ಮೀನುಗಾರಿಕಾ ಬೋಟ್ಗಳಿಗೆ ತೆರಿಗೆ ರಹಿತ ಡೀಸೆಲ್, ಪ್ರಮಾಣವೂ ಹೆಚ್ಚಳ; ಅಧಿಕಾರಿಗಳಿಗೆ ಸಿಎಂ ಸೂಚನೆ
ಮಂಗಳೂರು, ಆಗಸ್ಟ್ 22: ಕರಾವಳಿಯ ಮೀನುಗಾರರಿಗೆ ರಾಜ್ಯ ಸರಕಾರ ಭರ್ಜರಿ ಗಿಫ್ಟ್ ನೀಡಿದೆ. ಯಾಂತ್ರೀಕೃತ ಮೀನುಗಾರಿಕಾ ದೋಣಿಗಳಿಗೆ ತೆರಿಗೆ ರಹಿತ ಡಿಸೇಲ್ ನೀಡುವ ಮೀನುಗಾರರ ಬಹುದಿನಗಳ ಬೇಡಿಕೆಗೆ ರಾಜ್ಯ ಸರಕಾರ ಸ್ಪಂದಿಸಿದೆ.
ಮೀನುಗಾರರ ಯಾಂತ್ರೀಕೃತ ಬೋಟ್ಗಳಿಗೆ ಡೆಲಿವರಿ ಪಾಯಿಂಟ್ನಲ್ಲಿ ತೆರಿಗೆ ರಹಿತ ಡೀಸೆಲ್ ನೀಡುವಂತೆ ಹಾಗೂ ತೆರಿಗೆ ರಹಿತ ಡೀಸೆಲ್ ಪ್ರಮಾಣವನ್ನು 400 ಲೀಟರುಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.
ಮೀನುಗಾರಿಕೆಗೆ ತಟ್ಟಿದ ಫಿಶ್ಮೀಲ್ ಉದ್ದಿಮೆಗಳ ಮುಷ್ಕರದ ಬಿಸಿ
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ಅವರ ನೇತೃತ್ವದ ಮಲ್ಪೆ ಮೀನುಗಾರರ ನಿಯೋಗವು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ವಿವರಿಸಿ, ಕೆಲವು ಬೇಡಿಕೆಗಳನ್ನು ಮುಂದಿಟ್ಟಿತ್ತು.
ಕಳೆದ ಎರಡು ವರ್ಷಗಳಿಂದ ಡೀಸೆಲ್ ಬೆಲೆ ಏರಿಕೆ, ಮತ್ಸ್ಯ ಕ್ಷಾಮ ಹಾಗೂ ಮೀನಿಗೆ ಯೋಗ್ಯ ಧಾರಣೆ ಸಿಗದೇ ಮೀನುಗಾರರು ಸುಸ್ತಿದಾರರಾಗಿದ್ದಾರೆ. ಪ್ರಸ್ತುತ ಮೀನುಗಾರರಿಂದ ಮಾರಾಟ ತೆರಿಗೆ ಪಡೆದುಕೊಂಡು ನಂತರ ಅವರ ಖಾತೆಗೆ ಈ ಮೊತ್ತವನ್ನು ಸರ್ಕಾರ ಜಮಾ ಮಾಡುತ್ತಿದೆ. ಈ ತೆರಿಗೆ ಹಣ ಕ್ರಮಬದ್ಧವಾಗಿ ಬಾರದೆ ಇರುವ ಕಾರಣ ತೊಂದರೆಯಾಗುತ್ತಿದೆ. ಆದ್ದರಿಂದ ಹಿಂದಿನಂತೆ ಡೆಲಿವರಿ ಪಾಯಿಂಟ್ನಲ್ಲಿ ತೆರಿಗೆ ರಹಿತ ಡೀಸೆಲ್ ನೀಡುವಂತೆ ಹಾಗೂ ಡೀಸೆಲ್ ಪ್ರಮಾಣ ಹೆಚ್ಚಿಸುವಂತೆ ನಿಯೋಗ ಮನವಿ ಸಲ್ಲಿಸಿತ್ತು.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಹಿಂದಿನ ಪದ್ಧತಿಯಂತೆ ಡೀಸೆಲ್ ಒದಗಿಸುವಂತೆ ಹಾಗೂ ಡೀಸೆಲ್ ಪ್ರಮಾಣವನ್ನು 400 ಲೀಟರುಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಮಲ್ಪೆಯ ಸುರ್ವಣ ತ್ರಿಭುಜ ಎಂಬ ಮೀನುಗಾರಿಕಾ ದೋಣಿ ಮುಳುಗಿ ಸಮುದ್ರದಲ್ಲಿ ನಾಪತ್ತೆಯಾಗಿರುವ ಮೀನುಗಾರರ ಕುಟುಂಬಗಳು ಸಂಕಷ್ಟದಲ್ಲಿದ್ದು, ಅವರಿಗೆ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯಿಂದ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳುವಂತೆ ಮೀನುಗಾರರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.