಬಾಂಜಾರುಮಲೆ ಜನರ ಕೊರೊನಾ ಜಾಗೃತಿಯ ಬಗ್ಗೆ ಜಿಲ್ಲಾಡಳಿತ ಮೆಚ್ಚುಗೆ ಸೂಚಿಸಿತ್ತು. ಜಿಲ್ಲೆಯ ಮಾದರಿ ಗ್ರಾಮ ಬಾಂಜಾರುಮಲೆ ಅಂತಾ ಹೇಳಿತ್ತು. ಈ ಸಂದರ್ಭದಲ್ಲಿ ಗ್ರಾಮದ ಜನರಿಗೆ ವಿಶೇಷ ಉಡುಗೊರೆ ಘೋಷಿಸಿದ್ದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಹಳ್ಳಿಗೇ ಹೋಗಿ ಲಸಿಕೆ ನೀಡುತ್ತೇವೆ. ಊರಿನ ಜನರು ಯಾರೂ ಲಸಿಕೆಗಾಗಿ ಹೊರಗೆ ಬರುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು.
ಕೊಟ್ಟ ಮಾತನ್ನು ಜಿಲ್ಲಾಧಿಕಾರಿಗಳು ಉಳಿಸಿಕೊಂಡಿದ್ದು, ಆರೊಗ್ಯ ಇಲಾಖಾ ಸಿಬ್ಬಂದಿಗಳು ಬಾಂಜಾರುಮಲೆಯನ್ನು ತಲುಪಿ ಲಸಿಕೆ ಹಂಚಿಕೆ ಮಾಡಿದ್ದಾರೆ. ಚಾರ್ಮಾಡಿ ಘಾಟ್ ಪ್ರದೇಶದ 9ನೇ ತಿರುವಿನಿಂದ ಕಾಡು ಮಾರ್ಗವಾಗಿ, ಬೆಟ್ಟಗುಡ್ಡಗಳನ್ನು ಇಳಿದು, ಸೇತುವೆಯನ್ನು ದಾಟಿ ಬಾಂಜಾರುಮಲೆ ಊರನ್ನು ಆರೋಗ್ಯ ಇಲಾಖಾ ಸಿಬ್ಬಂದಿ ತಲುಪಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಈ ಗ್ರಾಮ ಪಂಚಾಯಿತಿ ಮಾದರಿ!
ಬಾಂಜಾರುಮಲೆಯಲ್ಲಿ 60ಕ್ಕೂ ಹೆಚ್ಚು ಜನ 45ವರ್ಷಕ್ಕಿಂತ ಮೇಲ್ಪಟ್ಟ ಜನರಿದ್ದಾರೆ. ಮೊದಲ ಹಂತದಲ್ಲಿ ಈ 60 ಮಂದಿಗೆ ಕೊರೊನಾ ಲಸಿಕೆ ವಿತರಣೆ ಮಾಡಲಾಗಿದೆ. ತಮ್ಮೂರಿಗೇ ಬಂದು ಲಸಿಕೆ ನೀಡಿದಕ್ಕಾಗಿ ಬಾಂಜಾರುಮಲೆ ಜನರು ಜಿಲ್ಲಾಡಳಿತಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
"ಜಿಲ್ಲಾಡಳಿತ ವಾಕ್ಸಿನ್ ಇಲ್ಲಿಗೇ ಬಂದು ನೀಡಿರುವುದರಿಂದ ತುಂಬಾ ಉಪಕಾರಿಯಾಗಿದೆ. ಇಲ್ಲವಾದಲ್ಲಿ ವಾಕ್ಸಿನ್ಗಾಗಿ 40 ಕಿ. ಮೀ. ದೂರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಬೇಕಿತ್ತು. ರಸ್ತೆ ಸರಿಯಿಲ್ಲ, ಹೋಗುವುದಕ್ಕೂ ತುಂಬಾ ಕಷ್ಟವಾಗುತಿತ್ತು" ಎಂದು ಗ್ರಾಮದ ನಿವಾಸಿ ನಾಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ.