ಸಿಎಂನಿಂದಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲು: ಪೂಜಾರಿ ಭವಿಷ್ಯ
ಮಂಗಳೂರು, ಮಾರ್ಚ್. 14 : ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಸೋಲನುಭವಿಸಲಿದೆ ಎಂದು ಹಿರಿಯ ಮುಖಂಡ ಜನಾರ್ದನ ಪೂಜಾರಿ ಭವಿಷ್ಯ ನುಡಿದಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರಿಂದ ಕಾಂಗ್ರೆಸ್ ಗೆ ಉಪಚುನಾವಣೆಯಲ್ಲಿ ಸೋಲಾಗಲಿದೆ. ಸಿಎಂ ಸರಿಯಾಗುವುದಿಲ್ಲ. ಮೊದಲು ಅವರು ಸರಿಯಾದರೆ ಎರಡೂ ಕಡೆಯಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ ಎಂದರು.[ತಾಕತ್ತಿದ್ದರೆ ಬಿಜೆಪಿ ಸಿಡಿ ಬಿಡುಗಡೆ ಮಾಡಿ ಹೆಚ್ ಡಿಕೆಗೆ ಪೂಜಾರಿ ಸವಾಲ್]
ಶ್ರೀನಿವಾಸ ಪ್ರಸಾದ್ ಅವರು ಒಬ್ಬ ಒಳ್ಳೆಯ ವ್ಯಕ್ತಿತ್ವದ ಮನುಷ್ಯ. ಆದರೆ, ಈ ಮನುಷ್ಯ ಸರಿ ಇಲ್ಲ. ಹೀಗಾಗಿ ಅವರನ್ನು ಬದಲಾಯಿಸಿದರೆ ಮಾತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಅವರನ್ನು ಬದಲಾವಣೆ ಮಾಡಿ ಪರಮೇಶ್ವರ್ ಅವರನ್ನು ನೇಮಕ ಮಾಡಿ. ಬೇಕಿದ್ದರೆ ಹೈಕಮಾಂಡ್ ಗೆ ನಾನೇ ಹೇಳುತ್ತೇನೆ. ನಾಳೆಯೇ ಪರಮೇಶ್ವರ್ ಅವರನ್ನು ಸಿಎಂ ಆಗಿ ನೇಮಕ ಮಾಡಿದರೆ ಎಲ್ಲವೂ ಸರಿಯಾಗತ್ತೆ ಎಂದರು.[ಸಿದ್ದರಾಮಯ್ಯ ಅವರಿಗೆ ಜನಾರ್ದನ ಪೂಜಾರಿ ಮಂಗಳಾರತಿ!]
ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಹಿರಿಯರು, ಮುಖ್ಯಮಂತ್ರಿಯಾಗಿದ್ದವರು. ಅವರಿಗೆ ಅಸಮಾಧಾನ ಆಗಿದ್ದರೆ ಸಿಎಂ ಸಿದ್ದರಾಮಯ್ಯನವರು ಅವರ ಬಳಿ ಹೋಗಿ ಮಾತನಾಡಬಹುದಿತ್ತು.
ಅಸಮಾಧಾನ ಬಗೆಹರಿಸಿ ಬೇರೆ ಪಕ್ಷಕ್ಕೆ ಹೋಗದಂತೆ ತಡೆಯಬಹುದಿತ್ತು. ಆದರೆ, ಸಿದ್ದರಾಮಯ್ಯ ಈ ಕೆಲಸ ಮಾಡಲಿಲ್ಲ. ಕೃಷ್ಣ ಬಿಜೆಪಿ ಸೇರುತ್ತಿರುವುದಕ್ಕೆ ಅದಕ್ಕೆ ಸಿಎಂ ಮೂಲ ಕಾರಣ ಎಂದು ವಾಗ್ದಾಳಿ ನಡೆಸಿದರು