ನೇತ್ರಾವತಿ ಸೇತುವೆ ಬಳಿ ಕಾರು ಪತ್ತೆ, ಮಾಲೀಕ ನಾಪತ್ತೆ
ಮಂಗಳೂರು, ಏಪ್ರಿಲ್ 16: ನೇತ್ರಾವತಿ ಸೇತುವೆ ಬಳಿ ಬಾಗಿಲು ತೆರೆದ ಸ್ಥಿತಿಯಲ್ಲಿ ಕಾರೊಂದು ಏ.15ರ ಬುಧವಾರ ರಾತ್ರಿ ಪತ್ತೆಯಾಗಿದೆ. ಕಾರಿನ ಮಾಲೀಕ ನಾಪತ್ತೆಯಾಗಿದ್ದಾರೆ. ಸೋಮೇಶ್ವರ ಕೊಲ್ಯ ನಿವಾಸಿ ವಿಕ್ರಂ ಗಟ್ಟಿ ಕಾರಿನ ಮಾಲೀಕ ಎನ್ನಲಾಗಿದೆ. ಅವರು ನಾಪತ್ತೆಯಾಗಿದ್ದು, ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ.
ಕೊಲ್ಯದಲ್ಲಿ ವಿಕ್ರಂ ಗಟ್ಟಿ ಗ್ಯಾರೇಜ್ ಉದ್ಯಮ ನಡೆಸುತ್ತಿದ್ದರು. ಸೋಮೇಶ್ವರ ಕೊಲ್ಯದವರಾಗಿರುವ ವಿಕ್ರಂ ಐದು ವರ್ಷಗಳ ಹಿಂದೆ ಕೈರಂಗಳದ ಪ್ರತಿಕ್ಷಾ ಅವರನ್ನು ವಿವಾಹವಾಗಿದ್ದರು. ಒಂದೂವರೆ ವರ್ಷದ ಹಿಂದೆ ಕೊಣಾಜೆಯ ಪುಳಿಂಚಾಡಿ ಬಳಿ ಮನೆ ನಿರ್ಮಿಸಿ ಕುಟುಂಬ ಸಮೇತ ವಾಸವಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ.
ನಾಪತ್ತೆಯಾಗಿದ್ದ ಅಪ್ಪ ಮಗನ ಶವ ಕಟಪಾಡಿ ಸಮುದ್ರ ಕಿನಾರೆಯಲ್ಲಿ ಪತ್ತೆ
ಏಪ್ರಿಲ್ 15ರಂದು ರಾತ್ರಿ ಮನೆಮಂದಿಯೆಲ್ಲಾ ಟಿ.ವಿ. ನೋಡುತ್ತಿದ್ದ ವೇಳೆ ವಿಕ್ರಂ ಕಾರಿನ ಬ್ಯಾಟರಿ ರೀಚಾರ್ಜ್ ಮಾಡಲು ಕೊಣಾಜೆ ಪದವು ತನಕ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದಾರೆ. ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಬಂದಿದೆ. ಎಷ್ಟು ಹುಡುಕಾಡಿದರೂ ಪತ್ತೆಯಾಗಿಲ್ಲ.
ಸ್ಥಳಕ್ಕೆ ಕಂಕನಾಡಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ವಿಕ್ರಂ ನಾಪತ್ತೆಯಾಗಿರುವ ಕುರಿತು, ಅವರ ಸಹೋದರ ಜೀವನ್ ಗಟ್ಟಿ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.