ಗೋಹತ್ಯೆ ನಿಷೇಧ ನೀತಿಯಲ್ಲಿ ಗೊಂದಲವಿದೆ: ಸಚಿವ ಖಾದರ್
ಮಂಗಳೂರು, ಜೂನ್ 02 : ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಗೋಹತ್ಯೆ ನಿಷೇಧ ನೀತಿಯಲ್ಲಿ ಗೊಂದಲವಿದೆ ಎಂದು ರಾಜ್ಯ ಆಹಾರ ಖಾತೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, "ಗೋಹತ್ಯೆ ನಿಷೇಧದ ವಿಚಾರದಲ್ಲಿ ಸರಕಾರ ಎಲ್ಲಾ ಜನರ ಭಾವನೆಯನ್ನು ಗೌರವಿಸುತ್ತದೆ. ಈ ಹಿಂದಿನ 1960ರ ಪ್ರಾಣಿ ಹಿಂಸಾ ತಡೆ ಕಾಯಿದೆಯಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಿ ಕೊಲ್ಲಲು ಅವಕಾಶವಿರಲಿಲ್ಲ ಎಂದರು. [ಗೋ ಹತ್ಯೆ ನಿಷೇಧ: ಕೇರಳ ಸರ್ಕಾರದ ನಿಲುವು ಸಮರ್ಥಿಸಿದ ಸಿಎಂ ಸಿದ್ದರಾಮಯ್ಯ]
ಪ್ರಸಕ್ತ ಗೋಹತ್ಯೆ ನಿಷೇಧ ನೀತಿಯಲ್ಲಿ ಗೋಮಾಂಸ ಸೇವನೆಗೆ ನಿಷೇಧ ಹೇರಲಾಗಿಲ್ಲ. ನಿರುಪಯುಕ್ತ ದನಗಳನ್ನು ಏನು ಮಾಡಬೇಕೆಂದು ತಿಳಿಸಿಲ್ಲ, ಇನ್ನೊಂದು ಕಡೆ ದನದ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವ ಕಂಪೆನಿಗಳಿಗೆ ವಿನಾಯತಿ, ಅವಕಾಶವನ್ನು ಬಿಜೆಪಿ ನೀಡಿದೆ.
ದೇಶದಲ್ಲಿ ಬಿಜೆಪಿ ಈ ರೀತಿಯಲ್ಲಿ ನಿಲುವಿನಿಂದ ಗೊಂದಲ ಸೃಷ್ಟಿಸುತ್ತದೆ. ಈ ನೀತಿಯ ಹಿಂದೆ ಬಿಜೆಪಿಯ ರಾಜಕೀಯ ಇದ್ದು, ರಾಜ್ಯದಲ್ಲಿ ಈ ಕಾಯಿದೆಯನ್ನು ಅನುಷ್ಠಾನದ ಕುರಿತು ಸರಕಾರ ಅಡ್ವಕೇಟ್ ಜನರಲ್ ಅವರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಕೇಂದ್ರ ಸರಕಾರ ಮೂರು ವರ್ಷವಾದರೂ ಉಜ್ವಲ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿ ಮಾಡಲು ಆಸಕ್ತಿ ವಹಿಸದೆ ಇರುವ ಕಾರಣ ಕರ್ನಾಟಕ ಬಡವರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಅನಿಲ ಭಾಗ್ಯ ಯೋಜನೆಯನ್ನು ಜಾರಿಗೆ ತರಲಿದೆ.
ಇದರಿಂದ ಅಡುಗೆ ಅನಿಲ ಸಂಪರ್ಕ ಇಲ್ಲದ ಬಳಕೆದಾರರಿಗೆ ಉಚಿತವಾಗಿ ಅಡುಗೆ ಅನಿಲದ ಸಂಪರ್ಕ ಠೇವಣಿ,ಗ್ಯಾಸ್ ಸ್ಟೌವ್,ಗ್ಯಾಸ್ ಸಿಲಿಂಡರ್ ಸೇರಿದಂತೆ ಸುಮಾರು 3,500 ರು. ಮೊತ್ತದ ಸೌಲಭ್ಯ ದೊರಕಲಿದೆ ಎಂದು ಖಾದರ್ ತಿಳಿಸಿದ್ದಾರೆ.
ಬಿಪಿಎಲ್ ಪಡಿತರ ಚೀಟಿ ಪಡೆಯಲು ಮಾಸಿಕ 150ವಿದ್ಯುತ್ ಯೂನಿಟ್ ಒಳಗಿನ ಬಳಕೆದಾರರಿಗೆ ಮಾತ್ರ ಸೀಮಿತವಾಗಿತ್ತು.ಉಳಿದವರನ್ನು ಎಪಿಲ್ಗೆ ಸೇರಿಸಲಾಗಿತ್ತು.
ಆದರೆ ಮನೆಯಲ್ಲಿ ಸಮಾರಂಭದ ಸಂದರ್ಭದಲ್ಲಿ ಹೆಚ್ಚು ವಿದ್ಯುತ್ ಬಳಕೆ ಮಾಡಿದ ತಕ್ಷಣ ಈ ಮಾನದಂಡದ ಪ್ರಕಾರ ಬಿಪಿಎಲ್ ಕಾರ್ಡ್ ಪಡೆಯಲು ಸಮಸ್ಯೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮುಂದೆ ಬಿಪಿಎಲ್ ಪಡಿತರ ಚೀಟಿ ಪಡೆಯಲು ಈ ವಿದ್ಯುತ್ ಬಳಕೆಯ ಆಧಾರವನ್ನು ಸಂಪೂರ್ಣ ಕೈ ಬಿಡಲಾಗುವುದು ಎಂದು ಸಚಿವ ಖಾದರ್ ತಿಳಿಸಿದ್ದಾರೆ.