ಪ್ರವಾಹ ಪರಿಶೀಲನೆ; ಕೇಂದ್ರ ತಂಡದ ಪಟ್ಟಿಯಲ್ಲಿಲ್ಲ ದಕ್ಷಿಣ ಕನ್ನಡ
ಮಂಗಳೂರು, ಆಗಸ್ಟ್ 26: ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗು ಪ್ರವಾಹಕ್ಕೆ ರಾಜ್ಯದ ಬಹುತೇಕ ಜಿಲ್ಲೆಗಳು ತತ್ತರಿಸಿವೆ. ಇದರಿಂದ ಸಾವಿರಾರು ಕೋಟಿ ನಷ್ಟ ಸಂಭವಿಸಿದೆ. ಹಲವು ಜನ ನಿರ್ಗತಿಕರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳ ಅಧ್ಯಯನಕ್ಕೆ ಕೇಂದ್ರ ಸರಕಾರದ ಅಧಿಕಾರಿಗಳ ತಂಡ ಆಗಮಿಸಿದೆ.
ಭೀಕರ ಪ್ರವಾಹ : 4 ದಿನ ರಾಜ್ಯದಲ್ಲಿ ಕೇಂದ್ರ ತಂಡದ ಪ್ರವಾಸ
ಆದರೆ ಈ ತಂಡದ ಪ್ರವಾಸದ ಪಟ್ಟಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡಿಲ್ಲ. ಇದು ಭಾರೀ ಮಳೆ ಮತ್ತು ನೆರೆ ಹಾನಿ ಅನುಭವಿಸಿ ಪರಿಹಾರದ ನಿರೀಕ್ಷೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಆತಂಕ ತಂದಿದೆ. ಕೇಂದ್ರ ಅಧಿಕಾರಿಗಳ ತಂಡ ದಕ್ಷಿಣ ಕನ್ನಡ ಜಿಲ್ಲೆಗೂ ಆಗಮಿಸಬಹುದು ಮತ್ತು ಬದುಕು ಕಟ್ಟಿಕೊಳ್ಳಲು ಹೆಚ್ಚಿನ ನೆರವು ದೊರೆಯಬಹುದು ಎಂಬ ಸಂತ್ರಸ್ತರ ನಿರೀಕ್ಷೆ ಹುಸಿಯಾಗಿದೆ.
Recommended Video
ಇತ್ತೀಚೆಗೆ ಸುರಿದ ಮಳೆ ಹಾಗು ಪ್ರವಾಹದಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ನಷ್ಟ ಸಂಭವಿಸಿತ್ತು. ಜಿಲ್ಲಾಡಳಿತ ನಡೆಸಿರುವ ಸಮೀಕ್ಷೆಯಂತೆ 750 ಕೋಟಿ ರೂಪಾಯಿಗೂ ಅಧಿಕ ಪ್ರಮಾಣದಲ್ಲಿ ಮೂಲ ಸೌಕರ್ಯಗಳು ನಾಶವಾಗಿವೆ. 944 ಮನೆಗಳು ಮತ್ತು 1,229.66 ಹೆಕ್ಟೇರ್ ಬೆಳೆ ನಷ್ಟವಾಗಿದೆ. ವೆಂಟೆಡ್ಡ್ಯಾಂಗಳಿಗೆ ಆಗಿರುವ ಹಾನಿ ನೂರಾರು ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಜಿಲ್ಲೆಯ 222 ಶಾಲೆಗಳಿಗೆ ಹಾನಿಯಾಗಿದೆ. 105 ಕುಟುಂಬಗಳನ್ನು ಸ್ಥಳಾಂತರಿಸಿ ಶಾಶ್ವತ ನೆಲೆ ಕಲ್ಪಿಸಬೇಕಿದೆ. ಇದೆಲ್ಲವನ್ನೂ ಅಂದಾಜಿಸಿದರೆ ಸುಮಾರು ಕನಿಷ್ಠ 2,000 ಕೋಟಿ ರೂಪಾಯಿಗೂ ಅಧಿಕ ಹಾನಿಯಾಗಿದೆ.
ಹೀಗಾಗಿ ಕೇಂದ್ರ ಅಧಿಕಾರಿಗಳ ತಂಡ ದಕ್ಷಿಣ ಕನ್ನಡ ಜಿಲ್ಲೆಗೂ ಆಗಮಿಸಬಹುದು ಮತ್ತು ಹೆಚ್ಚಿನ ನೆರವು ದೊರೆಯಬಹುದು ಎಂಬುದು ಸಂತ್ರಸ್ತರ ನಿರೀಕ್ಷೆಯಾಗಿತ್ತು. ಆದರೆ ಕೇಂದ್ರ ಅಧಿಕಾರಿಗಳ ಈ ನಿರ್ಲಕ್ಷ್ಯ ಸಂತ್ರಸ್ತರಲ್ಲಿ ಆಕ್ರೋಶ ಮೂಡಿಸಿದೆ. ರಾಜ್ಯ ಸರಕಾರ ಶ್ರೀಘ್ರ ಕ್ರಮಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.