ಕರಾವಳಿ ತೆಂಗು ಬೆಳೆಗಾರರಿಗೆ ಕಪ್ಪು ತಲೆ ಹುಳದ ಚಿಂತೆ
ಮಂಗಳೂರು, ಜೂನ್ 5: ಕರಾವಳಿ ಭಾಗದ ತೆಂಗು ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ಕಪ್ಪು ತಲೆ ಹುಳ ಬಾಧೆಯಿಂದ ಅವರು ತಮ್ಮ ತೆಂಗಿನ ಮರಗಳನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ವಿಶೇಷವಾಗಿ ಉಳ್ಳಾಲ, ಮಂಜನಾಡಿ, ಕಲ್ಲಾಪು ಭಾಗಗಳಲ್ಲಿ ಹಾಗೂ ನೇತ್ರಾವತಿ ನದಿ ತೀರಗಳಲ್ಲಿ ಇಂತಹ ಕಪ್ಪು ತಲೆಯ ಹುಳಗಳ ಬಾಧೆ ಕಂಡುಬಂದಿದೆ.
ತೆಂಗಿನ ಮರದ ಗರಿಗಳು ಬೆಂಕಿ ಹಚ್ಚಿದ ರೀತಿಯಲ್ಲಿ ಸಂಪೂರ್ಣ ಸುಟ್ಟು ಹೋದಂತೆ ಕಂಡು ಬರುತ್ತಿವೆ. ಆರಂಭದಲ್ಲಿ ತುದಿಯು ಕಪ್ಪಾಗಿ ಒಣಗುತ್ತಾ, ತೆಂಗಿನ ಕಾಯಿ ಕೂಡಾ ಚಿಕ್ಕದಾಗಿ ಒಣಗಲು ಶುರುವಾಗುತ್ತದೆ. ಏನೇ ರಾಸಾಯನಿಕ ಪ್ರಯೋಗ ಮಾಡಿದರೂ ಈ ರೋಗವನ್ನು ಶಮನಗೊಳಿಸಲು ಸಾಧ್ಯವಾಗಿಲ್ಲ ಎನ್ನುವುದು ರೈತರ ಅಳಲು.
"ಇದು ಕಪ್ಪು ತಲೆ ಹುಳ ಬಾಧೆಯ ಸಮಸ್ಯೆ. ನಾವು ಇದಕ್ಕೆ ಈಗಾಗಲೇ ಸಿಪಿಸಿಆರ್'ಐ ಕಾಸರಗೋಡು ಮತ್ತು ಕೇಂದ್ರೀಯ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ತೋಟಗಾರಿಕಾ ಇಲಾಖೆ ಸಂಯೋಗದಲ್ಲಿ ಈಗಾಗಲೇ ಡಿಸೆಂಬರಿನಲ್ಲಿ ತರಬೇತಿಯನ್ನು ರೈತರಿಗೆ ನೀಡಿದ್ದೇವೆ. ತೋಟಗಾರಿಕಾ ಇಲಾಖೆಯಿಂದ ಇದಕ್ಕೆ ಪರ್ಯಾಯವಾಗಿ ಗೋನಿಯೋಜಿಸ್ ಪರೋಪಜೀವಿಯನ್ನು ಉತ್ಪಾದನೆ ಮಾಡಿ ಕಪ್ಪು ತಲೆ ಹುಳ ಬಾಧೆ ಕಂಡುಬರುತ್ತಿರುವ ಮರಗಳಿಗೆ ಬಿಡಲಾಗಿದೆ. ಪ್ರತೀ 15 ದಿನಕ್ಕೊಮ್ಮೆ ಇವುಗಳನ್ನು ಬಿಡುಗಡೆ ಮಾಡಿದರೆ ಹುಳಬಾಧೆ ಕಡಿಮೆಯಾಗುತ್ತದೆ," ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಸೀಮಾ.
"ವಿಶೇಷವಾಗಿ ಮಳೆ ಇಲ್ಲದ ಸಂದರ್ಭದಲ್ಲಿ ಬಿರುಬಿಸಿಲಿನ ತೀವ್ರತೆಗೆ ಸಿಲುಕಿ ಮರ ಒಣಗಿದಂತೆ ಕಂಡುಬರುತ್ತಿದೆ. ಇದಕ್ಕೆ ಯಾರೂ ಆತಂಕ ಪಡಬೇಕಾಗಿಲ್ಲ. ಗಿಡಗಳು ಸಾಯುವುದಿಲ್ಲ. ಮಳೆ ಬಂದ ಕೂಡಲೇ ಇದು ಸರಿಯಾಗುತ್ತದೆ. ಹೊಸ ಗರಿಗಳು ಬರುತ್ತವೆ" ಎನ್ನುವುದು ನಿರ್ದೇಶಕಿ ಸೀಮಾ ಸಲಹೆಯಾಗಿದೆ.