ಬಿಎಸ್ ವೈ ವಿರುದ್ಧ ಎಸಿಬಿ ಪ್ರಕರಣದಲ್ಲಿ ಕಾಂಗ್ರೆಸ್ ಪಾತ್ರವಿಲ್ಲ- ಐವನ್
ಮಂಗಳೂರು, ಆಗಸ್ಟ್ 21: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಚಾರ ನಿಗ್ರಹ ದಳ ಪ್ರಕರಣ ದಾಖಲು ಮಾಡಿರುವುದರ ಹಿಂದೆ ಕಾಂಗ್ರೆಸ್ ಪಕ್ಷದ ಪಾತ್ರವಿಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ ಸೋಜಾ ತಿಳಿಸಿದ್ದಾರೆ.
ಬಿಎಸ್ವೈ ವಿರುದ್ಧ ಎಫ್ಐಆರ್ : ಹೊಸ ತಿರುವು, ಪತ್ರ ಸ್ಫೋಟ!
ಮಂಗಳೂರಿಲ್ಲಿ ಭಾನುವಾರ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು ಸರಕಾರ ಈ ಪ್ರಕರಣದಲ್ಲಿ ಸ್ವಯಂ ಪ್ರೇರಿತ ಕೇಸು ದಾಖಲಿಸಿಲ್ಲ. ವ್ಯಕ್ತಿಯೊಬ್ಬರು ನೀಡಿದ ದೂರನ್ನು ಆಧಾರಿಸಿ ಎಸಿಬಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಕೇಸು ದಾಖಲಿಸಿ ಕಾನೂನು ಪ್ರಕಾರ ಕ್ರಮಕ್ಕೆ ಮುಂದಾಗಿದೆ ಎಂದು ಸ್ಪಷ್ಟಪಡಿಸಿದರು.
"ಎಸಿಬಿ ಯಲ್ಲಿ ದಾಖಲಾಗುವ ಕೇಸುಗಳಿಗೂ, ಸಿಎಂ ಸಿದ್ದರಾಮಯ್ಯರಿಗೂ ಯಾವುದೇ ಸಂಬಂಧವಿಲ್ಲ ಆದರೂ, ಮುಖ್ಯಮಂತ್ರಿಯವರ ಹೆಸರನ್ನು ಇಲ್ಲಿ ತಳಕು ಹಾಕಲಾಗುತ್ತಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಸಿದ್ದರಾಮಯ್ಯ ನೇತ್ರತ್ವದ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಸಹಿಸಲಾಗದೆ ಹತಾಶರಾಗಿ ಮುಖ್ಯಮಂತ್ರಿಯವರ ಮೇಲೆ ಗೂಬೆ ಕೂರಿಸಲಾಗುತ್ತಿದೆ," ಎಂದ ಅವರು ವಿಷಾದ ವ್ಯಕ್ತಪಡಿಸಿದರು.
ಕಾಂಗ್ರೆಸ್ ಎಂದೂ ದ್ವೇಷ ರಾಜಕಾರಣ ನಡೆಸಿಲ್ಲ ಎಂದು ಹೇಳಿದ ಅವರು ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದರೂ ಜನರ ಸಮಸ್ಯೆಗಳ ಬಗ್ಗೆ ವಿಪಕ್ಷವಾಗಿ ಬಿಜೆಪಿ ಎಂದೂ ಮಾತನಾಡಿಲ್ಲ. ಪ್ರತಿಭಟನೆ ಹೆಸರಲ್ಲಿ ಬಿಜೆಪಿ ಜನರಲ್ಲಿ ಗೊಂದಲವನ್ನುಂಟು ಮಾಡುತ್ತಿದೆ ಎಂದು ಕಿಡಿಕಾರಿದರು. ಬಿಜೆಪಿಗೆ ಜೈಲು ಮತ್ತು ಬೇಲು ಎಲ್ಲವೂ ಮಾಮುಲು ಎಂದು ಅವರು ವ್ಯಂಗ್ಯವಾಡಿದರು.