ಕರಾವಳಿಯಲ್ಲಿ ಕೇಸರಿಯಾಗಿ ಬದಲಾದ ಕಾಂಗ್ರೆಸ್: ಉದ್ದೇಶವೇನು?
ಮಂಗಳೂರು, ಏಪ್ರಿಲ್ 08:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನ ಚುನಾವಣಾ ತಂತ್ರಗಾರಿಕೆ ಬದಲಾಗಿದೆ. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯರ್ತರು ಕೇಸರಿ ಶಾಲು ಹಾಕಿ ಮತ ಯಾಚನೆ ಮಾಡುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಾಂಗ್ರೆಸ್ ನ ಬದಲಾದ ಈ ಚುನಾವಣಾ ಪ್ರಚಾರ ವೈಖರಿಗೆ ಭಾರೀ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ವಿರುದ್ಧ ಕೆಲ ಮುಸ್ಲಿಂ ಸಂಘಟನೆಗಳು ಕೂಡ ಕೆಂಗಣ್ಣು ಬೀರಿವೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಚುನಾವಣಾ ಪ್ರಚಾರ ವೈಖರಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ.
ಅಕ್ರಮ ಕಟ್ಟಡದಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ ತೆರೆದಿದೆ'
ಮಿಥುನ್ ರೈ ಸಾಮಾನ್ಯವಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ನಾಯಕರು ಹಾಕಿಕೊಳ್ಳುವ ತ್ರಿವರ್ಣ ಶಾಲನ್ನು ಹಾಕಿ ಕೊಳ್ಳದೇ ಕೆಲವೆಡೆ ಬಿಜೆಪಿ ಹಾಗೂ ಸಂಘಪರಿವಾರದ ನಾಯಕರು ಧರಿಸುವ ಕೇಸರಿ ಶಾಲನ್ನು ಹೆಚ್ಚು ಧರಿಸುತ್ತಿರುವುದು ಚರ್ಚೆಯ ವಿಷಯವಾಗಿದೆ.
ಈ ಹಿಂದಿನಿಂದಲೂ ಕಾಂಗ್ರೆಸ್ ಸಂಘ ಪರಿವಾರ ಪ್ರತಿಪಾದಿಸುವ ಹಿಂದುತ್ವವನ್ನು ವಿರೋಧಿಸುತ್ತಾ ಬಂದಿದೆ. ಆದರೆ ಈಗ ಚುನಾವಣಾ ಸಂದರ್ಭದಲ್ಲಿ ಕೇಸರಿ ಶಾಲು ಧರಿಸಿ ಕಾಂಗ್ರೆಸ್ ಕೂಡ ಹಿಂದುತ್ವ ಪ್ರತಿಪಾದಿಸುತ್ತಿದೆ ಎಂದು ಆರೋಪಿಸಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಮಿಥುನ್ ರೈ ಬಂಟ್ವಾಳ, ಬೆಳ್ತಂಗಡಿ ಸೇರಿದಂತೆ ಕ್ಷೇತ್ರದ ಇತರೆಡೆ ಪ್ರಚಾರ ಸಂದರ್ಭದಲ್ಲಿ ಕೇಸರಿ ಶಾಲು ಧರಿಸಿರುವುದು ಕಂಡುಬಂದಿತ್ತು. ಅಷ್ಟು ಮಾತ್ರವಲ್ಲದೇ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯು ಟಿ ಖಾದರ್ ಕೂಡ ಕೇಸರಿ ಶಾಲು ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಾಮದಪದವಿನಲ್ಲಿ ನಡೆದ ರೋಡ್ ಶೋ ಹಾಗೂ ಬೃಹತ್ ಕಾರ್ಯಕರ್ತರ ಸಭೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮೊದಲ ನೋಟಕ್ಕೆ ಇದು ಕಾಂಗ್ರೆಸ್ ಸಭೆಯೋ ಬಿಜೆಪಿ/ಸಂಘ ಪರಿವಾರದ ಸಭೆಯೋ ಎಂದು ಗೊಂದಲ ಸೃಷ್ಠಿಯಾಗಿವೆ ಎಂದು ಆರೋಪಿಸಲಾಗುತ್ತಿದೆ.
ವ್ಯಕ್ತವಾಗುತ್ತಿದೆ ಪರ-ವಿರೋಧ ಅಭಿಪ್ರಾಯ
ಕಾಂಗ್ರೆಸ್ ನ ಬದಲಾದ ಈ ಪ್ರಚಾರ ವೈಖರಿಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೆಲವರು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮೃದು ಹಿಂದುತ್ವ ಪಾಲಿಸುತ್ತಿದ್ದಾರೆ ಎಂದು ಟೀಕಿಸಿದರೆ ಇನ್ನು ಕೆಲವರು ಯಾರು ಯಾವ ಬಣ್ಣ ಬೇಕಾದರೂ ಬಳಸಬಹುದು. ಅದು ಮುಖ್ಯ ಅಲ್ಲ ಎಂದು ಅವರನ್ನು ಸಮರ್ಥಿಸಿಕೊಂಡಿದ್ದಾರೆ.
'ದ.ಕ.ದಲ್ಲಿ ಕಾಂಗ್ರೆಸ್ ಗೆಲ್ಲಲ್ಲ, ಆದರೂ ತಿರುಕನ ಕನಸು ಕಾಣುತ್ತಿದೆ'
ಈಗ ರಾಷ್ಟ್ರವಾದ ಮುಂದಿಟ್ಟು ಪ್ರಚಾರ
ಕೇಸರಿ ಶಾಲು ಹಾಕಿದರೆ ಮತ ಸಿಗುವುದಿಲ್ಲ ಎಂದು ಕೆಲವರು ಕಾಲೆಳೆದಿದ್ದಾರೆ. ಬಿಜೆಪಿ ಹಿಂದುತ್ವ ಪ್ರತಿಪಾದನೆಯಿಂದ ಹಿಂದೆ ಸರಿದು ಈಗ ರಾಷ್ಟ್ರವಾದವನ್ನು ಮುಂದಿಟ್ಟು ಪ್ರಚಾರ ನಡೆಸುತ್ತಿದೆ. ಆದರೆ ಕಾಂಗ್ರೆಸ್ ಇನ್ನು ಹಿಂದುತ್ವದ ಮೂಲಕ ಮತ ಗಳಿಸಲು ಮುಂದಾಗುತ್ತಿದೆ ಎಂದು ವಿಮರ್ಶೆ ಮಾಡಲಾಗುತ್ತಿದೆ.
ಕೇಸರಿ ಬಣ್ಣ ಕುರಿತು ಹೆಚ್ಚಾದ ಚರ್ಚೆ
ಕರಾವಳಿಯ ಜಿಲ್ಲೆಗಳು ಹೇಳಿ ಕೇಳಿ ಬಿಜೆಪಿಯ ಭದ್ರಕೋಟೆ . ಈ ಪ್ರದೇಶವನ್ನು ಹಿಂದುತ್ವದ ಘಡ ಎಂದೇ ಗುರುತಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮತ ಬೇಟೆಗೆ ಕಾಂಗ್ರೆಸ್ ಕೇಸರಿಯನ್ನು ಬಳಸುತ್ತಿದೆ ಎಂದು ವಿಮರ್ಶಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ಕೇಸರಿ ಶಾಲಿನ ಚರ್ಚೆಯ ಕಾವು ಇನ್ನಷ್ಟು ಹೆಚ್ಚಾಗಲಿದೆ.