ಸಿದ್ದರಾಮೋತ್ಸವಕ್ಕೆ ಹಣ, ಹೆಂಡ ನೀಡಿ ಜನ ಸೇರಿಸಿದ್ದಾರೆ: ಮಂಗಳೂರಿನಲ್ಲಿ ಕಟೀಲ್ ಕಿಡಿ!
ಮಂಗಳೂರು, ಆಗಸ್ಟ್, 10: ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಜನ್ಮದಿನೋತ್ಸವ ಆಚರಣೆಯಿಂದ ಡಿ.ಕೆ.ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಕಂಗಾಲಾಗಿದ್ದಾರೆ. ಸಿದ್ದರಾಮೋತ್ಸವಕ್ಕೆ ಹೆಂಡ, ಹಣ ಕೊಟ್ಟು ಜನರನ್ನು ಸೇರಿಸಿದ್ದಾರೆ. ಈ ರೀತಿ ಜನರನ್ನು ಸೇರಿಸಿ ಜಾತ್ರೆ ಮಾಡುವುದಕ್ಕೆ ಕಾಂಗ್ರೆಸ್ಗೆ ನಾಚಿಕೆಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದರು.
ಸಿದ್ದರಾಮೋತ್ಸವ ಕಂಡು ನಾವು ಯಾಕೆ ಕಂಗಲಾಗಬೇಕು? ನಮಗೆ ಯಾವುದೇ ಭಯ ಇಲ್ಲ. ನಮ್ಮ ಸರ್ಕಾರದ ಅಡಳಿತ ಇದೆ, ಮುಂದಿನ ಚುನಾವಣೆಯಲ್ಲಿಯೂ ನಾವೇ ಗೆಲ್ಲುತ್ತೇವೆ. ಇಂತಹ ಉತ್ಸವಗಳಿಂದ ಯಾವುದೇ ರಾಜಕೀಯ ಪರಿವರ್ತನೆ ಮಾಡಲು ಸಾಧ್ಯವಿಲ್ಲ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.
ಕಾಂಗ್ರೆಸ್ನಲ್ಲಿ ಆಂತರಿಕ ಜಗಳ:
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕಾಂಗ್ರೆಸ್ ಟ್ವೀಟ್ ವಿಚಾರದ ಕುರಿತು ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಬೊಮ್ಮಾಯಿ ಅವರ ಬದಲಾವಣೆ ಇಲ್ಲ. ಅವಧಿ ಪೂರ್ಣ ಆಗುವವರೆಗೆ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಯಡಿಯೂರಪ್ಪನವರ ಮಾರ್ಗದರ್ಶನದಂತೆ, ಬೊಮ್ಮಾಯಿ ಅವರ ನೇತೃತ್ವದಲ್ಲೇ 2023ರ ಚುನಾವಣೆಯನ್ನು ಎದುರಿಸುತ್ತೇವೆ. ಯಾವುದೇ ರೀತಿಯ ಬದಲಾವಣೆ ಈ ಸರ್ಕಾರದಲ್ಲಿ ಇಲ್ಲ. ಊಹಾಪೋಹ ಸೃಷ್ಟಿಸಿ ಕಾಂಗ್ರೆಸ್ ತನ್ನ ಬೇಳೆ ಬೇಯಿಸಿಕೊಳ್ಳುವ ಕುತಂತ್ರಕ್ಕೆ ಇಳಿದಿದೆ. ಕಾಂಗ್ರೆಸ್ನಲ್ಲಿ ಆಂತರಿಕ ಜಗಳ ಜಾಸ್ತಿ ಅಗಿದೆ. ಕೋಳಿವಾಡರಂತಹ ಹಿರಿಯರೇ ಸಿದ್ದರಾಮಯ್ಯ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಯಾರು ಮುಖ್ಯಮಂತ್ರಿ ಆಗಬೇಕೆಂಬ ಜಗಳ ಅವರಲ್ಲಿದೆ.
ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ:
ಸಿದ್ಧರಾಮೋತ್ಸವದಲ್ಲಿ ಶಕ್ತಿ ಪ್ರದರ್ಶನ ಮಾಡಿ ಡಿ.ಕೆ.ಶಿವಕುಮಾರ್ ಅವರಿಗೆ ಡಿಚ್ಚಿ ಕೊಟ್ಟಿದ್ದಾರೆ. ಖರ್ಗೆಯಂತಹ ಹಿರಿಯರಿಗೆ ಅವಮಾನ ಮಾಡಿದ್ದಾರೆ. ಆಂತರಿಕ ಜಗಳ ಮುಚ್ಚಿಡಲು ಕಾಂಗ್ರೆಸ್ ಈ ತಂತ್ರಗಾರಿಕೆ ಮಾಡಿದೆ. ಜನರ ಹಾದಿಯನ್ನು ತಪ್ಪಿಸಲು ಕಾಂಗ್ರೆಸ್ ಇಂತಹ ಸುಳ್ಳು ಟ್ವೀಟ್ ಮಾಡಿದೆ. ಯಾರು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಾರೋ ಅವರು ರಾಷ್ಟ್ರ ವಿರೋಧಿಗಳೆಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ಇವತ್ತು ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸಿ ರಾಷ್ಟ್ರ ವಿರೋಧಿ ಆಗಿದೆ. ಕಾಂಗ್ರೆಸ್ನ ಯಾವ ನಾಟಕವೂ ನಡಿಯಲ್ಲ. ಅವರ ಆಂತರಿಕ ಜಗಳ ಇನ್ನು ಒಂದು ತಿಂಗಳಲ್ಲಿ ಹೊರಬರುತ್ತದೆ. ಮುಂದೆ ಸಿದ್ದರಾಮಣ್ಣ ಅಥವಾ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ನಿಂದ ಹೊರಬರುತ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದರು.
ಕಾಂಗ್ರೆಸ್ ಅವರ ಜಗಳವನ್ನು ಬಗೆಹರಿಸಿ ಒಟ್ಟಾಗಿ ಚುನಾವಣೆ ಎದುರಿಸಿಲಿ ಎಂದು ನಳಿನ್ ಕುಮಾರ್ ಕಟೀಲು ಕಾಂಗ್ರೆಸ್ ಟ್ವೀಟ್ಗೆ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ಉತ್ಸವದ ಮೂಲಕ ಕಾಂಗ್ರೆಸ್ ಒಳಜಗಳ ಬೀದಿಗೆ ಬಂದಿದೆ. ಅವರಲ್ಲಿ ಮುಂದಿನ ಮುಖ್ಯಮಂತ್ರಿ ಹೋರಾಟಗಳು ಹೆಚ್ಚುತ್ತಿವೆ. ಗೊಂದಲಗಳನ್ನು ಸೃಷ್ಟಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಇ.ಡಿ ತನಿಖೆಯಲ್ಲಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಪ್ರಕರಣ, ಡಿ.ಕೆ.ಶಿವಕುಮಾರ್ ವಿರುದ್ಧ ನ್ಯಾಯಾಲಯ ನೀಡಿರುವ ಜಾಮೀನನ್ನು ಮುಚ್ಚಿಡಲು ಕಾಂಗ್ರೆಸ್ ಈ ಪ್ರಯತ್ನ ಮಾಡುತ್ತಿದೆ ಎಂದು ಹರಿಹಾಯ್ದರು.
Recommended Video