ಮಂಗಳೂರಿನ ಕಾನ್ ಸ್ಟೇಬಲ್ ಪ್ರಾಮಾಣಿಕತೆಗೆ ಸೆಲ್ಯೂಟ್
ಮಂಗಳೂರು, ಆಗಸ್ಟ್ 31: ನಗರದ ಲಾಲ್ ಬಾಗ್ ವೃತ್ತದಲ್ಲಿ ಸಂಚಾರ ಪೊಲೀಸ್ ಕಾನ್ ಸ್ಟೇಬಲ್ ಸುರೇಶ್ ಅವರಿಗೆ ಸಿಕ್ಕಿದ ಹಣವನ್ನು ಅದನ್ನು ಕಳೆದುಕೊಂಡ ವ್ಯಕ್ತಿಗೆ ಮರಳಿಸಲಾಗಿದೆ. ಪ್ರಾಮಾಣಿಕತೆ ಪ್ರದರ್ಶಿಸಿದ ಕಾನ್ ಸ್ಟೇಬಲ್ ಗೆ 1000 ಬಹುಮಾನ ನೀಡಿ, ನಗರ ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್ ಗೌರವಿಸಿದ್ದಾರೆ.
ಸುರೇಶ್ ಸೋಮವಾರ ಕರ್ತವ್ಯ ನಿರತರಾಗಿದ್ದ ವೇಳೆ 23,250 ನಗದು ಇದ್ದ ಕಟ್ಟೊಂದು ಸಿಕ್ಕಿತ್ತು. ತಕ್ಷಣವೇ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದ ಅವರು, ಹಣವನ್ನು ಮಂಗಳೂರು ಪಶ್ಚಿಮ ಸಂಚಾರ ಠಾಣೆಗೆ ಒಪ್ಪಿಸಿದ್ದರು. ಕೋಕಾಕೋಲಾ ಕಂಪೆನಿಯ ಮಾರಾಟ ಪ್ರತಿನಿಧಿಯಾಗಿರುವ ಕಿಶನ್ ಕುಮಾರ್ ಎಂಬವರು ಬ್ಯಾಂಕಿಗೆ ಹಣ ತುಂಬಲು ಹೋಗಿದ್ದಾಗ ನಗದು ಕಟ್ಟು ಕೆಳಗೆ ಬಿದ್ದಿತ್ತು.[ಬೆಂಗಳೂರಲ್ಲಿ ಉಳ್ಳಾಲದ ಯುವಕ ಸಂಶಯಾಸ್ಪದ ಸಾವು]
ಬ್ಯಾಂಕಿಗೆ ಹಣ ತುಂಬಲು ಭರ್ತಿ ಮಾಡಿದ ಚೀಟಿಯೂ ಅದರ ಜೊತೆಗಿತ್ತು. ಬುಧವಾರ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿ, ಸರಿಯಾದ ಮಾಹಿತಿ ಒದಗಿಸಿದ ಕಿಶನ್ ಅವರಿಗೆ ಹಣ ಮರಳಿಸಲಾಯಿತು. ಸುರೇಶ್ ಅವರನ್ನು ಅಭಿನಂದಿಸಿದ ಕಮಿಷನರ್ 1000 ಬಹುಮಾನ ನೀಡಿದರು. ಕಿಶನ್ ಕುಮಾರ್ ಕಾನ್ ಸ್ಟೇಬಲ್ ಗೆ ಧನ್ಯವಾದ ಹೇಳಿದರು.