ಲೋಕಸಭಾ ಚುನಾವಣೆಗೆ ದ.ಕ.ದಲ್ಲಿ ಕೈ, ಬಿಜೆಪಿಯಿಂದ ಭಾರೀ ಸಿದ್ಧತೆ
ಮಂಗಳೂರು, ಫೆಬ್ರವರಿ 26: ಲೋಕಸಭಾ ಚುನಾವಣೆಯ ಅಧಿಸೂಚನೆ ಘೋಷಣೆ ಹತ್ತಿರವಾಗುತ್ತಿದೆ. ಮಾರ್ಚ್ ಮೊದಲ ವಾರದಲ್ಲಿ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಪರಿಣಾಮ ಜಿಲ್ಲಾಡಳಿತಗಳು ಚುನಾವಣೆಗೆ ಸಕಲ ಸಿದ್ಧತೆ ನಡೆಸುತ್ತಿವೆ.
ಚುನಾವಣೆಯ ಅಖಾಡಕ್ಕೆ ಇಳಿಯಲು ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದ್ದು, ಕರಾವಳಿಯಲ್ಲಿ ಪ್ರಮುಖವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣೆಗೆ ಭಾರೀ ಸಿದ್ಧತೆ ಆರಂಭಿಸಿವೆ.
'ಮೋದಿ ಮತ್ತೊಮ್ಮೆ ಪ್ರಧಾನಿ ಆಗದಿದ್ದರೆ ಭಾರತ ಐವತ್ತು ವರ್ಷ ಹಿಂದಕ್ಕೆ'
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಬರುವ ಲೋಕಸಭಾ ಚನಾವಣೆಯ ಅಖಾಡಕ್ಕೆ ಇಳಿಸಲು ಕಾಂಗ್ರೆಸ್ನಲ್ಲಿ ಅಭ್ಯರ್ಥಿ ಆಯ್ಕೆಯೇ ಕಗ್ಗಂಟಾಗಿ ಪರಿಣಮಿಸಿದೆ. ಕೈ ಪಾಳಯದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಹೆಸರು ಮುಂಚುಣಿಯಲ್ಲಿದೆ .
ಈ ನಡುವೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ , ಮಾಜಿ ಶಾಸಕ ಜೆ ಆರ್ ಲೋಬೊ ಹೆಸರುಗಳು ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿವೆ.
ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ
ಮಾಜಿ ಸಚಿವ, ಹಿರಿಯ ಕಾಂಗ್ರೆಸ್ಸಿಗ ಬಿ. ಜನಾರ್ಧನ ಪೂಜಾರಿ ಕೂಡ ಹೈಕಮಾಂಡ್ ಒಪ್ಪಿದರೆ ಚುನಾವಣೆಗೆ ನಿಲ್ಲುವ ಆಶಯ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆನ್ನುವ ಹಕ್ಕೊತ್ತಾಯ ಮುಸ್ಲಿಂ ಸಂಘಟನೆಗಳಿಂದ ಕೇಳಿಬರುತ್ತಿದೆ. ಹಾಗೆಯೇ ದಕ್ಷಿಣ ಕನ್ನಡ ಮುಸ್ಲಿಂ ಸಂಘಟನೆಗಳ ಒಕ್ಕೂಟ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದು, ಕಾಂಗ್ರೆಸ್ ಒಂದು ವೇಳೆ ವಿನಯ್ ಕುಮಾರ್ ಸೊರಕೆ ಅವರಿಗೆ ಟಿಕೆಟ್ ನೀಡಿದರೆ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ತಿಳಿಸಿವೆ.
ನಳಿನ್ ಕುಮಾರ್ ಕಟೀಲ್ ರನ್ನು ಬದಲಾಯಿಸಿ
ಇನ್ನೊಂದೆಡೆ ಕೇಸರಿ ಪಾಳಯದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳನ್ನು ಬದಲಾಯಿಸುವ ಕುರಿತು ಮಾತು ಕೇಳಿ ಬರುತ್ತಿದೆ. ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾಯಿಸಬೇಕೆನ್ನುವ ಬೇಡಿಕೆ ಬಿಜೆಪಿ ಕಾರ್ಯಕರ್ತರಿಂದಲೇ ಕೇಳಿ ಬರುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಪಕ್ಷದೊಳಗೆಯೇ ಭಿನ್ನಮತ ಶುರುವಾಗಿದೆ. ಏಳೆಂಟು ತಿಂಗಳ ಹಿಂದೆ ಮರೆಯಲ್ಲಿ ನಡೆಯುತ್ತಿದ್ದ ಮುಸುಕಿನ ಗುದ್ದಾಟ ತೆರೆ ಮೇಲೂ ನಡೆಯುವಂತಾಗಿದೆ. ಅಷ್ಟಕ್ಕೂ ನಳಿನ್ ವಿರುದ್ಧ ಬಿಜೆಪಿಯೊಳಗಿನ ಬಣವೊಂದು ಮುನಿಸಿಕೊಂಡು ನಳಿನ್ ಕುಮಾರ್ ಹಠಾವೋ ಅನ್ನೋ ಅಭಿಯಾನವೂ ಆರಂಭ ಮಾಡಿತ್ತು. ಅದರ ಲಾಭ ಪಡೆಯಲು ಪ್ರಭಾವಿ ಹಿಂದೂ ನಾಯಕರಾಗಿ ಗುರುತಿಸಿಕೊಂಡಿರುವ ಸತ್ಯಜಿತ್ ಸುರತ್ಕಲ್ ಮುಂದಾಗಿದ್ದಾರೆ.
ಸುಮಲತಾ ಅಂಬರೀಶ್ ಪರ ರೈತಸಂಘ ನಿಲ್ಲುತ್ತಾ?
ಸತ್ಯಜಿತ್ ಹಿಂದೆ ಸಾವಿರಾರು ಯುವಕರು
ಕಳೆದ 25 ವರುಷಗಳಿಂದ ಹಿಂದೂ ಜಾಗರಣ ವೇದಿಕೆಯ ಪ್ರಮುಖನಾಗಿ ಗುರುತಿಸಿಕೊಂಡಿದ್ದ ಸತ್ಯಜಿತ್ ಬೆನ್ನಿಗೆ ಸಾವಿರಕ್ಕೂ ಮಿಕ್ಕಿ ಯುವಕರಿದ್ದಾರೆ. ಅದರ ಪರಿಣಾಮ ಇದೀಗ ಫ್ಲೆಕ್ಸ್ ಗಳು ಕಾಣಿಸತೊಡಗಿದೆ. ಸತ್ಯಜಿತ್ ಸುರತ್ಕಲ್ ಅಭಿಮಾನಿಗಳು ಎನ್ನುವ ಹೆಸರಿನಲ್ಲಿ 'ಮೋದಿ ಮತ್ತೊಮ್ಮೆ ಆಯ್ಕೆಗಾಗಿ ನಮ್ಮ ಆಯ್ಕೆ ಸತ್ಯಜಿತ್ ಸುರತ್ಕಲ್' ಅನ್ನೋ ಫ್ಲೆಕ್ಸ್ ಗಳು ಜಿಲ್ಲೆಯಾದ್ಯಂತ ಕಾಣಿಸತೊಡಗಿವೆ. ನಳಿನ್ ಬದಲಾವಣೆ ಒತ್ತಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಆಂದೋಲನವೇ ನಡೆಯುತ್ತಿದೆ. ಪಂಪ್ ವೆಲ್, ತೊಕ್ಕೊಟ್ಟು ಫ್ಲೈ ಓವರ್ ಹಾಗೂ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ನಳಿನ್ ಅವರನ್ನು ಕಟಕಟೆಯಲ್ಲಿ ನಿಲ್ಲಿಸಲಾಗಿದೆ. ಈ ವಿವಾದ ಆಣೆ ಪ್ರಮಾಣದವರೆಗೆ ತಲುಪಿದೆ.
ಸ್ಥಳೀಯ ಸಮಸ್ಯೆ ಕೈಗೆತ್ತಿಕೊಂಡ ಕಾಂಗ್ರೆಸ್
ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ಜಿಲ್ಲೆಯಲ್ಲಿ ಈಗಾಗಲೇ ಅಖಾಡಕ್ಕೆ ಇಳಿದಿದೆ. ಕಾಂಗ್ರೆಸ್ ಪಕ್ಷವು ಎಲ್ಲಾ ಪ್ರಮುಖ ಸ್ಥಳೀಯ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ನಡೆಸಲಾರಂಭಿಸಿದೆ. ರಾಷ್ಟ್ರೀಯ ಹೆದ್ದಾರಿ, ಫ್ಲೈಓವರ್ ಕಾಮಗಾರಿ ವಿಳಂಬ, ವಿಜಯ ಬ್ಯಾಂಕ್ ವಿಲೀನ ಮುಂತಾದ ವಿಷಯಗಳ ಕುರಿತು ಜಿಲ್ಲೆಯಲ್ಲಿ ಕಾಂಗ್ರೆಸ್ ಬೀದಿಗಿಳಿದು ಹೋರಾಟ ನಡೆಸಿದೆ. ಹೆದ್ದಾರಿ ಕಾಮಗಾರಿಯಲ್ಲಿ ವಿಳಂಬ ನೀತಿಯ ವಿರುದ್ಧ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆದಿದೆ. ವಿಜಯ ಬ್ಯಾಂಕ್ ವಿಲೀನ ಕುರಿತು ಕೇಂದ್ರ ಸರಕಾರದ ನೀತಿಯನ್ನು ಪ್ರತಿಭಟಿಸಿ ಜಿಲ್ಲೆಯಲ್ಲಿರುವ ಬಹುತೇಕ ವಿಜಯ ಬ್ಯಾಂಕ್ ಶಾಖೆಯೆದುರು ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಆದರೆ ಬಿಜೆಪಿಯಿಂದ ಇದನ್ನು ಪರಿಣಾಮಕಾರಿಯಾಗಿ ಎದುರಿಸುವ ಬಗ್ಗೆ ಯಾವುದೇ ಕಾರ್ಯಕ್ರಮ ಇದುವರೆಗೆ ರೂಪುಗೊಂಡಿಲ್ಲ.