ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್ ದಲಿತರ ಜಪ: ಬಿಜೆಪಿ ಟೀಕೆ
ಮಂಗಳೂರು, ಮೇ.11: ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್ಸಿಗರಿಗೆ ದಲಿತರ ನೆನಪಾಗುತ್ತದೆ. ನಿರಂತರವಾಗಿ ಕಾಂಗ್ರೆಸ್ ದಲಿತರನ್ನು ವಂಚಿಸಿ ಕೊಂಡು ಬಂದ ಕಾರಣ ಈ ಬಾರಿ ಚುನಾವಣೆಯಲ್ಲಿ ದಲಿತ ಸಮುದಾಯ ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಹೇಳಿದೆ.
ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಎಸ್.ಸಿ ಮೋರ್ಚಾ ಮುಖಂಡ ಬಿ.ಎಸ್. ವಸಂತ್ಕುಮಾರ್, ಬಿಜೆಪಿ ದಲಿತ ಅಭಿವೃದ್ದಿಯನ್ನು ಆದ್ಯತೆಯ ಮೇರೆಗೆ ಸ್ವೀಕರಿಸಿದೆ.
ಬಿ.ಎಸ್.ಯಡಿಯೂರಪ್ಪ ಸರಕಾರವಿದ್ದಾಗ ಶಿಲಾನ್ಯಾಸ ಮಾಡಿರುವ ಅಂಬೇಡ್ಕರ್ ಭವನ ಯೋಜನೆಯನ್ನು ಕಾಂಗ್ರೆಸ್ ನೆನೆಗುದಿಗೆ ಹಾಕಿದೆ. ಇದು ಖಂಡಿತವಾಗಿ ದಲಿತ ವಿರೋಧಿ ನೀತಿ. ಇಂತಹವರಿಗೆ ಮತ ಕೇಳುವ ಹಕ್ಕು ಎಲ್ಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಮೇಯರ್, ಉಪಮೇಯರ್ ಹುದ್ದೆಯನ್ನು ದಲಿತರಿಗೆ ನೀಡಿತ್ತು. ಆದರೆ ಕಾಂಗ್ರೆಸ್ ಯಾಕಾಗಿ ನೀಡಿಲ್ಲ. ಅಧಿಕಾರಕ್ಕೆ ಬಂದಾಗ ಬೇರೆಯವರು, ಮತ ವಿಚಾರ ಬಂದಾಗ ಮಾತ್ರ ಕಾಂಗ್ರೆಸ್ ಗೆ ದಲಿತರು ಬೇಕು. ಇಂತಹ ನೀತಿ ಕಾಂಗ್ರೆಸ್ ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ದಲಿತ ಸಮುದಾಯ ಬಿಜೆಪಿಯನ್ನು ಗೆಲ್ಲಿಸಲಿದೆ ಎಂದು ಅವರು ಹೇಳಿದರು.
ಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು , ಯಾಕೆ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಮುಂದೆ ಬರಲಿಲ್ಲ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಓರ್ವ ದಲಿತ ನಾಯಕರನ್ನು ರಾಷ್ಟ್ರಪತಿ ಹುದ್ದೆ ನೀಡಿ ಗೌರವಿಸುತ್ತದೆ ಎಂದಾದರೆ, ಕಾಂಗ್ರೆಸ್ ಇದುವರೆಗೆ 70 ವರ್ಷಗಳಿಂದ ಮಾಡಿರುವುದು ಬರೀ ಮೋಸದ ನಾಟಕವಲ್ಲದೇ ಮತ್ತೇನು? ಕಾಂಗ್ರೆಸಿನ ಎಲ್ಲ ದಲಿತ ವಿರೋಧಿ ನೀತಿಗಳಿಗೆ ಈ ಬಾರಿ ತಕ್ಕ ಉತ್ತರ ದೊರೆಯಲಿದೆ ಎಂದು ಹೇಳಿದರು.