ಜಾತ್ಯತೀತ ನಾಡಲ್ಲಿ ನಂಬಿಕೆ ಮರೆಯಾಗುತ್ತಿದೆ: ನಗ್ಮಾ
ಮಂಗಳೂರು, ನವೆಂಬರ್, 27: 'ವಸುದೈವ ಕುಟುಂಬಕಂ' ಎಂದು ಪರಿಗಣಿಸಿರುವ ನಮ್ಮ ನಾಡಿನಲ್ಲಿ ಅಸಹಿಷ್ಣುತೆ ಗಾಳಿ ಬೀಸುತ್ತಿರುವುದು ಬಹಳ ಆತಂಕಕಾರಿ ಸಂಗತಿ. ಜಾತ್ಯತೀತ ದೇಶದಲ್ಲಿ ಪರಸ್ಪರ ನಂಬಿಕೆ, ವಿಶ್ವಾಸಗಳು ಮರೆಯಾಗುತ್ತಿದೆ ಎಂದು ನಟಿ ನಗ್ಮಾ ಅಭಿಪ್ರಾಯಪಟ್ಟರು.
ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆ ಮಂಗಳೂರಿನ ಗೋಲ್ಡ್ ಪಿನ್ಚ್ ಹೋಟೆಲ್ ನಲ್ಲಿ ಗುರುವಾರ ಆಯೋಜಿಸಿದ್ದ 10ನೇ ಮಕ್ಕಳ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ಅಂತರಂಗಗಳು ಸ್ವಚ್ಛವಾದಾಗ ಮಾತ್ರ ಸ್ವಚ್ಛ ಭಾರತ ನಿರ್ಮಾಣವಾಗುತ್ತದೆ ಎಂದರು.[ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿರುವ ಆಮೀರ್ ಮಾತು]
ಭಾರತ ಏಕತೆಯಲ್ಲಿ ವಿವಿಧತೆಯಿಂದ, ಶಾಂತಿಯ ನೆಲೆವೀಡಾಗಿ ಇಡೀ ಜಗತ್ತಿಗೆ ಪರಿಚಯವಾಗಿತ್ತು. ಭಾರತೀಯರು ಹಿಂದಿನಿಂದಲೂ ಹಾಗೇ ಬದುಕಿದ್ದಾರೆ. ಆದರೆ, 125 ಕೋಟಿ ಜನಸಂಖ್ಯೆಯಲ್ಲಿ ಕೇವಲ 1 ರಿಂದ 2 ಕೋಟಿಯಷ್ಟು ಹಿಂದೂ ಧರ್ಮಾಂಧ ಮನಸ್ಸುಗಳು ದೇಶದಲ್ಲಿ ಅಶಾಂತಿ ಬೀಜ ಬಿತ್ತುತ್ತಿವೆ. ಇದು ದೇಶದ ಬೆಳವಣಿಗೆಗೆ ಪೂರಕವಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಈ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಚಿಲ್ಡ್ರನ್ಸ್ ಅಧ್ಯಕ್ಷ ಎನ್.ಆರ್. ನಂಜುಂಡೇಗೌಡ, ಮಕ್ಕಳ ಚಲನಚಿತ್ರೋತ್ಸವ ಸಂಯೋಜಕ ಪಿ.ವಿ. ಮೋಹನ್ ಮತ್ತಿತರರು ಉಪಸ್ಥಿತರಿದ್ದರು.