ಪ್ರತಿವರ್ಷ ಬಂಟ ಮನೆತನಗಳಿಗೆ ಗೌರವ ಸಲ್ಲಿಸುವ ಕ್ರೈಸ್ತರು!
ಮಂಗಳೂರು, ನವೆಂಬರ್ 26; ಕಾಸರಗೋಡಿನಿಂದ ಉಡುಪಿವರೆಗಿನ ಕರಾವಳಿ ಪ್ರದೇಶವು ಕೋಮುಸೂಕ್ಷ್ಮ ಪ್ರದೇಶವೆಂದು ಹಣೆಪಟ್ಟಿ ಹೊತ್ತುಕೊಂಡಿದೆ. ಇಲ್ಲಿ ಯಾವುದೇ ಗಲಭೆ, ಕಾದಾಟ, ಬೀದಿ ಕಾಳಗ ನಡೆದಲ್ಲಿ ಅದು ಕೋಮು ಸಂಘರ್ಷದೊಂದಿಗೆ ತಳಕು ಹಾಕೋದು ಸರ್ವೇ ಸಾಮಾನ್ಯ.
ಆದರೂ ಇನ್ನೂ ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ಕೋಮು ಸಾಮರಸ್ಯವನ್ನು ಜನತೆ ಉಳಿಸಿಕೊಂಡಿರೋದನ್ನು ನಾವು ಕಾಣುತ್ತಲೇ ಇರುತ್ತೇವೆ. ವಿಪರ್ಯಾಸವೆಂದರೆ ಇಂತಹ ಭಾವನಾತ್ಮಕ ವಿಚಾರಗಳು ಸಾಮಾನ್ಯವಾಗಿ ಸುದ್ದಿಯಾಗುವುದೇ ಇಲ್ಲ.
US: ಪ್ರತಿಭಟನಾಕಾರರ ಕಿಚ್ಚಿನಿಂದ 200 ವರ್ಷಗಳ ಐತಿಹಾಸಿಕ ಚರ್ಚ್ ಬೆಂಕಿಗೆ ಆಹುತಿ.!
ಇಂತಹದ್ದೇ ಒಂದು ಕೋಮು ಸಾಮರಸ್ಯದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆಯ ಕಿರೆಂ ಚರ್ಚ್ನಲ್ಲಿ ನಡೆಯುತ್ತದೆ. ಈ ಚರ್ಚ್ನ ವಾರ್ಷಿಕ ಹಬ್ಬಕ್ಕೆ ಸಂಬಂಧಪಟ್ಟಂತೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಈ ಹಬ್ಬ ಮಹತ್ವ ಪಡೆಯುವುದು ಪ್ರತಿಷ್ಠಿತ ಮನೆತನದ ಮೂರು ಹಿಂದೂ ಕುಟುಂಬಿಕರಿಗೆ.
ಗೋವಾ ಚುನಾವಣೆ: ಎಎಪಿ ಗೆದ್ದರೆ ಭಂಡಾರಿ ಸಮುದಾಯದ ವ್ಯಕ್ತಿ ಸಿಎಂ, ಕ್ರಿಶ್ಚಿಯನ್ ಡಿಸಿಎಂ
ಅದೇನಕ್ಕೆ ಎಂದು ಕೆದಕಲು ಹೊರಟಲ್ಲಿ ಈ ಘಟನೆ ಟಿಪ್ಪು ಕಾಲಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಅದು ಟಿಪ್ಪು ಸುಲ್ತಾನ್ ಕರಾವಳಿಯಲ್ಲಿ ತನ್ನ ಪ್ರಾಬಲ್ಯ ಹೊಂದಿದ್ದ ಸಮಯ. ಆತ ಬ್ರಿಟಿಷರ ವಿರುದ್ಧ ಕತ್ತಿ ಮಸೆಯುತ್ತಾ ಅವರನ್ನು ಹಿಮ್ಮೆಟ್ಟಿಸಲು ಪದೇ ಪದೇ ದಾಳಿಗಳನ್ನು ಮಾಡುತ್ತಲೇ ಇದ್ದ. ಆಗಾಗ ತನ್ನ ಸೈನ್ಯದೊಂದಿಗೆ ದಂಡೆತ್ತಿ ಬಂದು ಆಂಗ್ಲರ ವಿರುದ್ಧ ಸಮರ ಸಾರುತ್ತಿದ್ದ. ಇದು ಅನೇಕರ ಪ್ರಾಣಾಹುತಿಗೂ ಕಾರಣವಾಗಿತ್ತು. ಟಿಪ್ಪು ಸುಲ್ತಾನ್ಗೆ ಬ್ರಿಟಿಷರ ಮೇಲಿನ ರೋಷ ಇಲ್ಲಿನ ಕ್ರೈಸ್ತರ ಮೇಲೆ ತಿರುಗಿತ್ತು.
ಬಿಜೆಪಿ ಸರ್ಕಾರ ಟಿಪ್ಪು ಇತಿಹಾಸ ತಿರುಚಲು ಬಿಡಲ್ಲ: ಡಿ.ಕೆ ಶಿವಕುಮಾರ್
ಇದರಿಂದ ಚರ್ಚುಗಳ ಮೇಲೆ ಅತೀ ಹೆಚ್ಚಿನ ದಾಳಿಗಳು ನಡೆಯಿತು. ಇಂತಹ ದಾಳಿಯ ಸಂದರ್ಭ ತಮ್ಮನ್ನು ಹಾಗೂ ತಮ್ಮ ಚರ್ಚನ್ನು ರಕ್ಷಿಸಿರುವ ನೆನಪಿಗೊಸ್ಕರ ಪ್ರತೀ ವರ್ಷವೂ ಪ್ರತಿಷ್ಠಿತ ಮೂರು ಕುಟುಂಬಗಳಿಗೆ ಕೈಸ್ತ ಬಾಂಧವರು ಗೌರವ ಸಲ್ಲಿಸುವ ಸಂಪ್ರದಾಯವು ಈ ಚರ್ಚಿನಲ್ಲಿ ಈಗಲೂ ಆಚರಣೆಯಲ್ಲಿದೆ. ಕಿನ್ನಿಗೋಳಿ ಸಮೀಪದ ಐಕಳ ಗ್ರಾಪಂ ವ್ಯಾಪ್ತಿಯ ದಾಮಸ್ ಕಟ್ಟೆ ಕಿರೆಂ ರೆಮದಿ ಅಮ್ಮನವರ ಚರ್ಚ್ ಎಂದೇ ಪ್ರಸಿದ್ಧಿ ಹೊಂದಿರುವ ಈ ಚರ್ಚ್ ಸ್ಥಳೀಯ ಕ್ರೈಸ್ತರಿಂದ ನಿರ್ಮಾಣ ಆಗಿತ್ತು.
ಟಿಪ್ಪು ಸುಲ್ತಾನ್ 1784ರಲ್ಲಿ ಕಾರವಾರದಿಂದ ಕಾಸರಗೋಡಿನವರೆಗಿನ ಕೆನರಾ ಕ್ರೈಸ್ತರ ಮೇಲೆ ದಾಳಿ ಮಾಡಿದ್ದ. 1784ರ ಫೆಬ್ರವರಿ 24 ರಂದು ಕಿರೆಂ ಚರ್ಚ್ ಅನ್ನು ನಾಶ ಪಡಿಸಲು ಮುಂದಾದಾಗ, ಸ್ಥಳೀಯ ಬಂಟ ಸಮುದಾಯದ ಮೂರು ಮನೆತನಗಳಾದ ಐಕಳ ಬಾವ, ತಾಳಿಪಾಡಿ ಗುತ್ತು ಹಾಗೂ ಏಳಿಂಜೆ ಅಂಗಡಿಗುತ್ತು ಕುಟುಂಬದವರು ಟಿಪ್ಪು ಸೈನಿಕರನ್ನು ತಡೆದು ಹಿಮ್ಮೆಟ್ಟಿಸುವಲ್ಲಿ ಯಶಸ್ಸಿಯಾಗಿದ್ದರು.
ಅಲ್ಲದೆ ನೂರಾರು ಕೈಸ್ತ ಬಾಂಧವರನ್ನು ರಕ್ಷಿಸಿದ್ದರು. ಮಾತ್ರವಲ್ಲದೆ ಹಲವರನ್ನು ತಮ್ಮ ಮನೆಯಲ್ಲಿಟ್ಟು, ಟಿಪ್ಪು ಸೈನಿಕರಿಂದ ರಕ್ಷಿಸಲು ಅವರಿಗೆ ತಮ್ಮ ಕುಟುಂಬದ ಸದಸ್ಯರಂತೆ ಕಿವಿಗೆ ಚಿನ್ನದ ಒಲೆಗಳನ್ನು ತೊಡಿಸಿ ಶೆಟ್ಟಿ ಕುಟುಂಬದವರಂತೆ ಬಿಂಬಿಸಿದರು. ಈ ಸಂದರ್ಭ ವಶಕ್ಕೆ ಪಡೆದ ಸಾವಿರಾರು ಕ್ರೈಸ್ತರನ್ನು ಟಿಪ್ಪು ಶ್ರೀರಂಗಪಟ್ಟಣಕ್ಕೆ ಕರೆದೊಯ್ದು ಬಂಧನದಲ್ಲಿಟ್ಟಿದ್ದ. ಟಿಪ್ಪು ಮರಣಾನಂತರ ಬಂಧ ಮುಕ್ತಗೊಂಡ ಕ್ರೈಸ್ತ ಕುಟುಂಬದ ಸದಸ್ಯರು ಹಿಂತಿರುಗಿದಾಗ ಈ ಚರ್ಚ್ ಅನ್ನು ಅವರಿಗೆ ಒಪ್ಪಿಸಲಾಯಿತು. ಬದುಕು ಕಟ್ಟಿಕೊಳ್ಳಲು ಈ ಕುಟುಂಬ ಸಹಾಯ ಒದಗಿಸಿತು.
ಈ ಎಲ್ಲಾ ಸಹಕಾರದ ಕಾರಣವಾಗಿ ಪ್ರತೀ ವರ್ಷ ನವಂಬರ್ ಕೊನೆಯ ವಾರದಲ್ಲಿ ನಡೆಯುವ ಕಿರೆಂ ರೆಮದಿ ಚರ್ಚ್ನ ವಾರ್ಷಿಕ ಹಬ್ಬದಂದು ಈ ಮೂರು ಬಂಟ ಮನೆತನದವರಿಗೆ ಬಾಳೆಹಣ್ಣು, ಅಡಿಕೆ ಗೊನೆ, ವೀಳ್ಯದೆಲೆ ನೀಡಿ ವಿಶೇಷ ಗೌರವ ನೀಡಲಾಗುತ್ತದೆ. 3 ಕುಟುಂಬಸ್ಥರನ್ನು ಸನ್ಮಾನಿಸಿ, ಹೊರೆ ಕಾಣಿಕೆ ಅರ್ಪಿಸಲಾಗುತ್ತೆ. ಮೂರು ಗುತ್ತು ಮನೆತನದವರಿಗೆ ಪ್ರತೀ ವರ್ಷದಂತೆ ಈ ಬಾರಿಯೂ ಬಾಳೆಗೊನೆ, ವೀಳ್ಯದೆಲೆ ನೀಡಿ ವಿಶೇಷ ಗೌರವ ನೀಡಲಾಯಿತು.
ತಾಳಿಪಾಡಿ ಗುತ್ತು ದಿನೇಶ್ ಭಂಡ್ರಿಯಾಲ್, ಸುಕುಮಾರ್ ಶೆಟ್ಟಿ, ಏಳಿಂಜೆ ಅಂಗಡಿಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಶಂಭು ಶೆಟ್ಟಿ, ಪ್ರಸಾದ್ ಶೆಟ್ಟಿ, ರಿಶಿತ್ ಶೆಟ್ಟಿ, ಐಕಳ ಬಾವ ಸುಕುಮಾರ್ ಭಂಡಾರಿ, ಜಯಪಾಲ ಶೆಟ್ಟಿ, ಭಾಸ್ಕರ್ ಶೆಟ್ಟಿ ಗೌರವ ಪಡೆದರೆ ಪಣಿರ್ ಚರ್ಚ್ ಪ್ರಧಾನ ಧರ್ಮಗುರುಗಳಾದ ವಿಕ್ಟೆರ್ ಡಿಮೆಲೋ, ಕಿರೆಂ ಚರ್ಚ್ ಪ್ರದಾನ ಧರ್ಮಗುರು ಓಸ್ವಾಲ್ಡ್ ಮಾಂತೆರೋ, ಸಹಾಯಕ ಧರ್ಮಗುರು ಸುನೀಲ್ ಡಿಸೋಜ, ಪಾದರ್ ಮ್ಯಾಕ್ಸಿಮ್ ನೊರೋಹ್ನ, ಎಸ್.ವಿ.ಡಿ ಮನೆಯ ಧರ್ಮಗುರುಗಳು, ಕಿನ್ನಿಗೋಳಿ ವಲಯ ಧರ್ಮಗುರುಗಳು, ಕಿರೆಂ ಚರ್ಚ್ ನ ಪಲನಾ ಮಂಡಳಿ ಉಪಾಧ್ಯಕ್ಷರ ಸ್ಟೀವನ್ ಡಿಕುನ್ನ,ಕಾರ್ಯದರ್ಶಿ ಮ್ಯಾಕ್ಸಿಮ್ ಪಿಂಟೋ, ಸರ್ವ ಸಮಿತಿ ಚಾಲಕರಾದ ಸಂತಾನ್ ಡಿಸೋಜ ಮತ್ತಿತರರು ಸಂಪ್ರದಾಯದಂತೆ ಗೌರವ ನೀಡಿದರು.