ಸಿಬಿಐ ಈಗ ಸೆಂಟ್ರಲ್ ಬ್ಯೂರೋ ಆಫ್ ಇಲ್ಲೀಗಲ್ ಮೈನಿಂಗ್: ಬಂಟ್ವಾಳದಲ್ಲಿ ರಾಹುಲ್ ಕಿಡಿ
ಮಂಗಳೂರು, ಏಪ್ರಿಲ್ 27: 'ರೆಡ್ಡಿ ಬ್ರದರ್ಸ್' ಗೆ ಕ್ಲೀನ್ ಚಿಟ್ ನೀಡುವ ಮೂಲಕ ಸಿಬಿಐ ಈಗ ಸೆಂಟ್ರಲ್ ಬ್ಯೂರೋ ಆಫ್ ಮೈನಿಂಗ್ ಆಗಿದೆ ಎಂದು ಕಾಂಗ್ರಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಬಂಟ್ವಾಳದಲ್ಲಿ
ಕಾಂಗ್ರೆಸ್
ಸಮಾವೇಶ
ಉದ್ದೇಶಿಸಿ
ಮಾತನಾಡಿದ
ಅವರು,
"ಪ್ರಧಾನಿ
ನರೇಂದ್ರ
ಮೋದಿಯವರು
ಬಸವಣ್ಣನಿಗೆ
ಹೂಹಾರ
ಹಾಕುತ್ತಾರೆ.
ಇತ್ತ
ರೆಡ್ಡಿ
ಬ್ರದರ್ಸ್
ಗೆ
ಟಿಕೆಟ್
ನೀಡುತ್ತಾರೆ.
ಮೋದಿ
ಹೇಳುತ್ತಾರೆ
ನಾನು
ಭ್ರಷ್ಟಾಚಾರದ
ವಿರುದ್ಧವಾಗಿದ್ದೇನೆ
ಎಂದು.
ಆದರೆ,
ಪಕ್ಕದಲ್ಲೇ
ನಿಂತಿರುವ
ಯಡಿಯೂರಪ್ಪ
ಜೈಲಿನಲ್ಲಿ
ದಿನ
ಕಳೆದು
ಬಂದಿದ್ದಾರೆ
ಎನ್ನುವುದನ್ನು
ಮರೆಯುತ್ತಾರೆ,"
ಎಂದು
ಆಕ್ರೋಶ
ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ? ಇಲ್ಲಿವೆ ಮುಖ್ಯಾಂಶಗಳು
"ಸಾವಿರಾರು ಕೋಟಿ ಹಣವನ್ನು ರೆಡ್ಡಿ ಸಹೋದರರು ಕೊಳ್ಳೆ ಹೊಡೆದಿದ್ದಾರೆ. ರೆಡ್ಡಿ ಬ್ರದರ್ಸ್ ಕೊಳ್ಳೆ ಹೊಡೆದಿರುವ ಹಣ ಕರ್ನಾಟಕದ ಬಡವರ ಹಣ," ಎಂದು ಹೇಳಿದ ಅವರು, "ಬಡವರ ಸಾಲ ಮನ್ನಾ ಮಾಡುವ ಉದ್ದೇಶ ಮೋದಿ ಹಾಗೂ ಅಮಿತ್ ಶಾ ಅವರಿಗೆ ಇಲ್ಲ. 15 ಶ್ರೀಮಂತರ ಸಾಲ ಮಾತ್ರ ಮನ್ನಾ ಮಾಡುತ್ತಾರೆ," ಎಂದು ಹರಿಹಾಯ್ದರು.
ಬಿಜೆಪಿ ನಾಯಕರಿಂದಲೇ ಮಹಿಳೆಯರ ಮೇಲೆ ದೌರ್ಜನ್ಯ
"ಪೆಟ್ರೋಲ್, ಡೀಸೆಲ್ ಬೆಲೆ ಬ್ಯಾರೆಲ್ ಗೆ ಕಡಿಮೆಯಾಗಿದ್ದರೂ ದೇಶದಲ್ಲಿ ಮಾತ್ರ ಬೆಲೆ ಕಡಿಮೆಯಾಗಿಲ್ಲ," ಎಂದು ಟೀಕಿಸಿದ ರಾಹುಲ್ ಗಾಂಧಿ, "ನರೇಂದ್ರ ಮೋದಿಯವರು ಬೇಟಿ ಬಚಾವೊ, ಬೇಟಿ ಪಡಾವೋ ಎಂಬ ಘೋಷಣೆ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯ ನಾಯಕರಿಂದಲೇ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ಬಗ್ಗೆ ದೇಶದ ಕಾವಲುಗಾರ ಮೋದಿ ಮೌನವಾಗಿದ್ದಾರೆ," ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
"ಡೋಕ್ಲಾಂನಲ್ಲಿ ಚೀನಾದ ಸೈನಿಕರು ಬಂದು ಕುಳಿತಿದ್ದಾರೆ. ಆದರೆ, 56 ಇಂಚಿನ ಎದೆ ಎಲ್ಲಿಗೆ ಹೋಗಿದೆಯೆಂದು ತಿಳಿದಿಲ್ಲ. ಜನರ ಹಣ ಪಡೆದು ನೀರವ್ ಮೋದಿ ಓಡಿದ್ದಾನೆ, ವಿಜಯ ಮಲ್ಯ ಪರಾರಿಯಾಗಿದ್ದಾನೆ. ಆದರೆ, ಮೋದಿ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿಯವರು ಪ್ರತೀ ಜಾತಿ, ಸಮುದಾಯದ, ಧರ್ಮಗಳ ನಡುವೆ ಗಲಾಟೆಯೆಬ್ಬಿಸುತ್ತಾರೆ. ಅವರು ಈ ಕೆಲಸಗಳಲ್ಲೇ ನಿರತರಾಗಿದ್ದಾರೆ," ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
ಜನರ ಪ್ರಣಾಳಿಕೆ
"ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, "ನಮ್ಮ ಪ್ರಣಾಳಿಕೆಯಲ್ಲಿ ನಮ್ಮ ಮನಸ್ಸಿನ ಮಾತಿಲ್ಲ. ಕರ್ನಾಟಕದ ಜನರ, ಬಡವರ, ಮಹಿಳೆಯರ ಮನಸ್ಸಿನ ಮಾತಿದೆ. ಪ್ರಣಾಳಿಕೆಯನ್ನು ನಾಲ್ಕು ಗೋಡೆಗಳ ನಡುವೆ ರಚಿಸಲಾಗಿಲ್ಲ. ಮೊಯ್ಲಿ ಹಾಗೂ ಇತರರು ಸೇರಿ ಕಷ್ಟಪಟ್ಟು ತಯಾರಿಸಿದ್ದಾರೆ. ಕಳೆದ ಬಾರಿಯ ಪ್ರಣಾಳಿಕೆಯಲ್ಲಿ ನಾವು ನೀಡಿದ ಶೇ.90ರಷ್ಟು ಆಶ್ವಾಸನೆಗಳನ್ನು ಪೂರೈಸಿದ್ದೇವೆ," ಎಂದು ರಾಹುಲ್ ವಿವರಿಸಿದರು.
ನಾವು ನುಡಿದಂತೆ ನಡೆದಿದ್ದೇವೆ ಎಂದ ರಾಹುಲ್ ಗಾಂಧಿ, "ನಾವು ಹೇಳಿದ್ದನ್ನು ಮಾಡಿ ತೋರಿಸುತ್ತೇವೆ. ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಕರ್ನಾಟಕದ ಪ್ರತೀ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯಲಿದೆ. ರಾಜ್ಯದ ಪ್ರತೀ ಮೂಲೆಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ," ಎಂದು ಮಾಹಿತಿ ನೀಡಿದರು.
ಪ್ರಣಾಳಿಕೆಯಲ್ಲ ಹೇಳಿದ್ದನ್ನು ನೂರಕ್ಕೆ ನೂರು ಜಾರಿ ಮಾಡುತ್ತೇವೆ
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಪ್ರಣಾಳಿಕೆಯಲ್ಲಿ ತಿಳಿಸಿದ ವಿಷಯಗಳನ್ನು ನೂರಕ್ಕೆ ನೂರು ಜಾರಿ ಮಾಡುತ್ತೇವೆ. ಕಳೆದ ಬಾರಿ ನೀಡಿದ ಆಶ್ವಾಸನೆ ಪೂರೈಸಿದ್ದೇವೆ," ಎಂದು ಸ್ಪಷ್ಟಪಡಿಸಿದರು.
"2008ರಲ್ಲಿದ್ದ ಲೂಟಿಕೋರರು ಈ ಬಾರಿ ಮತ್ತೆ ಒಂದಾಗಿದ್ದಾರೆ. ಯಡಿಯೂರಪ್ಪ, ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ, ಕರುಣಾಕರ ರೆಡ್ಡಿ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ಈಶ್ವರಪ್ಪ ಎಲ್ಲರೂ ಒಟ್ಟಾಗಿದ್ದಾರೆ. ಬಿಜೆಪಿಯವರಿಗೆ ಮೂರು ಕಾಸಿನ ಮಾನ ಮರ್ಯಾದೆಯಿಲ್ಲ," ಎಂದು ಅವರು ಕಿಡಿಕಾರಿದರು.
ರೆಡ್ಡಿ ಬ್ರದರ್ಸ್ 1 ಲಕ್ಷ ಕೋಟಿ ರೂ. ಲೂಟಿ
"ಮೋದಿ, ಅಮಿತ್ ಶಾ, ಯಡಿಯೂರಪ್ಪ ನಮ್ಮ ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಆದರೆ ರೆಡ್ಡಿ ಬ್ರದರ್ಸ್ 1ಲಕ್ಷ ಕೋಟಿ ರೂ. ಗಿಂತಲೂ ಹೆಚ್ಚು ಹಣವನ್ನು ಲೂಟಿ ಮಾಡಿದ್ದಾರೆ. ಸಂತೋಷ್ ಹೆಗ್ಡೆ ತಮ್ಮ ವರದಿಯಲ್ಲೂ ಇದನ್ನು ತಿಳಿಸಿದ್ದರು. ರೆಡ್ಡಿ ಬ್ರದರ್ಸ್ ಬಳ್ಳಾರಿಯಲ್ಲಿ ಸಾಕಷ್ಟು ಲೂಟಿ ಮಾಡಿದ್ದು, ಇದಕ್ಕೆ ಕುಮ್ಮಕ್ಕು ನೀಡಿದವರು ಯಡಿಯೂರಪ್ಪ. ಇದನ್ನು ವಿರೋಧಿಸಿ ನಾವು 320 ಕಿಮೀ ಪಾದಯಾತ್ರೆ ನಡೆಸಿದ್ದೆವು," ಎಂದು ಸಿದ್ದರಾಮಯ್ಯ ವಿವರಿಸಿದರು.
"ಜನಾರ್ದನ ರೆಡ್ಡಿ ಹಾಗೂ ಸಿಬ್ಬಂದಿ ಗೂಂಡಾಗಳಂತೆ ವರ್ತಿಸುತ್ತಿದ್ದರು. ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಹುಕುಂನಂತೆಯೇ ಎಲ್ಲವೂ ನಡೆಯುತ್ತಿತ್ತು. ನನಗೆ ಪ್ರಚಾರಕ್ಕೆ ಅವಕಾಶ ನೀಡದ್ದರಿಂದ ಕೇವಲ ಟೇಬಲ್, ಚೇರ್ ಹಾಕಿ ಮಾತನಾಡಿ ಬಂದಿದ್ದೆ. ಈಗ ಮತ್ತೆ ಅದೇ ಲೂಟಿಕೋರರು ಒಂದಾಗಿದ್ದಾರೆ. ಜೈಲಿಗೆ ಹೋಗಿ ಬಂದಿದ್ದ ಯಡಿಯೂರಪ್ಪ, ಜನಾರ್ದನ ರೆಡ್ಡಿ, ಹಾಲಪ್ಪ, ಕೃಷ್ಣಯ್ಯ ಶೆಟ್ಟಿ ಎಲ್ಲರೂ ಒಂದಾಗಿದ್ದಾರೆ," ಎಂದರು.
ಕೋಮುದ್ವೇಷ ಹಬ್ಬಿಸುವ ಬಿಜೆಪಿ ಸೋಲಿಸಿ
"ಕೋಮುದ್ವೇಷ ಹಬ್ಬಿಸುವ ಬಿಜೆಪಿಯನ್ನು ಈ ಬಾರಿ ಸೋಲಿಸಬೇಕಿದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟಕ್ಕೆ ಎಂಟೂ ಸ್ಥಾನಗಳನ್ನು ಕಾಂಗ್ರೆಸ್ ಪಡೆಯಬೇಕಿದೆ. ಕಳೆದ ಬಾರಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಾಲ್ಕೇ ನಾಲ್ಕು ಸ್ಥಾನವನ್ನು ಬಿಜೆಪಿ ಗೆದ್ದಿದೆ. ಕಳೆದ ಬಾರಿ ಕಾಂಗ್ರೆಸ್ ಕರಾವಳಿಯಲ್ಲಿ 19 ಸ್ಥಾನಗಳ ಪೈಕಿ 13 ಸೀಟ್ ಗಳನ್ನು ಗೆದ್ದಿತ್ತು. ಈ ಬಾರಿ ಬಿಜೆಪಿ ಸಂಪೂರ್ಣ ಸೋಲುವಂತೆ ಮಾಡಬೇಕು," ಎಂದು ಕಾರ್ಯಕರ್ತರಿಗೆ ಮುಖ್ಯಮಂತ್ರಿ ಕರೆ ನೀಡಿದರು.
"ಪ್ರಧಾನಿ ನರೇಂದ್ರ ಮೋದಿಯವರದ್ದು ಯಾವುದೇ ಸಾಧನೆಯಿಲ್ಲ. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಕೂಡಾ ಯಾವುದೇ ಸಾಧನೆ ಮಾಡಿಲ್ಲ. ಲೂಟಿ ಹೊಡೆದದ್ದೇ ಅವರ ಸಾಧನೆಯಾಗಿದೆ," ಎಂದು ಸಿಎಂ ಟೀಕಿಸಿದರು.
ಸೂರ್ಯ ಹುಟ್ಟಿದಷ್ಟೇ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಸತ್ಯ
ನಂತರ ಮಾತನಾಡಿದ ಅವರು "ನಾವು ಜಾರಿಗೆ ತಂದ ಅನಿಲ ಭಾಗ್ಯ, ಆರೋಗ್ಯ ಭಾಗ್ಯ ಮುಂತಾದ ಯೋಜನೆ ಜನರ ಮುಂದಿಡಬೇಕಾಗಿದೆ. ಕರ್ನಾಟಕ ಹಸಿವು ಮುಕ್ತ, ಗುಡಿಸಲು ಮುಕ್ತ ರಾಜ್ಯವಾಗಬೇಕು," ಎಂದರು.
"ದೇಶದಲ್ಲಿ ಅಭಿವೃದ್ಧಿಯಲ್ಲಿ ರಾಜ್ಯ ಪ್ರಥಮ ಸ್ಥಾನಕ್ಕೇರಲಿದೆ. ಈ ಬಾರಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ," ಎಂದು ಹೇಳಿದ ಸಿದ್ದರಾಮಯ್ಯ, "ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ನರೇಂದ್ರ ಮೋದಿ ಸರಕಾರ ಕಿತ್ತೊಗೆಯಲು ಇದು ದಿಕ್ಸೂಚಿಯಾಗುತ್ತದೆ. ಪ್ರಜಾಪ್ರಭುತ್ವ ರಕ್ಷಣೆಗೆ ಕಾಂಗ್ರೆಸ್ ಗೆ ಮತ ನೀಡಿ," ಎಂದು ಕೇಳಿಕೊಂಡರು.