ಮಂಗಳೂರು: ಗಂಡ-ಹೆಂಡತಿ ಆತ್ಮಹತ್ಯೆ ಯತ್ನ, ಪತಿ ಸಾವು, ಪತ್ನಿ ಸ್ಥಿತಿ ಗಂಭೀರ
ಘಟನೆಯೊಂದರಲ್ಲಿ ಪತಿ-ಪತ್ನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಪತಿ ಸಾವಿಗೀಡಾಗಿದ್ದರೆ, ಪತ್ನಿ ಬದುಕುಳಿದಿದ್ದಾರೆ. ಇನ್ನೊಂದು ಘಟನೆಯಲ್ಲಿ ಬೈಕ್ ಗುದ್ದಿ ಪಾದಾಚಾರಿಯೊಬ್ಬರು ಸಾವಿಗೀಡಾಗಿದ್ದಾರೆ.
ಮಂಗಳೂರು, ಜನವರಿ 27 : ಪತಿ-ಪತ್ನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಪತಿ ಸಾವಿಗೀಡಾದ ದುರ್ಘಟನೆ ಪುತ್ತೂರು ತಾಲೂಕಿನ ಮುಗೇರಡ್ಕ ಸಮೀಪದ ಪರಾರಿ ಎಂಬಲ್ಲಿ ನಡೆದಿದೆ.
ಮೃತರನ್ನು ಮೋಹನ್ ದಾಸ್(30) ಎಂದು ಗುರುತಿಸಲಾಗಿದೆ. ಅವರ ಪತ್ನಿ ಲಕ್ಷೀ(27) ಗಂಭೀರ ಸ್ಥಿತಿಯಲ್ಲಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ-ಪತ್ನಿ ಅನ್ಯೋನ್ಯವಾಗಿಯೇ ಇದ್ದರೆನ್ನಲಾಗಿದೆ. ಆತ್ಮಹತ್ಯೆ ಕೃತ್ಯಕ್ಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. [ವಿಡಿಯೋ : ತನ್ನ ಮಗುವನ್ನೇ ಮೆಟ್ಟಿಲ ಮೇಲಿಂದ ಬಿಸಾಕಿದ ತಾಯಿ]
ರಸ್ತೆ ಅಪಘಾತ, ಪಾದಚಾರಿ ಸಾವು
ಆಕ್ಟಿವಾ ವಾಹನ ಢಿಕ್ಕಿ ಹೊಡೆದಿದ್ದರಿಂದ ರಸ್ತೆ ದಾಟುತ್ತಿದ್ದ ಪಾದಚಾರಿ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಮೆಲ್ಕಾರ್ ನಲ್ಲಿ ನಡೆದಿದೆ.
ಮೃತ ಮೋಹನ್ ರೈ ಮುಡಿಪುನಲ್ಲಿರುವ ಇನ್ಫೋಸಿಸ್ ನಲ್ಲಿ ಕಾವಲುಗಾರ ವಿಭಾಗದ ಉದ್ಯೋಗಿಯಾಗಿದ್ದರು ಎಂದು ತಿಳಿದು ಬಂದಿದೆ. ಇವರು ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆಯವರಾಗಿದ್ದು , ಪ್ರಸ್ತುತ ಇರಾ ಗ್ರಾಮದ ಕುರಿಯಾಡಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ. [ಮಗುವನ್ನು ಬೆಂಕಿಗೆಸೆದ ಪ್ರಕರಣ: ಮನೆಗೆ ಮರಳಿದ ತಾಯಿ]