'ರೈತರು ಆತ್ಮಹತ್ಯೆ ಮಾಡಿಕೊಂಡರೆ ಬ್ಯಾಂಕ್ಗಳ ಮೇಲೆ ಎಫ್ಐಆರ್'
ಮಂಗಳೂರು, ಫೆಬ್ರವರಿ. 08 : ಇನ್ನು ಮುಂದೆ ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡಲ್ಲಿ ಸ್ಥಳೀಯ ಸಹಕಾರಿ ಬ್ಯಾಂಕ್ಗಳ ವ್ಯವಸ್ಥಾಪಕರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರ ಸಾಲವನ್ನು ಶೇ. 50ರಷ್ಟು ಮನ್ನಾ ಮಾಡಿದಲ್ಲಿ ರಾಜ್ಯ ಸರಕಾರವೂ ಸಹಕಾರಿ ಬ್ಯಾಂಕ್ಗಳಲ್ಲಿ ಶೇ. 50ರಷ್ಟು ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಕೇಂದ್ರ ಸರಕಾರ ಸಾಲ ಮನ್ನಾ ಮಾಡುವಂತೆ ಸ್ಥಳೀಯ ಸಂಸದರು ಸರಕಾರದ ಮೇಲೆ ಒತ್ತಡ ಹಾಕಬೇಕೆಂದರು.[ಮಂಗಳೂರು: ತಲಪಾಡಿ ಟೋಲ್ ಗೇಟ್ ವಿರುದ್ಧ ರೊಚ್ಚಿಗೆದ್ದ ಜನ]
ಕೇಂದ್ರ ಸರಕಾರ ಈಗಾಗಲೇ ಉದ್ಯಮಿಗಳ 1.14ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಆದರೆ, ರೈತರ ಸಾಲ ಮನ್ನಾ ಮಾಡಲು ದುಡ್ಡಿಲ್ಲ ಎಂದು ಟೀಕಿಸಿದ ಅವರು, ರಾಜ್ಯದಲ್ಲಿ ಬರಗಾಲ ಕಾಡುತ್ತಿದೆ. ರೈತರನ್ನು ಬದುಕಿಸುವ ಬದಲು ಪ್ರಧಾನಿ ಉದ್ಯಮಿಗಳನ್ನು ಓಲೈಸುತ್ತಿದ್ದಾರೆ ಎಂದರು.
ಅಡಿಕೆ ಬೆಳೆಗಾರರು ಕೊಳೆರೋಗ, ಹಳದಿ ರೋಗದಿಂದ ನಷ್ಟ ಅನುಭವಿಸಿದ್ದು, ಅವರಿಗೆ ಸೂಕ್ತ ಪರಿಹಾರ ಹಾಗೂ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಗೋರಕ್ ಸಿಂಗ್ ವರದಿ ಜಾರಿಗೊಳಿಸಲು ಸುಪ್ರೀಂಕೋರ್ಟ್ ನಲ್ಲಿ ಎಸ್ಎಲ್ ಪಿ (ಸ್ಪೆಷಲ್ ಲೀವ್ ಪಿಟಿಷನ್) ಸಲ್ಲಿಸಲಾಗಿದೆ. ಬ್ಯಾಂಕ್ಗಳು ಸಾಲ ಮನ್ನಾ ಮಾಡದೆ ಹೋದಲ್ಲಿ ಅದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದರು.
ಇದೇ ವೇಳೆ ಬಂಟ್ವಾಳ ತಾಲೂಕಿನಂತೆ ಸುಳ್ಯ, ಪುತ್ತೂರು, ಬೆಳ್ತಂಗಡಿಯನ್ನೂ ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಒತ್ತಾಯಿಸಿದರು.
ಕುಡಿಯುವ ನೀರಿಗಾಗಿ ಎತ್ತಿನಹೊಳೆ ಸೇರಿದಂತೆ ಸರಕಾರದ ವ್ಯವಸ್ಥೆಯನ್ನು ಅವೈಜ್ಞಾನಿಕ ಎಂದ ಅವರು, ಕೋಲಾರ, ಕಲಬುರಗಿ, ಬೀದರ್ನಂತಹ ಪ್ರದೇಶಗಳಲ್ಲಿ ಗಿಡಗಳನ್ನು ಬೆಳೆಸಿ, ಅರಣ್ಯ ನಿರ್ಮಾಣ ಮಾಡುವಂತೆ ತಾನು ಈಗಾಗಲೇ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ವಿಷಾದ ವ್ಯಕ್ತಪಡಿಸಿದರು.