ವಿಡಿಯೋ: ಮಹಿಳಾ ಪೊಲೀಸ್ಗೆ ಮಾಸ್ಕ್ ಸರಿ ಹಾಕುವಂತೆ ಸೂಚಿಸಿದ ವೃದ್ಧೆ
ಮಂಗಳೂರು, ಏಪ್ರಿಲ್ 23: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಜಾರಿ ಮಾಡಿದೆ. ಈ ಹಿನ್ನಲೆಯಲ್ಲಿ ಅಗತ್ಯ ಸೇವಾ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಬಂದ್ ಮಾಡೋಕೆ ರಾಜ್ಯ ಸರ್ಕಾರ ನಿರ್ದೇಶಿಸಿದೆ. ರಾಜ್ಯ ಸರ್ಕಾರದ ಆದೇಶದ ಬಳಿಕವೂ ಮಂಗಳೂರಿನಲ್ಲಿ ಹಲವು ಅಂಗಡಿಗಳು ತೆರೆದಿದ್ದರಿಂದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಧಿಡೀರ್ ಕಾರ್ಯಾಚರಣೆ ಮಾಡಿದರು.
ಮಂಗಳೂರು ಡಿಸಿಪಿ ಹರಿರಾಂ ಶಂಕರ್ ಜೊತೆ ಫೀಲ್ಡ್ ಗಿಳಿದ ಕಮೀಷನರ್ ಶಶಿಕುಮಾರ್ ಮಂಗಳೂರು ನಗರದ ಪ್ರಮುಖ ಭಾಗಗಳಲ್ಲಿ ರೌಂಡ್ಸ್ ಮಾಡಿದ್ದಾರೆ. ನಗರದ ಕ್ಲಾಕ್ ಟವರ್ನಿಂದ ಕಾರ್ಯಾಚರಣೆ ಆರಂಭಿಸಿದ ಕಮೀಷನರ್ ಮಾರ್ಕೆಟ್, ಕೆಎಸ್ ರಾವ್ ರೋಡ್, ಹಂಪನಕಟ್ಟೆ, ಬಲ್ಮಠ, ಪಳ್ನೀರ್, ಮಿಲಾಗ್ರಿಸ್, ಕಂಕನಾಡಿ ತನಕವೂ ಕಾರ್ಯಾಚರಣೆ ಮಾಡಿ ಆದೇಶ ಉಲ್ಲಂಘಿಸಿದವರ ವಿರುದ್ಧ ಕೇಸ್ ಹಾಕಲು ಸೂಚನೆ ನೀಡಿದರು.
ಸರ್ಕಾರದ ನಿಯಮ ಉಲ್ಲಂಘಿಸಿ ಕೆಲವು ಆಭರಣ ಮಳಿಗೆಗಳು ತೆರೆದಿದ್ದು ಕಮೀಷನರ್ ಟೀಂನ್ನು ನೋಡಿ ಶಟರ್ ಹಾಕಲಾರಂಭಿಸಿದರು.ಆದರೆ ಕಾರ್ಯಾಚರಣೆ ಮುಂದುವರಿಸಿದ ಕಮೀಷನರ್ ಶಟರ್ ತೆರೆಯುವಂತೆ ಸೂಚಿಸಿ ಆಭರಣ ಮಳಿಗೆ ಒಳಭಾಗದಲ್ಲಿದ್ದ ಸಿಬ್ಬಂದಿ ಮತ್ತು ಮ್ಯಾನೇಜರ್ ಮೇಲೆ ಕೇಸ್ ದಾಖಲಿಸಲು ಸೂಚನೆ ನೀಡಿದ್ದಾರೆ. ಕಮೀಷನರ್ ಶಶಿಕುಮಾರ್ ತಂಡ ಕಾರ್ಯಾಚರಣೆ ಮಾಡುತ್ತಿದ್ದಂತೆಯೇ ಹಲವು ಅಂಗಡಿಗಳ ಮಾಲಕರು ಶಟರ್ ಎಳೆದು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ ಘಟನೆಯೂ ನಡೆದಿದೆ.
ಇದೇ ವೇಳೆ ಕಮೀಷನರ್ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿದವರಿಗೆ ಗುಲಾಬಿ ಹೂವು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ. ಬಸ್ ನಿಲ್ಲಿಸಿ ಕಾರ್ಯಾಚರಣೆ ಮಾಡಿದ ಕಮೀಷನರ್, ಬಸ್ನಲ್ಲಿ ಎಲ್ಲರೂ ಮಾಸ್ಕ್ ಧರಿಸಿರೋದ್ರಿಂದ ಎಲ್ಲರಿಗೂ ಗುಲಾಬಿ ಹೂವು ನೀಡಿ ಅಭಿನಂದಿಸಿದ್ದಾರೆ. ನಗರ ಪಳ್ನೀರ್ನಲ್ಲಿ ರಸ್ತೆಯಲ್ಲಿ ಮಾಸ್ಕ್ ಧರಿಸಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಗೆ ಮಹಿಳಾ ಪೊಲೀಸ್ ಹೂವು ನೀಡಿ ಅಭಿನಂದಿಸಿದ ವೇಳೆ ಮಹಿಳಾ ಪೊಲೀಸ್ ಮಾಸ್ಕ್ ಸರಿ ಹಾಕದೇ ಇದ್ದಿದ್ದರಿಂದ ವೃದ್ಧೆ ಮಹಿಳಾ ಪೊಲೀಸ್ಗೆ ಮಾಸ್ಕ್ ಸರಿ ಧರಿಸುವಂತೆ ಸೂಚಿಸಿದ ಪ್ರಸಂಗವೂ ನಡೆದಿದೆ.
ಶನಿವಾರ ಮತ್ತು ಆದಿತ್ಯವಾರ ಸಂಪೂರ್ಣ ಕರ್ಫ್ಯೂ ಇರೋದ್ರಿಂದ ಜನ ಇಂದೇ ಅಂಗಡಿ ಮುಂಗಟ್ಟುಗಳಿಗೆ ಮುಗಿಬಿದ್ದು, ಖರೀದಿ ಮಾಡುವ ದೃಶ್ಯ ನಗರ ಭಾಗದಲ್ಲಿ ಕಂಡುಬಂದಿದೆ.