ಮೇಕೆದಾಟು ಪಾದಯಾತ್ರೆಯಿಂದ ಕೊರೊನಾ ಪ್ರಕರಣ ಜಾಸ್ತಿಯಾಗುತ್ತವೆ: ನಳಿನ್ ಕುಮಾರ್ ಕಟೀಲ್
ಮಂಗಳೂರು, ಜನವರಿ 3: "ಮೇಕೆದಾಟು ಪಾದಯಾತ್ರೆ ಮಾಡಿದರೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತದೆ," ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, "ಕಾಂಗ್ರೆಸ್ ಮೇಕೆದಾಟು ಮೂಲಕ ಹೀನ ರಾಜಕಾರಣ ಮಾಡುತ್ತಿದೆ. ಮೇಕೆದಾಟು ಯೋಜನೆ ಮಾಡುವುದು ಸರ್ಕಾರಕ್ಕೆ ಗೊತ್ತಿದೆ. ಈಗ ಪಾದಯಾತ್ರೆ ಮಾಡುವ ಕಾಂಗ್ರೆಸ್ಸಿಗರು ಅವರದ್ದೇ ಸರ್ಕಾರ ಇದ್ದಾಗ ಯಾಕೆ ಮಾಡಲಿಲ್ಲ. ಮುಖ್ಯಮಂತ್ರಿ ಅವರೇ ಅಗಿದ್ದಾಗ ಯಾಕೆ ಈ ಬಗ್ಗೆ ಚಕಾರ ಎತ್ತಲಿಲ್ಲ," ಎಂದು ಪ್ರಶ್ನಿಸಿದರು.
"ನಿಮ್ಮ ಸರ್ಕಾರದ ಅವಧಿಯಲ್ಲಿ ಮೇಕೆದಾಟು ಬಗ್ಗೆ ಚರ್ಚೆ ಮಾಡಲಿಲ್ಲ, ತಯಾರಿ ಮಾಡಲಿಲ್ಲ. ಇವತ್ತು ನಮ್ಮ ಸರ್ಕಾರ ಸಂಪೂರ್ಣ ಬದ್ಧತೆ ಹೊಂದಿದೆ. ನಾವು ಮೇಕದಾಟು ಮಾಡಿಯೇ ಮಾಡುತ್ತೇವೆ. ಮೇಕೆದಾಟು ನಮ್ಮ ಕಾಲದಲ್ಲೇ ನಡೆಯುತ್ತದೆ. ಅದಕ್ಕೆ ಕಾಂಗ್ರೆಸ್ ಪಾದಯಾತ್ರೆ ಅಗತ್ಯ ಇಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಪಾದಯಾತ್ರೆ ಮಾಡಿ ಕೊರೊನಾವನ್ನು ಹೆಚ್ಚಿಸಲು ನೋಡುತ್ತಿದ್ದಾರೆ. ಇದರಿಂದ ಖಂಡಿತಾ ಕೊರೊನಾ ಹೆಚ್ಚಳವಾಗುತ್ತದೆ. ಇದಕ್ಕೆ ಕಾಂಗ್ರೆಸ್ ನೇರ ಹೊಣೆಗಾರರಾಗುತ್ತಾರೆ," ಎಂದು ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಇನ್ನು ದೇವಸ್ಥಾನಗಳಿಗೆ ಸ್ವಾಯತ್ತತೆ ಕೊಡುವ ಸಿಎಂ ಬೊಮ್ಮಾಯಿಯವರ ನಿರ್ಧಾರ ಬಗ್ಗೆ ಮಾತನಾಡಿದ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿಯವರ ಈ ನಿರ್ಧಾರ ಸ್ವಾಗತಾರ್ಹವಾಗಿದೆ. ದೇವಸ್ಥಾನಗಳಿಗೆ ಸ್ವಾಯತ್ತತೆ ರಾಜ್ಯದ ಹಿಂದೂಗಳ ಭಾವನೆ ಆಗಿತ್ತು. ಕ್ರೈಸ್ತ, ಇಸ್ಲಾಂ ಧರ್ಮಗಳಂತೆ ಸರ್ಕಾರದ ಹಸ್ತಕ್ಷೇಪ ಇಲ್ಲದೇ ದೇವಸ್ಥಾನಗಳೂ ಆಗಬೇಕೆಂದು ಹಿಂದೂಗಳ ಬಯಕೆಯಾಗಿತ್ತು. ಬೊಮ್ಮಾಯಿ ಸರ್ಕಾರ "ಹಿಂದೂಗಳ ಭಾವನೆಗಳಿಗೆ ಬೆಲೆ ನೀಡಿದೆ. ಸರ್ಕಾರದ ಹಸ್ತಕ್ಷೇಪ ಇರದೇ ದೇವಸ್ಥಾನಗಳ ಅಭಿವೃದ್ಧಿ ಆಗಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಆದರೆ ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ, ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಹೊಂದಿದೆ. ಮತಾಂತರ ಕಾಯ್ದೆ, ಸಿಎಎ ಕಾಯ್ದೆ, ಈಗ ದೇವಸ್ಥಾನ ಸ್ವಾಯತ್ತತೆಗೂ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಅಲ್ಪಸಂಖ್ಯಾತ ಮತಕ್ಕಾಗಿ ಹಿಂದೂ ಸಮಾಜಕ್ಕೆ ಕಾಂಗ್ರೆಸ್ ದ್ರೋಹ ಬಗೆಯುತ್ತಿದೆ. ಕಾಂಗ್ರೆಸ್ಗೆ ಹಿಂದೂ ಧರ್ಮ, ಹಿಂದೂ ಜನರ ಮೇಲೆ ನಂಬಿಕೆ ಇಲ್ಲ ಎಂದು ನಳಿನ್ ಕುಮಾರ್ ಕಟೀಲ್ ಟೀಕಿಸಿದರು.
ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡುವ ಸಿಎಂ ಬೊಮ್ಮಾಯಿ ನಿರ್ಧಾರ ಸರಿ ಇದೆ, ಎಲ್ಲಾ ಮಠಾಧೀಪತಿಗಳು, ದೇವಸ್ಥಾನದವರು ಇದನ್ನು ಸ್ವಾಗತಿಸಿದ್ದಾರೆ. ಮತಾಂತರ ಮತ್ತು ದೇವಸ್ಥಾನ ವಿಚಾರದಲ್ಲಿ ಸರ್ಕಾರದ ನಿರ್ಧಾರ ನಾನು ಸ್ವಾಗತಿಸ್ತೇನೆ. ಸಿದ್ದರಾಮಯ್ಯ ಟೀಕೆ ಮಾಡುತ್ತಿದಾರೆ. ಆದರೆ, ಟಿಪ್ಪು ಜಯಂತಿ ಯಾರ ಓಲೈಕೆಗೆ ಮಾಡಿದ್ದು? ಶಾದಿ ಭಾಗ್ಯ ಯೋಜನೆಯಲ್ಲೂ ಅಲ್ಪಸಂಖ್ಯಾತರನ್ನು ಹುಡುಕಿ ಮತೀಯ ಭಾವನೆ ತಂದಿದ್ದಾರೆ. ಕಾಂಗ್ರೆಸ್ ಸಂಪೂರ್ಣ ಹಿಂದೂ ವಿರೋಧಿ ನೀತಿಯಲ್ಲಿದೆ. ಅಹಿಂದ ಚಳುವಳಿ ಮಾಡಿದಿರಿ, ಆದರೆ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ಪುಟ್ಟಪ್ಪ ಸತ್ತಾಗ ಏನ್ ಮಾಡಿದಿರಿ? ಎಂದು ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಕೋವಿಡ್ ಒಂದನೇ ಮತ್ತು ಎರಡನೇ ಅಲೆ ಬಂದಾಗ ಕಾಂಗ್ರೆಸ್ ಏನೂ ಮಾಡಲಿಲ್ಲ. ಕೇವಲ ಟೀಕೆಯನ್ನಷ್ಟೇ ಮಾಡಿದೆ. ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸಿ ಕೊಲ್ಲುವ ಕೆಲಸವನ್ನು ಮಾಡಿದೆ. ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರ ಮುನ್ನೆಚ್ಚರಿಕೆಗಾಗಿ ಹಲವು ಮಾರ್ಗಸೂಚಿಗಳನ್ನು ಜಾರಿಗೆ ತರುತ್ತದೆ.
ಮುಖ್ಯಮಂತ್ರಿ ಸಭೆ ಮಾಡುವುದು ಲಾಕ್ಡೌನ್ ಮಾಡುವುದಕ್ಕೆ ಅಲ್ಲ. ತಜ್ಞರ ವರದಿ ಸಂಗ್ರಹಿಸಿ, ಮಾರ್ಗಸೂಚಿಗಳನ್ನು ಜಾರಿಗೆ ತರುತ್ತದೆ. ಲಾಕ್ಡೌನ್ ಆಗಬಾರದು ಎನ್ನುವುದು ಎಲ್ಲರ ಉದ್ದೇಶವಾಗಿದೆ. ಜನರೇ ಸ್ವಯಂ ಆಗಿ ಕೋವಿಡ್ ನಿಯಂತ್ರಣ ಮಾಡಬೇಕಿದೆ ಎಂದು ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದ್ದಾರೆ.