ಕರಾವಳಿಯಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ 'ತ್ರಿಮೂರ್ತಿ'ಗಳು ಕಾರಣ: ದಿನೇಶ್ ಅಮೀನ್ ಮಟ್ಟು
ಮಂಗಳೂರು, ಆಗಸ್ಟ್ 11: ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿಗೆ ತ್ರಿಮೂರ್ತಿಗಳಾದ ವೀರಪ್ಪ ಮೊಯ್ಲಿ, ಜನಾರ್ಧನ ಪೂಜಾರಿ, ಆಸ್ಕರ್ ಫರ್ನಾಂಡಿಸ್ ಕಾರಣ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ಮಟ್ಟು ಹೇಳಿದರು.
ಬಿ.ವಿ.ಕಕ್ಕಿಲ್ಲಾಯರ ಜನ್ಮ ಶತಾಬ್ದಿಯ ಪ್ರಯುಕ್ತ ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು .
ಕಳೆದ ಲೋಕಸಭಾ ಹಾಗು ವಿಧಾನ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ಕರಾವಳಿಯಕಾಂಗ್ರೆಸ್ ನ ತ್ರಿಮೂರ್ತಿ ಗಳೇ ನೇರ ಕಾರಣ . ದಕ್ಷಿಣ ಕನ್ನಡ ದಲ್ಲಿ ಕಾಂಗ್ರೆಸ್ ಸೋಲಿಗೆ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ ಮತ್ತು ಉಡುಪಿ ಯಲ್ಲಿ ಆಸ್ಕರ್ ಫೆರ್ನಾಂಡೀಸ್ ಅವರೇ ನೇರ ಕಾರಣ ಎಂದು ಅವರು ಆರೋಪಿಸಿದರು.
ಕರ್ನಾಟಕದಲ್ಲಿ ಭೂ ಸುಧಾರಣೆ ವಿಚಾರದಲ್ಲಿ ಮಾತನಾಡಿದ ಅವರು ಭೂ ಸುಧಾರಣೆ ಕಾಯ್ದೆಯು ದೇವರಾಜ ಅರಸರ ಅವಸರದ ಕ್ರಾಂತಿಕಾರಿ ತೀರ್ಮಾನವಾಗಿತ್ತು. ಹಿಂದುಳಿದ ವರ್ಗದವರಿಗೆ ರಾಜಕೀಯ ಸ್ಥಾನಮಾನ ನೀಡುವುದಕ್ಕಾಗಿ ಅವರು ಪೂಜಾರಿಯಂತಹವರಿಗೆ ಟಿಕೆಟ್ ಕೊಡಿಸಿ ಬೆಳೆಸಿದರು. ಆದರೆ ಕರಾವಳಿಯ ಈ ಮೂವರು ಕಾಂಗ್ರೆಸ್ ನಾಯಕರು ಎಂದಿಗೂ ಕೂಡ ಭೂ ಸುಧಾರಣೆಯ ಕಾಯ್ದೆ ಜಾರಿಗೊಳ್ಳುವಲ್ಲಿ ದೇವರಾಜ ಅರಸು ಅವರ ಪಾತ್ರದ ಬಗ್ಗೆ ಹೇಳಿಕೊಳ್ಳಲಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಪೂಜಾರಿ, ಮೊಯ್ಲಿ, ಆಸ್ಕರ್ ಫೆರ್ನಾಂಡೀಸ್ ವಾಸ್ತವ ಸ್ಥಿತಿಯನ್ನು ಯುವ ಪೀಳಿಗೆಯ ಮುಂದೆ ಆವಾಗಲೆ ಇಟ್ಟಿದ್ದರೆ ಇಂದು ಯುವ ಜನತೆ ಬಿಜೆಪಿಯತ್ತ ವಾಲುತ್ತಿರಲಿಲ್ಲ. ಭೂ ಸುಧಾರಣೆಯ ಕಾಯ್ದೆಯ ಫಲಾನುಭವಿಗಳ ಮಕ್ಕಳು ಕೇಸರಿ ಪಟ್ಟಿ ಕಟ್ಟಿಕೊಳ್ಳುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.