ಈಶ್ವರಪ್ಪ ಬಾಯಿ ಶೌಚಾಲಯ ಇದ್ದಂತೆ; ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡನಿಂದ ವಿವಾದಾತ್ಮಕ ಹೇಳಿಕೆ
ಮಂಗಳೂರು, ಫೆಬ್ರವರಿ 17: "ಈ ಹಿಂದೆ ಎಸ್ಡಿಪಿಐಯನ್ನು ಬ್ಯಾನ್ ಮಾಡಬೇಕೆಂದು ಹೇಳುತ್ತಿದ್ದ ಸಿ.ಟಿ. ರವಿ, ಈಶ್ವರಪ್ಪನವರು ಈಗ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಅವರದ್ದೇ ಪಕ್ಷವಿದ್ದರೂ ಬ್ಯಾನ್ ಮಾಡಿಸಲು ಒತ್ತಾಯಿಸುವುದಿಲ್ಲ," ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡ ಶಾಹುಲ್ ಹಮೀದ್ ಹೇಳಿದ್ದಾರೆ.
"ಸಚಿವ ಈಶ್ವರಪ್ಪನವರ ಬಾಯಿ ಶೌಚಾಲಯದ ಗುಂಡಿ ಇದ್ದಂತೆ. ಅವರನ್ನು ತೆಗೆದು ಬಿಸಾಡಬೇಕೆಂದರೂ ಅವರನ್ನು ಭಾರತದೊಳಗೆ ಬಿಸಾಡಬಾರದು, ಕೊಳೆತು ನಾರುತ್ತದೆ. ಭಾರತದ ಹೊರಗೆ ಎತ್ತಿ ಎಸೆಯಬೇಕು," ಎಂದು ಶಾಹುಲ್ ಹಮೀದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈಶ್ವರಪ್ಪನ ಹರಕು ಬಾಯಿಯಿಂದ ಬಿಜೆಪಿ ಪಕ್ಷಕ್ಕೆ ಹಿನ್ನಡೆ; ಡಿ.ಕೆ. ಶಿವಕುಮಾರ್
ಇನ್ನು ಹಿಜಾಬ್ ಪ್ರಕರಣದ ಕುರಿತಾಗಿ ಕಾಂಗ್ರೆಸ್ ವಿರುದ್ಧ ಕೆಂಡಕಾರಿದ ಎಸ್ಡಿಪಿಐ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಘಟಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಎಸ್ಡಿಪಿಐ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
"ಎಸ್ಡಿಪಿಐ ಪಕ್ಷವು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ. ಕಳೆದ ಒಂದು ವರ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯದ, ಆತಂಕದ ವಾತಾವರಣ ಸೃಷ್ಟಿಯಾಗಲು ಬಿಜೆಪಿ, ಸಂಘ ಪರಿವಾರ ಎಷ್ಟು ಕಾರಣವೋ, ಎಸ್ಡಿಪಿಐ ಕೂಡಾ ಅಷ್ಟೇ ಕಾರಣ. ಇದಕ್ಕೆ ಬೇಕಾದ ನೀರು, ಗೊಬ್ಬರವನ್ನು ಒದಗಿಸಿದೆ," ಎಂದು ಕಾಂಗ್ರೆಸ್ ಮುಖಂಡ ಶಾಹುಲ್ ಹಮೀದ್ ವಾಗ್ದಾಳಿ ನಡೆಸಿದ್ದಾರೆ.
"ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಅನೇಕ ಘಟನೆಗಳಲ್ಲಿ ಕೋಮುವೈಷಮ್ಯದ ಕಿಡಿ ಹಚ್ಚಿ, ಗಲಭೆ ಸೃಷ್ಟಿಸಿ ಅಲ್ಲಿಂದ ನುಣುಚಿಕೊಳ್ಳುತ್ತದೆ. ಆ ಬಳಿಕ ಈ ಎಸ್ಡಿಪಿಐ ನಾಯಕರು ಅಲ್ಲಿನ ಸೌಹಾರ್ದಕ್ಕೂ ಹುಳಿ ಹಿಂಡುತ್ತಾರೆ. ಉಡುಪಿಯಲ್ಲಿ ಕ್ಯಾಂಪಸ್ ಒಳಗಡೆ ಕೋಮುವೈಷಮ್ಯ ಬಿತ್ತುವ ಮೂಲಕ ಗಲಾಟೆ ಮಾಡಿಸುತ್ತಾರೆ. ವಿದ್ಯಾರ್ಥಿಗಳ ಎರಡು ಗುಂಪುಗಳಾಗುತ್ತವೆ," ಎಂದು ಹರಿಹಾಯ್ದರು.
ಹಿಂದೂಗಳ ಪಾಲಿಗೆ ಕೇಸರಿ ಪವಿತ್ರ ವಸ್ತ್ರ; ಎಚ್.ಡಿ. ಕುಮಾರಸ್ವಾಮಿ
ಶತಮಾನದಿಂದ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ಹಿಜಾಬ್ ಪರ ಇದೆ. ನಮ್ಮ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಈ ಬಗ್ಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ಕಾಂಗ್ರೆಸ್ ನಿಲುವಿನ ಬಗ್ಗೆ ಮಾತನಾಡುವ ಎಸ್ಡಿಪಿಐ, ಮೊದಲು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಶಾಹುಲ್ ಹಮೀದ್ ಸವಾಲು ಹಾಕಿದರು.
ಬಿಜೆಪಿ ಇದೀಗ ತೀವ್ರ ಹತಾಶೆಯಲ್ಲಿದ್ದು, ಯಾರೂ ಈಗ ಬಿಜೆಪಿ ನಾಯಕರ ಮಾತಿಗೆ ಮರುಳಾಗುತ್ತಿಲ್ಲ. ಬೆಲೆಯೇರಿಕೆ, ಭ್ರಷ್ಟಾಚಾರ, ಮಹಿಳೆಯರಿಗೆ ಸುರಕ್ಷತೆಯಿಲ್ಲ, ಜೊತೆಗೆ ನಾರಾಯಣ ಗುರುಗಳ ಟ್ಯಾಬ್ಲೋ ವಿವಾದ. ಬಿಜೆಪಿ ಸ್ಥಿತಿ ಹೀಗಿರುವಾಗ ಅವರಿಗೆ ಆಹಾರ ಕೊಡಲು ಎಸ್ಡಿಪಿಐ ಟೀಂ ತಯಾರಾಗಿದೆ. ಕೆಂಪುಕೋಟೆಯಲ್ಲಿರುವ ಕೇಸರಿ ಧ್ವಜ ಹಾರಾಟ ಮಾಡುತ್ತೇವೆ ಎಂದು ಈಶ್ವರಪ್ಪ ಹೇಳಿದಾಗ ಎಸ್ಡಿಪಿಐ, ಪಿಎಫ್ಐ ಚಕಾರ ಎತ್ತುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಜಾಬ್ ವಿವಾದ ಆರಂಭವಾಗುವಾಗಲೇ ಕಾಂಗ್ರೆಸ್ ವಿವಾದ ಶಮನ ಮಾಡಲು ಯತ್ನಿಸಿತ್ತು. ತಲೆಗೆ ಹಾಕುವ ಬಟ್ಟೆಯಿಂದ ದೇಶದ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆಗುತ್ತದೆ ಅಂತಾ ಗೊತ್ತಿರಲಿಲ್ಲ. ಎಸ್ಡಿಪಿಐ ಅಮಾಯಕ ಮುಸ್ಲಿಮರ ಬಾಳಲ್ಲಿ ಆಡುತ್ತಿದೆ. ಈ ಮೂಲಕ ಸಂಘ ಪರಿವಾರಕ್ಕೆ ಆಹಾರ ಒದಗಿಸುತ್ತಿದೆ. ಕಾಲೇಜು ಕ್ಯಾಂಪಸ್ ಒಳಗೆ ಹೋಗಿ ಎಸ್ಡಿಪಿಐ ವೈಷಮ್ಯ ಬಿತ್ತನೆ ಮಾಡಿದೆ. ಕೋಮು ಗಲಭೆಯಾದರೆ ಎರಡೂ ಕೋಮುವಾದಿ ಪಕ್ಷಗಳಿಗೆ ಲಾಭವಾಗಲಿದೆ. ಜ್ಯಾತ್ಯಾತೀತ ಪಕ್ಷಗಳಿಗೆ ಇದರಿಂದ ಸೋಲಾಗಲಿದೆ. ಹಿಜಾಬ್ ವಿವಾದ ಜೋರಾಗಲು ಪ್ರಚೋದನೆ ನೀಡಿದವರ ಬಗ್ಗೆ ಸರ್ಕಾರ ತನಿಖೆ ಮಾಡಬೇಕು ಎಂದು ಶಾಹುಲ್ ಹಮೀದ್ ಒತ್ತಾಯಿಸಿದ್ದಾರೆ.
ಬಿಜೆಪಿಗೆ ಆಹಾರ ಒದಗಿಸಲು ಎಸ್ಡಿಪಿಐ ತಯಾರಿದೆ. 'ನಾಯಿ ಹಸಿದಿತ್ತು, ಅನ್ನ ಹಳಸಿತ್ತು' ಎಂಬ ಗಾದೆ ಪ್ರಸ್ತುತ ಸನ್ನಿವೇಶಕ್ಕೆ ಸರಿಯಾಗಿದೆ. ಎಸ್ಡಿಪಿಐ ಅಟ್ಯಾಕ್ ಮಾಡುವುದು ಕಾಂಗ್ರೆಸ್ನ ಮೇಲೆ. ಕಾಂಗ್ರೆಸ್ ಮತಗಳನ್ನು ಪಡೆಯಲು ಮತ ವಿಭಜನೆ ಮಾಡುತ್ತಿದೆ. ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಎಸ್ಡಿಪಿಐ ಧ್ವನಿ ಎತ್ತುವುದಿಲ್ಲ ಎಂದು ಶಾಹುಲ್ ಹಮೀದ್ ಆರೋಪಿಸಿದ್ದಾರೆ.
Recommended Video