ಮಂಗಳೂರು ಆಸ್ಪತ್ರೆಯಿಂದ ಓಡಿ ಹೋಗಿದ್ದ ಕೊರೊನಾ ಶಂಕಿತ ಅಂತೂ ಸಿಕ್ಕ
ಮಂಗಳೂರು, ಮಾರ್ಚ್ 10: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೊರೊನಾ ವೈರಸ್ ಶಂಕಿತ ಅಂತೂ ಬಂಟ್ವಾಳದಲ್ಲಿ ಸಿಕ್ಕಿಬಿದ್ದಿದ್ದಾನೆ.
ಆಸ್ಪತ್ರೆಯ ಆರೋಗ್ಯ ಅಧಿಕಾರಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಅದರ ನಂತರ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ.
ಕೊರೊನಾವೈರಸ್ ಶಂಕೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬ ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದು ಸಧ್ಯ ಆತನನ್ನು ಮಾರ್ಚ್ 9, ಸೋಮವಾರ ಪೊಲೀಸರು ಬಂಟ್ವಾಳದಲ್ಲಿ ಪತ್ತೆಹಚ್ಚಿದ್ದಾರೆ.
ಆತನನ್ನು ಬಂಟ್ವಾಳದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರ್ಚ್ 8 ರ ಭಾನುವಾರ ದುಬೈನಿಂದ ಮಂಗಳೂರಿಗೆ ವಿಮಾನದಲ್ಲಿ ಬಂದಿದ್ದ ವ್ಯಕ್ತಿ ಕೊರೋನಾವೈರಸ್ ಸೋಂಕಿನ ಲಕ್ಷಣವನ್ನು ಪ್ರದರ್ಶಿಸಿದ್ದ.
ಅವರನ್ನು ಇಲ್ಲಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಅಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದಾನೆ. ಹಾಗೂ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ, ಇದು ಜಿಲ್ಲೆಯ ಜನರಲ್ಲಿ ಆತಂಕ ಕವಿಯುವಂತೆ ಮಾಡಿತ್ತು.
ಕೊರೊನಾ ಎಫೆಕ್ಟ್: ಔಷಧಿ ನಿಲ್ಲಿಸಿದ ನರಸೀಪುರದ ನಾರಾಯಣಮೂರ್ತಿ
ಭಾರತಕ್ಕೂ ಕಾಲಿಟ್ಟಿರುವ ಕೊರೋನಾ ವೈರಸ್ನಿಂದ ದೇಶದೆಲ್ಲೆಡೆ ಆತಂಕ ಸೃಷ್ಟಿಯಾಗಿದೆ. ಭಾರತದಲ್ಲಿ ಈಗಾಗಲೇ ಕೊರೋನಾ ಸೋಂಕಿತರ 39 ಪ್ರಕರಣಗಳು ದಾಖಲಾಗಿವೆ.
ಪಕ್ಕದ ರಾಜ್ಯವಾದ ಕೇರಳದಲ್ಲಿ ಕೂಡ ಹೊಸದಾಗಿ ಐವರಿಗೆ ಕೊರೋನಾ ವೈರಸ್ ತಗುಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ.
ತಮಿಳುನಾಡು, ಕೇರಳದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಿವೆ. ಕೇರಳದಲ್ಲಿ 6 ಹಾಗೂ ತಮಿಳುನಾಡಿಗೆ ಓಮನ್ನಿಂದ ಆಗಮಿಸಿದ್ದ ಒಬ್ಬರಲ್ಲಿ ಹೊಸತಾಗಿ ಕೊರೊನಾ ವೈರಸ್ ಪತ್ತೆಯಾಗಿತ್ತು.
ಬೆಂಗಳೂರಿನಲ್ಲೂ ಕೊರೋನಾ ಶಂಕಿತರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ, ತಪಾಸಣೆ ನಡೆಸಲಾಗಿತ್ತು. ಆದರೆ, ಕರ್ನಾಟಕದಲ್ಲಿ ಇದುವರೆಗೂ ಕೊರೊನಾ ಸೋಂಕಿತರ ಯಾವುದೇ ಪ್ರಕರಣಗಳು ಖಚಿತವಾಗಿಲ್ಲ.
ಈಗಾಗಲೇ ಬೇರೆ ದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರವಾಸಿಗರ ಮೇಲೆ ನಿರ್ಬಂಧ ವಿಧಿಸಲಾಗಿದೆ. ಹಾಗೇ, ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕಾರಣದಿಂದ ಮಂಗಳೂರು ವಿಮಾನ ನಿಲ್ದಾಣ ಮತ್ತು ಬಂದರಿನಲ್ಲೂ ಹೆಚ್ಚಿನ ಎಚ್ಚರ ವಹಿಸಲಾಗಿದೆ.
ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕನ ತಪಾಸಣೆ ಮಾಡಿದಾಗ ಆತನಿಗೆ ಜ್ವರ ಇರುವುದು ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಹೆಚ್ಚಿನ ತಪಾಸಣೆಗೆಂದು ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆತನ ಕಫದ ಮಾದರಿ ಸಂಗ್ರಹಿಸಿ ಬೆಂಗಳೂರಿಗೆ ರವಾನೆ ಮಾಡಲಾಗಿತ್ತು.