ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ವರ್ಗಾವಣೆಗೆ ತಡೆ
ಮಂಗಳೂರು, ಅಕ್ಟೋಬರ್ 3: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀ ಅವರನ್ನು ವಿಚಾರಣೆ ನಡೆಸಿದ್ದ ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರನ್ನು ಮಂಗಳೂರು ಸಿಸಿಬಿ ಪೊಲೀಸರು ದಿಢೀರ್ ವರ್ಗಾವಣೆ ಮಾಡಿದ್ದು, ಅವರ ವರ್ಗಾವಣೆಯನ್ನು ಇದೀಗ ತಡೆಹಿಡಿಯಲಾಗಿದೆ.
ಶಿವಪ್ರಕಾಶ್ ಅವರನ್ನು ವರ್ಗಾವಣೆ ಮಾಡಿ ಅವರ ಜಾಗಕ್ಕೆ ಉಡುಪಿಯ ಕಾಪು ಠಾಣೆಯ ಸಿಐ ಆಗಿದ್ದ ಮಹೇಶ್ ಪ್ರಸಾದ್ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಇಲಾಖೆ ಸಿಸಿಬಿ ಇನ್ಸ್ ಪೆಕ್ಟರ್ ವರ್ಗಾವಣೆಯನ್ನು ತಡೆ ಹಿಡಿದಿದೆ.
ಡ್ರಗ್ ಕೇಸ್: ನಟಿ ಅನುಶ್ರೀಗೆ ಸಮನ್ಸ್ ನೀಡಿದ್ದ ಇನ್ಸ್ ಪೆಕ್ಟರ್ ವರ್ಗ
ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಡಾನ್ಸರ್ ಕಿಶೋರ್ ಶೆಟ್ಟಿಯನ್ನು ಬಂಧಿಸಿದ್ದರು. ಈ ವೇಳೆ ಕಿಶೋರ್ ಶೆಟ್ಟಿಯನ್ನು ಪ್ರಕರಣದಿಂದ ಕೈ ಬಿಡುವಂತೆ ಶಾಸಕರೊಬ್ಬರು ಒತ್ತಡ ತಂದಿದ್ದರು ಎನ್ನಲಾಗಿತ್ತು. ಇದೀಗ ಅನುಶ್ರೀ ವಿಚಾರಣೆ ಸಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದ್ದ ಈ ಸಂದರ್ಭದಲ್ಲಿ ದಿಢೀರ್ ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ಅನುಮಾನಗಳು ವ್ಯಕ್ತಗೊಂಡಿದ್ದವು.
ಈ ಕುರಿತು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಸ್ಪಷ್ಟನೆ ನೀಡಿದ್ದು, ಇನ್ಸ್ ಪೆಕ್ಟರ್ ವರ್ಗಾವಣೆ ಹಿಂದೆ ಬೇರೆಯೇ ಕಾರಣ ಇದೆ. ಯಾವ ಅಧಿಕಾರಿಗಳ ಮೇಲೂ ಒತ್ತಡ ಹೇರಲಾಗಿಲ್ಲ ಎಂದು ಹೇಳಿದ್ದಾರೆ. ಜೊತೆಗೆ, ಡ್ರಗ್ ಪ್ರಕರಣದಲ್ಲಿ ಚೈನ್ ಲಿಂಕ್ ದೊಡ್ಡದಿದೆ. ಈ ಲಿಂಕ್ ನ ವಿಚಾರಣೆ ಮುಂದುವರೆಯುತ್ತದೆ. ತನಿಖೆಗೆ ಮಾಹಿತಿ ಬೇಕಾದಲ್ಲಿ ನೋಟಿಸ್ ಮಾಡುತ್ತೇವೆ ಎಂದದು ತಿಳಿಸಿದ್ದಾರೆ.