ಬಾಲಕನ ಬಾಯಿಯಲ್ಲಿದ್ದ 20 ಸೆಂ.ಮೀ ಕ್ಯಾನ್ಸರ್ ಗೆಡ್ಡೆಯನ್ನು ಉಚಿತ ಶಸ್ತ್ರಚಿಕಿತ್ಸೆ ಮಾಡಿ ತೆಗೆದ ಕಣಚೂರು ವೈದ್ಯರು!
ಮಂಗಳೂರು, ಆಗಸ್ಟ್ 25: 'ವೈದ್ಯೋ ನಾರಾಯಣ ಹರಿಃ' ಎಂಬ ಮಾತನ್ನು ಮಂಗಳೂರಿನ ಕಣಚೂರು ಆಸ್ಪತ್ರೆಯ ವೈದ್ಯರು ನಿಜವಾಗಿಸಿದ್ದಾರೆ. ಅಪರೂಪದ ಕ್ಯಾನ್ಸರ್ ಖಾಯಿಲೆಗೆ ತುತ್ತಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಬಡಬಾಲಕನ ಬಾಯಿಯಲ್ಲಿ ಬೆಳೆದಿದ್ದ 18-20 ಸೆಂಟಿಮೀಟರ್ ಗಾತ್ರದ ಗೆಡ್ಡೆಯನ್ನು ಯಶಸ್ವಿಯಾಗಿ ಆಪರೇಷನ್ ಮಾಡಿ ವೈದ್ಯರು ಹೊರತೆಗೆದಿದ್ದಾರೆ. ಸೂಕ್ಷ್ಮಾತಿಸೂಕ್ಷ್ಮ ಜಾಗದಲ್ಲಿ ಬೆಳೆದಿದ್ದ ಕ್ಯಾನ್ಸರ್ ಗೆಡ್ಡೆಯನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆಯುವ ಮೂಲಕ ಬಾಲಕನಿಗೆ ಮರುಜನ್ಮ ನೀಡಿದ್ದಾರೆ
ಕೊಪ್ಪದ 17 ವರ್ಷದ ಬಾಲಕನಿಗೆ 2017ರಲ್ಲಿ ರಾಬ್ಡೋಮಿಯಾಸಾರ್ಕೊಮಾ ಎಂದು ಕರೆಯಲ್ಪಡುವ ಎಡ ಮ್ಯಾಕ್ಸಿಲ್ಲಾದ ಅತೀ ಅಪರೂಪದ ಕ್ಯಾನ್ಸರ್ ಪತ್ತೆಯಾಗಿದೆ. ಬಾಯಿಯ ಎಡ ಮ್ಯಾಕ್ಸಿಲ್ಲಾದಲ್ಲಿ ಬೆಳೆದ ಗೆಡ್ಡೆ ಬೃಹದಾಕಾರವಾಗಿ ಬೆಳೆದ ಗೆಡ್ಡೆ ಐದು ವರ್ಷದ ಅವಧಿಯಲ್ಲಿ 18-20 ಸೆ.ಮೀಟರ್ ಬೆಳೆದಿದೆ.
ಸ್ಕಾರ್ಫ್, ಕೇಸರಿ ಶಾಲು ವಿವಾದ; ಕೊಪ್ಪ ಕಾಲೇಜು ಆವರಣದಲ್ಲಿ ಗಲಾಟೆ
ಗೆಡ್ಡೆ ಕಣ್ಣು, ಬಾಯಿ, ಮೆದುಳುಗೆ ತಾಗುವಂತೆ ಬೆಳೆದಿದ್ದು,ಈ ಸಂಧರ್ಭದಲ್ಲಿ ಬಾಲಕನ ಕುಟುಂಬ ಹಲವು ಆಸ್ಪತ್ರೆ ಗಳಿಗೆ ಭೇಟಿನೀಡಿದೆ. ಆದರೆ ಗೆಡ್ಡೆತೆಗೆಯೋದು ಬಹಳ ಅಪಾಯಕಾರಿ ಕೆಲಸವಾಗಿರೋದರಿಂದ ಆಸ್ಪತ್ರೆ ಗಳ ವೈದ್ಯರೂ ಚಿಕಿತ್ಸೆಗೆ ನಿರಾಕರಿಸಿದ್ದಾರೆ. ಸರ್ಜರಿ ನಡೆಸುವ ಸಂದರ್ಭದಲ್ಲಿ ಜೀವಕ್ಕೆ ಅಪಾಯವಿರುವ ಬಗ್ಗೆ ಕುಟುಂಬಿಕರಿಗೆ ಎಚ್ಚರಿಸಿದ್ದಾರೆ.
ಆ ಬಳಿಕ ಬಾಲಕನ ತಾಯಿ ತನ್ನ ಸಂಬಂಧಿಕರ ಮೂಲಕ ಕಣಚೂರು ಆಸ್ಪತ್ರೆ ಯನ್ನು ಸಂಪರ್ಕಿಸಿದ್ದು, ಬಾಲಕನ ಬಾಯಲ್ಲಿ ಬೃಹದಾಕಾರವಾಗಿ ಬೆಳೆದಿರುವ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯುವಂತೆ ಮನವಿ ಮಾಡಿದ್ದಾರೆ. ಕಣಚೂರು ಆಸ್ಪತ್ರೆಯ ಒಂಕೋ ಶಸ್ತ್ರ ಚಿಕಿತ್ಸಕ ಡಾ.ರವಿ ವರ್ಮ ಅವರನ್ನು ಬಾಲಕನ ತಾಯಿ ಸಂಪರ್ಕಿಸಿ ಮಗನನ್ನು ಉಳಿಸುವಂತೆ ಬೇಡಿದ್ದಾರೆ.
ಅಪರೂಪದ ಶಸ್ತ್ರ ಚಿಕಿತ್ಸೆ
ಬಾಲಕ ಕಣಚೂರು ಆಸ್ಪತ್ರೆ ಗೆ ದಾಖಲಾದ ಬಳಿಕ ಕಿಮೋಥೆರಫಿ, ರೇಡಿಯೇಶನ್ ಬಳಿಕ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಡಾ.ರವಿವರ್ಮ, ಡಾ.ನಜೀಬ್ ನೇತೃತ್ವದ ತಂಡ 2022 ಫೆಬ್ರವರಿ 22ರಂದು ಪ್ರಥಮ ಹಂತದ ಶಸ್ತ್ರ ಚಿಕಿತ್ಸೆ ಮಾಡಿದೆ. ಎರಡು ಶಸ್ತ್ರ ಚಿಕಿತ್ಸೆಯನ್ನು ವೈದ್ಯರು ಗೆಡ್ಡೆ ತೆಗೆಯಲು ಮಾಡಿದ್ದು, ಪ್ರಥಮ ಶಸ್ತ್ರ ಚಿಕಿತ್ಸೆ 8 ಗಂಟೆಗಳಲ್ಲಿ, ಎರಡನೇ ಶಸ್ತ್ರ ಚಿಕಿತ್ಸೆ 4 ಗಂಟೆಗಳಲ್ಲಿ ಮಾಡಲಾಗಿದೆ. ಕಣ್ಣು, ಮೆದುಳುಗೆ ಯಾವುದೇ ಅಪಾಯ ಆಗದಂತೆ 18ರಿಂದ 20 ಸೆ.ಮೀ ಬೆಳೆದಿದ್ದ ಗೆಡ್ಡೆಯನ್ನು ಹೊರತೆಗೆಯಲಾಗಿದೆ.
ಈ ಖಾಯಿಲೆ ಭಾರತದಲ್ಲಿ 1%ಕ್ಕಿಂತ ಕಡಿಮೆ ಇದೆ. ಮತ್ತು ಈ ಗೆಡ್ಡೆಯನ್ನು ರೆಡಿಯೋಥೆರಫಿ, ಕೀಮೋಥೆರಪಿಯಿಂದ ತೆಗೆಯಲು ಸಾಧ್ಯವಾಗದೇ ಇರೋದರಿಂದ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಕ್ರೈಯೊಥೆರಪಿ ಬಳಸಲಾಗಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ಬಾಲಕನಿಗೆ ಕೃತಕ ದವಡೆಯನ್ನು ಅಳವಡಿಸಲಾಗಿದೆ. ಮಾತು ಸ್ಪಷ್ಟವಾಗಲು ಆರು ತಿಂಗಳು ಸ್ಪೀಚ್ ಥೆರಪಿ ಮಾಡಬೇಕಾಗಿದೆ. ಸದ್ಯ ಬಾಲಕ ದ್ರವ ರೂಪದ ಆಹಾರದ ಜೊತೆಗೆ ಮೃದುವಾದ ಊಟವನ್ನು ಅಗಿಯಬಹುದಾಗಿದೆ.
ಬಾಲಕನ ಎಲ್ಲಾ ಚಿಕಿತ್ಸೆಯ ವೆಚ್ಚವನ್ನು ಸ್ವತಃ ಆಸ್ಪತ್ರೆಯೇ ಭರಿಸಿದ್ದು, ಬಡ ಕುಟುಂಬದ ಬಾಲಕನ ಬಾಳಲ್ಲಿ ವಕ್ಕರಿಸಿರುವ ಕ್ಯಾನ್ಸರನ್ನು ದೂರವಾಗಿಸಿ, ಬಾಲಕನ ಜೀವನವನ್ನು ಮತ್ತೆ ಹಸನಾಗಿಸುವ ನಿರ್ಧಾರವನ್ನು ಆಸ್ಪತ್ರೆಯ ಆಡಳಿತ ಮಂಡಳಿ ಮಾಡಿದೆ. ಈ ಶಸ್ತ್ರಚಿಕಿತ್ಸೆಯ ವೆಚ್ಚ 20 ಲಕ್ಷಕ್ಕೂ ಅಧಿಕವಾಗಿದ್ದು, ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರೂ ತಮ್ಮ ಫೀಸ್ ಪಡೆದುಕೊಳ್ಳದೇ ಮಾನವೀಯತೆ ಮೆರೆದಿದ್ದಾರೆ.
ಅಜಾದಿ ಕಾ ಅಮೃತ ಮಹೋತ್ಸವ ಸಂಧರ್ಭದಲ್ಲಿ ಕಣಚೂರು ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 3 ನೇ ತಾರೀಖಿನವರೆಗೆ ಕಣಚೂರು ಆಸ್ಪತ್ರೆ ಯಲ್ಲಿ ಒಳರೋಗಿಯಾಗಿ ದಾಖಲಾಗುವ ಮತ್ತು ದಾಖಲಾಗಿರುವ ಎಲ್ಲಾ ರೋಗಿಗಳಿಗೆ ಉಚಿತ ಚಿಕಿತ್ಸೆ ಯನ್ನು ನೀಡುವ ನಿರ್ಧಾರ ವನ್ನು ಆಸ್ಪತ್ರೆ ಯ ಆಡಳಿತ ಮಂಡಳಿ ಮಾಡಿದೆ. ಕಣಚೂರು ಆಸ್ಪತ್ರೆ 1000 ಬೆಡ್ ಹಾಸಿಗೆಗಳ ಆರೋಗ್ಯ ಸೌಲಭ್ಯ ವನ್ನು ಒಳಗೊಂಡಿದೆ.