ದಕ್ಷಿಣ ಕನ್ನಡ ಸಂಸದರು, ಶಾಸಕರಿಗೆ ಶೇಮ್ ಶೇಮ್...!
ಮಂಗಳೂರು, ನವೆಂಬರ್ 20: ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರದ ರಸ್ತೆಗಳು ಗುಂಡಿಮಯವಾಗಿಬಿಟ್ಟವು. ಇದೀಗ ಮಳೆ ನಿಂತು ಸುಡು ಬಿಸಿಲು ಆರಂಭವಾಗಿದ್ದರೂ ರಸ್ತೆಗಳ ಗುಂಡಿಗಳಲ್ಲಿ ಮಾತ್ರ ಬದಲಾವಣೆಯಾಗಿಲ್ಲ.
Recommended Video
ಹೇಗಿದ್ದವೋ ಹಾಗೇ ಇವೆ. ಪ್ರತಿಭಟನೆಯ ರುಚಿ ತೋರಿಸಿದರೂ ರಸ್ತೆ ಸ್ಥಿತಿಗತಿ ಮಾತ್ರ ಸರಿಹೋಗಿಲ್ಲ. ಇದರಿಂದ ಬೇಸತ್ತ ಜನ ಈಗ ತಾವೇ ರಸ್ತೆಗಿಳಿದು ಗುಂಡಿ ಮುಚ್ಚುವ ಕಾರ್ಯ ಶುರು ಮಾಡಿದ್ದಾರೆ.
ರಸ್ತೆ, ಫುಟ್ ಪಾತ್ ಸರಿಮಾಡಲು ಮುಂದಾದ ಜನ
ಮಂಗಳೂರಿನಲ್ಲಿ ಈ ಬಾರಿ ಎರಡು ತಿಂಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ನಗರ ಹಾಗೂ ಹೊರವಲಯದ ಅದೆಷ್ಟೋ ರಸ್ತೆಗಳು ಗುಂಡಿಮಯವಾದವು. ಇದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಈ ಬಗ್ಗೆ ಜಿಲ್ಲಾಧಿಕಾರಿ, ಶಾಸಕರು, ಸಂಸದರು ಹೀಗೆ ಸಂಬಂಧಪಟ್ಟವರಿಗೆ ಎಷ್ಟೇ ಮನವಿ ಕೊಟ್ಟರೂ ರಸ್ತೆಗಳ ಗುಂಡಿ ಮಾತ್ರ ಸರಿಪಡಿಸಲಿಲ್ಲ. ಇದರಿಂದ ಬೇಸತ್ತ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಒಟ್ಟಾಗಿ ತಾವೇ ರಸ್ತೆ ಮತ್ತು ಫುಟ್ ಪಾತ್ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಬೆಂಗಳೂರು ರಸ್ತೆ ಗುಂಡಿ ಫೋಟೋ ಶೂಟ್ ವೈರಲ್
ಸಹಾಯಕ್ಕೆ ಕೈ ಚಾಚಿದ ದಾನಿಗಳು
ಜನರ ಈ ಕಾರ್ಯಕ್ಕೆ ಕೆಲ ದಾನಿಗಳೂ ಮುಂದಾಗಿದ್ದು ಸಿಮೆಂಟ್, ಕಾಂಕ್ರೀಟ್ ಗೆ ಬೇಕಾದ ಹಣ ನೀಡಿದ್ದಾರೆ. ಹಾಗಾಗಿ ಗುಂಡಿ ಮುಚ್ಚುವ ಕಾರ್ಯವನ್ನು ಸಾರ್ವಜನಿಕರೇ ಮುಂದುವರೆಸಿದ್ದಾರೆ. ಈಗಾಗಲೇ ನಗರದ ಜ್ಯೋತಿ ಸರ್ಕಲ್, ನಂತೂರು, ಕದ್ರಿ ಸ್ಟೇಟ್ ಬ್ಯಾಂಕ್ ಹೀಗೆ ತಂಡ ತಂಡವಾಗಿ ಕೆಲಸ ಮಾಡಿ ಹತ್ತಾರು ಕಿ.ಮೀ ಗುಂಡಿ ಮುಚ್ಚಿರುವ ನಾಗರೀಕರು ಮುಂದೆ ತಲಪಾಡಿ ರಸ್ತೆ, ಮಾಣಿ -ಪುತ್ತೂರು, ಮೈಸೂರು ಪುತ್ತೂರು ಸುಳ್ಳ, ಬೆಳ್ತಂಗಡಿ- ಧರ್ಮಸ್ಥಳ, ಮೂಡಬಿದಿರೆ ರಸ್ತೆಗಳಲ್ಲೂ ಗುಂಡಿ ಮುಚ್ಚುವುದಾಗಿ ತಿಳಿಸಿದ್ದಾರೆ.
ಹೆಚ್ಚಾಗುತ್ತಿರುವ ಸಹಭಾಗಿತ್ವ
ಇನ್ನು ಕೆಲಸ ಪ್ರಾರಂಭವಾಗುವಾಗ ನಾಲ್ಕೈದು ಜನ ಪ್ರಾರಂಭ ಮಾಡಿದ್ದು ಈಗ ಸಾರ್ವಜನಿಕರ ಸಹಭಾಗಿತ್ವ ಹೆಚ್ಚಾಗುತ್ತಲೇ ಇದೆ. ಇನ್ನು ಸಂಸದ, ಶಾಸಕ ಮಹಾನಗರ ಪಾಲಿಕೆ ಮಾಡಬೇಕಾದ ಕೆಲಸವನ್ನು ಸಾರ್ವಜನಿಕರೇ ಮಾಡುತ್ತಿರುವುದಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ಸಂಸದರು, ಶಾಸಕರು ಹಾಗೂ ಪಾಲಿಕೆಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
6 ಸಾವಿರ ರಸ್ತೆ ಗುಂಡಿ ಮುಚ್ಚಿದ ಬಿಬಿಎಂಪಿ ಇತ್ತ ನೋಡಲಿ!
ಎಲ್ಲೆಡೆಯಿಂದ ಶ್ಲಾಘನೆ
ರಸ್ತೆ ಹೊಂಡ ಗುಂಡಿಗಳನ್ನ ಮುಚ್ಚಬೇಕಾದ ಕೆಲಸ ಸರ್ಕಾರದ್ದು. ಆದರೆ ಸರ್ಕಾರ ಮಾಡಬೇಕಿದ್ದ ಕೆಲಸ ಅವರಿಂದ ತಕ್ಷಣ ಸಾಧ್ಯವಾಗಲ್ಲ ಅಂತ ಗೊತ್ತಾದಾಗ ಸಾರ್ವಜನಿಕರು ಸರ್ಕಾರದ ಕೆಲಸ ನಮ್ಮದೇ ಕೆಲಸ. ನಾವೇ ಸರ್ಕಾರ ಅಂತ ತಿಳಿದು ಗುಂಡಿ ಮುಚ್ಚೋ ಕೆಲಸ ಮಾಡುತ್ತಿರುವುದಕ್ಕೆ ಶ್ಲಾಘನೆಯೂ ವ್ಯಕ್ತಗೊಂಡಿದೆ.