ಕೊರೊನಾ ಶ್ರೀಮಂತರಿಗೆ ಮಾತ್ರ ಬರೋದು, ಡೋಂಟ್ ವರಿ: ಯು ಟಿ ಖಾದರ್
ಮಂಗಳೂರು, ಏಪ್ರಿಲ್ 6: "ಕಷ್ಟ ಪಟ್ಟು ಕೆಲಸ ಮಾಡುವವರಿಗೆ ಕೊರೊನಾ ಸೋಂಕು ತಗಲುವುದಿಲ್ಲ" ಎಂದು ಕಾಂಗ್ರೆಸ್ ಮುಖಂಡ, ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ತಾವು ಪ್ರತಿನಿಧಿಸುವ ಮಂಗಳೂರು - ಉಳ್ಳಾಲ ಕ್ಷೇತ್ರದ ಪೌರ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಖಾದರ್, "ಇದುವರೆಗೆ ಕೊರೊನಾ ಬಂದಿರುವುದು ಶ್ರೀಮಂತರಿಗೆ ಮಾತ್ರ. ವಿಮಾನದಲ್ಲಿ ಸಂಚರಿಸುವವರಿಗೆ ಈ ಸೋಂಕು ತಗಲಿರುವುದು" ಎಂದು ಶಾಸಕರು ಹೇಳಿದ್ದಾರೆ.
ಚಪ್ಪಾಳೆ ತಟ್ಟಿಯಾಯಿತು, ಈಗ ದೀಪ ಹಚ್ಚಬೇಕಾ? ಪ್ರಧಾನಿಗಳೇ ಯಾಕೋ ಇದು ಜಾಸ್ತಿ ಅನಿಸ್ತಾ ಇಲ್ವಾ?
"ನಗರ ಶುಚಿತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೌರ ಕಾರ್ಮಿಕರ ಕೆಲಸ ಬೆಲೆ ಕಟ್ಟಲಾಗದಂತದ್ದು. ನೀವು ಧೈರ್ಯ ಕಳೆದುಕೊಳ್ಳಬಾರದು" ಎಂದು ಪೌರ ಕಾರ್ಮಿಕರಿಗೆ ಖಾದರ್, ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ.
"ಪೌರ ಕಾರ್ಮಿಕರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮರೆಯಬಾರದು. ಯಾರೂ ಈ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಮಾಡದೇ ಎಚ್ಚರಿಕೆಯಿಂದ ಇರಬೇಕೆಂದು" ಖಾದರ್ ಮನವಿ ಮಾಡಿದ್ದಾರೆ.
ಈ ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರೂ ಆಗಿದ್ದ ಯು.ಟಿ.ಖಾದರ್ ಅವರ ಈ ಹೇಳಿಕೆ, ಅಲ್ಲಲ್ಲಿ ಟೀಕೆಗೂ ಗುರಿಯಾಗಿದೆ.
ಅಷ್ಟಕ್ಕೂ ಆ ಭಾನುವಾರ ದೀಪ ಹಚ್ಚಿ ಅಂತಾ ಪ್ರಧಾನಿ ಮೋದಿ ಹೇಳಿದ್ದೇಕೆ?
"ಚಪ್ಪಾಳೆ ತಟ್ಟಾಯ್ತು, ಪಾತ್ರೆ ಬಡಿದಾಯ್ತು.ಈಗ ಕ್ಯಾಂಡಲ್ ಹಚ್ಚ ಬೇಕೇ? ಪ್ರಧಾನಿಗಳೇ @narendramodi, ಇದು ಯಾಕೋ ಸ್ವಲ್ಪ ಜಾಸ್ತಿ ಅನಿಸ್ತಾ ಇಲ್ವಾ? ಇದರ ಬದಲು ನಿಜವಾದ ಸಮಸ್ಯೆ ಬಗ್ಗೆ ಗಮನ ಹರಿಸಿ ಸರ್...ಜನಸಾಮಾನ್ಯರ ಹಸಿದ ಹೊಟ್ಟೆಗೆ ಅನ್ನ ನೀಡಿ" ಎಂದು ಎರಡು ದಿನದ ಹಿಂದೆ ಖಾದರ್ ಟ್ವೀಟ್ ಮಾಡಿದ್ದರು.