ಮಂಗಳೂರು: ಮಾಸ್ಕ್ ಹಾಕಲ್ಲವೆಂದು ಹಠ ಹಿಡಿದಿದ್ದ ವೈದ್ಯನ ವಿರುದ್ಧ ಕೇಸ್ ದಾಖಲು
ಮಂಗಳೂರು, ಮೇ 19: ಮಂಗಳೂರಿನ ಸೂಪರ್ ಮಾರ್ಕೆಟ್ ನಲ್ಲಿ ಮಾಸ್ಕ್ ಧರಿಸದೇ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಸಿದ ಹಿನ್ನೆಲೆಯಲ್ಲಿ ವೈದ್ಯ ಶ್ರೀನಿವಾಸ್ ಕಕ್ಕಿಲಾಯ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದ್ದು, ಸೂಪರ್ ಮಾರ್ಕೆಟ್ ಮಾಲೀಕ ರಯನ್ ರೊಜಾರಿಯಾ ದೂರು ನೀಡಿದ್ದರು.
ಮಂಗಳೂರು: ಮಾಸ್ಕ್ ಹಾಕಲ್ಲವೆಂದು ಹಠ ಹಿಡಿದ ಮತ್ತೊಬ್ಬ ವೈದ್ಯ; ನಡೆದಿದ್ದೇನು?
ಸೂಪರ್ ಮಾರ್ಕೆಟ್ ನಲ್ಲಿ ಮಾಸ್ಕ್ ಧರಿಸದೇ ಡಾ.ಶ್ರೀನಿವಾಸ್ ಕಕ್ಕಿಲಾಯ ಅವರು ಶಾಪಿಂಗ್ ಮಾಡಿದ್ದು, ಮಾಸ್ಕ್ ಧರಿಸದೇ ಆಗಮಿಸಿದ್ದನ್ನು ಪ್ರಶ್ನಿಸಿದ್ದ ಸೂಪರ್ ಮಾರ್ಕೆಟ್ ಸಿಬ್ಬಂದಿ, ಮಾಸ್ಕ್ ಧರಿಸದೇ ನಮ್ಮಲ್ಲಿ ಬರಬೇಡಿ, ಸಿಬ್ಬಂದಿ ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದರು.
ಆದರೆ, ನಾನು ಮಾಸ್ಕ್ ಧರಿಸುವುದೇ ಇಲ್ಲ ಎಂದು ಡಾ.ಶ್ರೀನಿವಾಸ್ ಕಕ್ಕಿಲಾಯ ಬೇಜವಾಬ್ದಾರಿ ತೋರಿಸಿದ್ದು, ನಾನು ಸರ್ಕಾರದ ದಡ್ಡ ನಿಯಮಗಳನ್ನು ಪಾಲಿಸುವುದಿಲ್ಲ, ನಾನು ವಿಜ್ಞಾನ ಏನ್ ಹೇಳುತ್ತದೆಯೋ ಅದನ್ನಷ್ಟೇ ಪಾಲಿಸುತ್ತೇನೆ ಅಂತ ವಾದ ಮಾಡಿದ್ದರು.
ಕಳೆದ 28 ವರ್ಷಗಳಿಂದ ಮಂಗಳೂರಿನಲ್ಲಿ ವೈದ್ಯರಾಗಿರುವ ಡಾ.ಶ್ರೀನಿವಾಸ್ ಕಕ್ಕಿಲಾಯರ ವರ್ತನೆ ನೋಡಿ ಜನರೇ ಆಶ್ಚರ್ಯಗೊಳಗಾಗಿದ್ದರು.
ಇನ್ನು, ಎರಡು ದಿನಗಳ ಹಿಂದಷ್ಟೆ ಬೆಂಗಳೂರಿನ ಸಾಗರ್ ಕ್ಲಿನಿಕ್ ನ ವೈದ್ಯ ಡಾ.ರಾಜು ಕೃಷ್ಣಮೂರ್ತಿ ಅವರು ಕೊರೊನಾ ಸೋಂಕಿತರಿಗೆ ಮಾಸ್ಕ್ ಬೇಕಿಲ್ಲ. ಸ್ಯಾನಿಟೈಸರ್ ಹಾಕಬೇಕಿಲ್ಲ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.