ಮಂಗಳೂರು ಪ್ಲಾಸ್ಟಿಕ್ ಪಾರ್ಕ್ಗೆ 40 ಕೋಟಿ ರೂ: ಸದಾನಂದ ಗೌಡ
ಬೆಂಗಳೂರು/ಮಂಗಳೂರು, ಜನವರಿ 24: ಪ್ರಧಾನಿ ನರೇಂದ್ರ ಮೋದಿ ಅವರ 'ಸ್ವಾವಲಂಬಿ ಭಾರತ'ದ ಕನಸು ಸಾಕಾರಕ್ಕೆ ಕೃಷಿಕರಿಗೆ ಅನುಕೂಲ ಮಾಡಿಕೊಡುವ ದಿಸೆಯಲ್ಲಿ ದೇಶಾದ್ಯಂತ ರಸಗೊಬ್ಬರ ಕಾರ್ಖಾನೆಗಳ ಪುನಃಶ್ಚೇತನಕ್ಕೆ 50 ಸಾವಿರ ಕೋಟಿ ರೂ. ವ್ಯಯ ಮಾಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ತಿಳಿಸಿದರು.
ಬೆಂಗಳೂರಿನಲ್ಲಿಂದು ಮಾತನಾಡಿ, ನಾನಾ ಕಾರಣಗಳಿಗಾಗಿ ಸ್ಥಗಿತಗೊಂಡಿರುವ ನಾಲ್ಕು ರಸಗೊಬ್ಬರ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಲು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಕ್ರಮ ಕೈಗೊಂಡಿದ್ದು, ಅದಕ್ಕಾಗಿ 50 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ವ್ಯಯ ಮಾಡಲಾಗುತ್ತಿದೆ.ಈ ಪೈಕಿ ತೆಲಂಗಾಣದ ರಾಮಗುಂಡಮ್ ಸ್ಥಾವರದ ಪುನಶ್ಚೇತನ ಕಾಮಗಾರಿ ಬಹುತೇಕ ಮುಗಿದಿದ್ದು ಯೂರಿಯಾ ಉತ್ಪಾದನೆಗೆ ಸಜ್ಜಾಗಿದೆ ಎಂದರು.
ಭಾರತವನ್ನು ಎಲ್ಲ ಕ್ಷೇತ್ರಗಳಲ್ಲೂ ಸ್ವಾವಲಂಬಿಯಾಗಿ ರೂಪಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತುಂಬಾ ಯೋಜಿತವಾಗಿ ಹೆಜ್ಜೆ ಇಡುತ್ತಿದೆ. ದೇಶದ ರಸಗೊಬ್ಬರ ವಲಯವನ್ನು ಸಂಪೂರ್ಣವಾಗಿ ಸ್ವಾವಲಂಬಿ ಮಾಡಬೇಕು ಎಂದು ನಮ್ಮ ರಸಗೊಬ್ಬರ ಇಲಾಖೆಯು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಸದಾನಂದ ಗೌಡ ಹೇಳಿದರು.
ಔಷಧ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿ
ಔಷಧ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಸಚಿವಾಲಯ ನಿರ್ವಹಿಸುವ ಔಷಧ ಇಲಾಖೆಯು ಹಲವು ಯೋಜನೆಗಳನ್ನು ರೂಪಿಸಿದೆ. ಈ ಉಪಕ್ರಮಗಳಲ್ಲಿ ಮೂರು ಬಲ್ಕ್ ಡ್ರಗ್ ಪಾರ್ಕ್ ಗಳು ಹಾಗೂ ನಾಲ್ಕು ವೈದ್ಯಕೀಯ ಸಾಧನ ಪಾರ್ಕ್ಗಳ ನಿರ್ಮಾಣ ಸೇರಿವೆ ಎಂದು ತಿಳಿಸಿದರು. ಸ್ವಾವಲಂಬಿ ಭಾರತ ಯೋಜನೆಯಡಿ ದೇಶದ ಪ್ಲಾಸ್ಟಿಕ್ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ದೇಶದಲ್ಲಿ ಎರಡು ಪ್ಲಾಸ್ಟಿಕ್ ಪಾರ್ಕುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ
ಕರ್ನಾಟಕದ ಕರಾವಳಿಯ ಮಂಗಳೂರು ಹಾಗೂ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ತಲಾ ಒಂದೊಂದು ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸುವ ಬಗ್ಗೆ ಮೊನ್ನೆ ನಡೆದ ರಾಸಾಯನಿಕ ಇಲಾಖೆಯ ಯೋಜನೆ ಚಾಲನಾ ಸಮಿತಿ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದ್ದೇವೆ ಎಂದರು.
ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ನೀಡಿದ್ದೇವೆ. ಆದಷ್ಟು ಬೇಗ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಿ ಅಂತಿಮ ಒಪ್ಪಿಗೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಲಾಗಿದೆ. ಆರು ತಿಂಗಳ ಒಳಗೆ ಅಂತಿಮ ಒಪ್ಪಿಗೆ ನೀಡಿ ಯೋಜನೆಯ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸದಾನಂದ ಗೌಡ ಹೇಳಿದರು.
ಪ್ಲಾಸ್ಟಿಕ್ ಪಾರ್ಕ್ ಅಂದರೆ ಏನು
''ಪ್ಲಾಸ್ಟಿಕ್ ಪಾರ್ಕ್ ಅಂದರೆ ಏನು'' ಎಂಬ ಬಗ್ಗೆ ಬಹಳ ಜನರಿಗೆ ಕುತೂಹಲವಿದೆ. ಇದೊಂದು ಪ್ಲಾಸ್ಟಿಕ್ ಸಂಬಂಧಿತ ಕೈಗಾರಿಗೆಳಿಗೆ ಸೀಮಿತವಾದ ಕೈಗಾರಿಕಾಭಿವೃದ್ಧಿ ಕೇಂದ್ರ. ಪ್ಲಾಸ್ಟಿಕ್ ಸಂಬಂಧಿತ ಕೈಗಾರಿಕೆಗಳ ಅಭಿವೃದ್ಧಿಗೆ ಬೇಕಾದ ಎಲ್ಲ ಆಧುನಿಕ ತಂತ್ರಜ್ಞಾನ ಸೌಕರ್ಯಗಳೂ ಇಲ್ಲಿರುತ್ತವೆ. ಇವು ಸಾಮಾನ್ಯ ಸೌಲಭ್ಯಗಳಾಗಿದ್ದು (common facilities). ಇಲ್ಲಿ ಸ್ಥಾಪಿತವಾಗುವ ಎಲ್ಲ ಕೈಗಾರಿಕಾ ಘಟಕಗಳೂ ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಇದರಿಂದ ನಮ್ಮ ಸ್ವದೇಶಿ ಪ್ಲಾಸ್ಟಿಕ್ ಕೈಗಾರಿಕೆಗಳು ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಬಹುದು. ಆಗ ನಮ್ಮ ಕಂಪನಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಲು ಶಕ್ತವಾಗುತ್ತವೆ. ತಂತಾನೆ ರಫ್ತು ವೃದ್ಧಿಯಾಗುತ್ತದೆ ಎಂದು ಕೇಂದ್ರ ಸಚಿವರು ವಿವರಿಸಿದರು.
ಪ್ಲಾಸ್ಟಿಕ್ ಪಾರ್ಕ್-ಜಂಟಿ ಯೋಜನೆ
ಇದೊಂದು ಜಂಟಿ ಯೋಜನೆಯಾಗಿದೆ. ರಾಜ್ಯವು ಈ ಯೋಜನೆಯನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಕೆಎಸ್ಐಡಿಸಿ ಮೂಲಕ ಅಥವಾ ಹೊಸ ವಿಶೇಷ ಉದ್ದೇಶದ ಕಂಪನಿ (SPV) ಸ್ಥಾಪಿಸುವ ಮೂಲಕ ಅನುಷ್ಠಾನಗೊಳಿಸಬಹುದಾಗಿದೆ. ಈ ಪ್ಲಾಸ್ಟಿಕ್ ಪಾರ್ಕ್ನಲ್ಲಿ ಅಭಿವೃದ್ಧಿಪಡಿಸುವ ಸಾಮಾನ್ಯ ಸೌಕರ್ಯಗಳ (common facilities) ಅರ್ಧ ವೆಚ್ಚವನ್ನು ನಮ್ಮ ಇಲಾಖೆಯು ಭರಿಸುತ್ತದೆ. ಇದಕ್ಕೆ 40 ಕೋಟಿ ರೂಪಾಯಿ ನಿಗದಿಪಡಿಸಲಾಗಿದ್ದು ನಾಲ್ಕು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಆದಷ್ಟು ಬೇಗ ಡಿಪಿಆರ್ ಕಳುಹಿಸಿಕೊಡಿ ಎಂದು ರಾಜ್ಯಕ್ಕೆ ಕೇಳಿಕೊಂಡಿದ್ದೇವೆ. ನಾನು ಕೂಡಾ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದೇನೆ ಎಂದು ಸಚಿವ ಸದಾನಂದ ತಿಳಿಸಿದರು.