ರಾಜ್ಯಕ್ಕೆ ಮಾದರಿಯಾದ ಬಾಂಜಾರುಮಲೆ ಗ್ರಾಮ; ಒಂದೂ ಕೋವಿಡ್ ಪ್ರಕರಣವಿಲ್ಲ
ಮಂಗಳೂರು, ಜೂನ್ 3: ಕೊರೊನಾ ಸೋಂಕಿನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯ ಜನ ಒಗ್ಗಟ್ಟಿನ ಹೋರಾಟ ಮಾಡಿ ಮಾದರಿಯಾಗಿದ್ದಾರೆ. ಕೊರೊನಾ ವಿಶ್ವವನ್ನು ಬಾಧಿಸಿದರೂ ಕುಗ್ರಾಮಕ್ಕೆ ಕೊರೊನಾ ಸೋಂಕಿಗೆ ಪ್ರವೇಶ ಇಂದಿಗೂ ಸಿಕ್ಕಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಂಜಾರುಮಲೆ ಕೊರೊನಾ ಮುಕ್ತವಾಗಿದ್ದು, ಬಾಂಜಾರುಮಲೆ ಗ್ರಾಮದಲ್ಲಿ ಎರಡೂ ಕೊರೊನಾ ಅಲೆಯಲ್ಲೂ ಒಂದೇ ಒಂದು ಕೊರೊನಾ ಪ್ರಕರಣ ದಾಖಲಾಗಿಲ್ಲ ಅನ್ನುವುದೇ ವಿಶೇಷವಾಗಿದೆ.
ಬಂಜಾರುಮಲೆ ಗ್ರಾಮದಲ್ಲಿ 40ಕ್ಕೂ ಹೆಚ್ಚು ಕುಟುಂಬದ 170ಕ್ಕೂ ಹೆಚ್ಚು ಜನರಿದ್ದಾರೆ. ಪೇಟೆಯಿಂದ ಅಂತರ ಕಾಯ್ದುಕೊಂಡಿರುವ ಕುಗ್ರಾಮದ ಜನರು ಒಂದೂವರೆ ವರ್ಷದಿಂದ ಪೇಟೆಗೇ ಹೋಗಿಲ್ಲ. ಗ್ರಾಮದ ಜನರಿಗೆ ಗ್ರಾಮದ ಇಬ್ಬರು ಎಲ್ಲರಿಗೂ ಪೇಟೆಯಿಂದ ದಿನಸಿ ವಸ್ತು ತರುತ್ತಾರೆ. ಎಲ್ಲಾ ಮನೆಯಿಂದ ದಿನಸಿ ಚೀಟಿ ಸಂಗ್ರಹಿಸಿ ಅಂಗಡಿಯಿಂದ ತಂದು ಕೊಡ್ತಾರೆ. ಹೀಗೆ ಬೇರೆ ಜನರಿಂದ ಅಂತರ ಕಾಯ್ದುಕೊಂಡು ಮಾದರಿಯಾಗಿದ್ದಾರೆ.
ಬಂಜಾರುಮಲೆ ಗ್ರಾಮಸ್ಥರು ಅವರೇ ಅಲಿಖಿತ ನಿಯಮ ಮಾಡಿದ್ದಾರೆ. ಗ್ರಾಮದೊಳಗೆ ಹೊರಗಿನಿಂದ ಯಾರೂ ಬರುವಂತಿಲ್ಲ, ಗ್ರಾಮದಿಂದ ಯಾರೂ ಹೊರಹೋಗುವಂತಿಲ್ಲ ಅಂತಾ ಸ್ವಯಂ ಶಿಸ್ತು ಪಾಲಿಸಿ ಕೊರೊನಾವನ್ನು ಗ್ರಾಮದೊಳಗೆ ನುಸುಳಲು ಬಿಟ್ಟಿಲ್ಲ.
ರಾಜ್ಯಕ್ಕೆ ಮಾದರಿಯಾದ ಬಾಂಜಾರುಮಲೆ ಗ್ರಾಮದ ಜನರು ಮಾದರಿಯಾಗಿದ್ದು, ಈ ಗ್ರಾಮ ಬೆಳ್ತಂಗಡಿ ನಗರದಿಂದ 35 ಕಿ.ಮೀ ದೂರವಿದೆ. ಆಹಾರಕ್ಕೆ ಬೇಕಾದ ತರಕಾರಿಗಳನ್ನು ಗ್ರಾಮಸ್ಥರು ತಾವೇ ಬೆಳೆಯುತ್ತಾರೆ. ಕೊರೊನಾ ಸೋಂಕಿನ ತಾಂಡವದ ನಡುವೆಯೂ ಗ್ರಾಮಸ್ಥರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ನಿಸರ್ಗ ಸಹಜ ಆಹಾರ, ಶುದ್ಧ ಗಾಳಿ, ನೀರು ಗ್ರಾಮದ ಜನರ ಆರೋಗ್ಯದ ಗುಟ್ಟಾಗಿದೆ.
ಕೊರೊನಾ ಮೊದಲ ಅಲೆಯಲ್ಲೂ ಎಲ್ಲರ ಸ್ವಾಬ್ ಟೆಸ್ಟ್ ಎಲ್ಲರ ವರದಿಯೂ ನೆಗೆಟಿವ್ ಬಂದಿದ್ದು, ಎರಡನೇ ಅಲೆಯಲ್ಲೂ ಎಲ್ಲರ ಸ್ವಾಬ್ ಟೆಸ್ಟ್, ಎಲ್ಲರ ವರದಿಯೂ ನೆಗೆಟಿವ್ ಆಗಿದೆ. ವಿಶೇಷ ಎಂಬಂತೆ ವರ್ಷದಿಂದ ಯಾವುದೇ ಕಾರ್ಯಕ್ರಮವನ್ನು ಗ್ರಾಮಸ್ಥರು ಊರೊಳಗೆ ಆಯೋಜಿಸಿಲ್ಲ. ಊರಿನ ಜನ ಕಠಿಣ ಜೀವನ, ಸ್ವಯಂ ಶಿಸ್ತುನಿಂದ ಕೊರೊನಾ ಊರಿಂದ ಹೊರಗಡೆ ಇದೆ ಅನ್ನೋದೇ ಗ್ರಾಮಸ್ಥರ ಹೆಮ್ಮೆ.