ಬೆಂಕಿಯ ಮೇಲೆ ದೈವದ ನರ್ತನ:ಹುಲಿಕಲ್ ನಟರಾಜ್ ಗೆ ಸವಾಲು
ಮಂಗಳೂರು, ಜನವರಿ 20: ಪರಶುರಾಮ ಸೃಷ್ಟಿಯ ತುಳು ನಾಡು ವೈವಿಧ್ಯಮಯ ಕಲೆಗಳ ನೆಲೆ ಬೀಡು. ದೈವಾರಾಧನೆ, ನಾಗಾರಾಧನೆ ಮುಖಾಂತರ ಪ್ರಕೃತಿಯನ್ನು ಆರಾಧಿಸಿಕೊಂಡು ಬಂದವರು ತುಳು ನಾಡಿನ ಜನರು. ಅಂತಹ ತುಳುನಾಡು ವಿಶೇಷ ಭೂತಾರಾಧನೆಯ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗುತ್ತಲೇ ಇದೆ.
ಈ ತುಳುನಾಡಿನ ಪ್ರತಿ ಕುಟುಂಬವೂ ಒಂದಲ್ಲ ಒಂದು ದೈವಗಳನ್ನು ನಂಬಿಕೊಂಡು ಬರುತ್ತಿರುವುದು ಹಿಂದಿನಿಂದಲೂ ಬಂದ ಸಂಪ್ರದಾಯ. 400ಕ್ಕೂ ಮಿಕ್ಕಿದ ವಿವಿಧ ಪ್ರಕಾರಗಳ ಭೂತಗಳ ಆರಾಧನೆಯನ್ನು ತುಳುವರು ನಡೆಸಿಕೊಂಡು ಬರುತ್ತಿದ್ದಾರೆ.
ಕರಾವಳಿಯ ದೈವಶಕ್ತಿಗೆ ಬೆಚ್ಚಿಬಿದ್ದ ಕಳ್ಳರು: ಕದ್ದ ಆಭರಣ ವಾಪಸ್ ತಂದಿಟ್ಟರು
ಇಂತಹುದೇ ವಿಶೇಷ ಭೂತಾರಾಧನೆ ಪುತ್ತೂರಿನಲ್ಲಿ ನಡೆಯುತ್ತದೆ. ಪುತ್ತೂರಿನ ಸಂಪ್ಯದಲ್ಲಿ ತುಳುನಾಡಿನ ಭೂತಾರಾಧನೆಯ ಅಂಗವಾದ ಮೂಕಾಂಬಿಕಾ ಗುಳಿಗ ದೈವದ ನರ್ತನ ಇತ್ತೀಚೆಗೆ ನಡೆಯಿತು. ಬೆಂಕಿಯಲ್ಲೇ ಕುಳಿತು ಮಲಗುವ ಈ ದೈವಗಳ ನರ್ತನ ನೋಡುಗರಲ್ಲಿ ಆಶ್ಚರ್ಯ ಹಾಗೂ ಆತಂಕಕ್ಕೆ ಕಾರಣವಾಗಿತ್ತು.
ಅವೇಶ ಬಂದ ದೈವ ಬೆಂಕಿಯನ್ನು ಬಿಡದೆ, ದೈವದ ಸಹಾಯಕರು ಎಷ್ಟು ಎಳೆದರೂ ಪಟ್ಟು ಬಿಡದೆ ಬೆಂಕಿಯಲ್ಲಿ ಚೆಲ್ಲಾಡಿ ಬೆಂಕಿಯನ್ನೇ ಆಲಿಂಗಿಸುವ ಈ ದೈವಗಳು ತುಳುನಾಡಿನ ವಿಶೇಷ ದೈವಾರಾಧನೆಗಳ ಪೈಕಿ ಒಂದಾಗಿದೆ.
ಪವಾಡಗಳನ್ನು ಬಯಲು ಮಾಡುವ ಹುಲಿಕಲ್ ನಟರಾಜ್ ಗೆ ಈ ದೈವಗಳು ಬೆಂಕಿಯ ಮೇಲೆ ನಡೆಸುವ ನರ್ತನವನ್ನು ಸವಾಲಾಗಿಯೂ ಸ್ವೀಕರಿಸುವಂತೆಯೂ ಕೆಲವರು ದೈವದ ನರ್ತನದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.