ದಕ್ಷಿಣ ಕನ್ನಡ: ಮೇ 15ರ ಬಳಿಕ ಎಲ್ಲ ಕಾರ್ಯಕ್ರಮಗಳಿಗೆ ಬ್ರೇಕ್; ಡಿಸಿ ಆದೇಶ
ಮಂಗಳೂರು, ಮೇ 6: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ಆದೇಶಗಳು ಹೊರಬಿದ್ದಿದೆ.
ಮೇ 7 ರಿಂದ ಪ್ರತಿದಿನ ಬೆಳಗ್ಗೆ 6 ರಿಂದ 9 ರವರೆಗೆ ಮಾತ್ರ ಸಾರ್ವಜನಿಕರಿಗೆ ಅಗತ್ಯ ವಸ್ತು ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ಬೆಳಗ್ಗೆ 10 ಗಂಟೆ ಒಳಗೆ ವ್ಯಾಪಾರಸ್ಥರು ಹಾಗೂ ಖರೀದಿದಾರರು ಮನೆ ಸೇರಬೇಕು ಎಂಬ ಆದೇಶ ಮಾಡಲಾಗಿದೆ.
ಕೊರೊನಾ ನಿಯಂತ್ರಣಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಒಂದು ವಾರ ಧನ್ವಂತರಿ ಹೋಮ
ಮೆಡಿಕಲ್ ಕಾರಣದಿಂದ ಜನರು ಸುಖಾಸುಮ್ಮನೆ ತಿರುಗಾಡುವ ಬಗ್ಗೆಯೂ ಜಿಲ್ಲಾಡಳಿತ ಬಿಗಿ ನಿಯಮ ತಾಳಿದ್ದು, ಮೆಡಿಕಲ್ ಅಂಗಡಿಗೆ ಹೋಗುವವರು ತಮ್ಮ ಹತ್ತಿರದ ಮೆಡಿಕಲ್ ಗಷ್ಟೆ ಹೋಗಬೇಕು, ವಾಹನಗಳಲ್ಲಿ ಬೇರೆ ಕಡೆ ಹೋದರೆ ವಾಹನ ಸೀಜ್ ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ.
ಜನರ ಅನಗತ್ಯ ಓಡಾಟಕ್ಕೆ ನಿಯಂತ್ರಣ ಹಾಕಲು ಪೊಲೀಸರಿಗೆ ಕಠಿಣ ಕ್ರಮ ಜಾರಿ ಮಾಡಲು ಸೂಚನೆ ನೀಡಲಾಗಿದ್ದು, ಮೇ 7ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಕಟ್ಟುನಿಟ್ಟಿನ ಕ್ರಮ ಜಾರಿಯಾಗಲಿದ್ದು, ಮೇ 15 ಬಳಿಕ ಎಲ್ಲಾ ಕಾರ್ಯಕ್ರಮಗಳಿಗೂ ಅವಕಾಶವನ್ನು ನಿರಾಕರಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ.
ಮೇ 15ನೇ ತಾರೀಖಿನ ಬಳಿಕ ಮದುವೆ, ಗೃಹಪ್ರವೇಶ, ಹುಟ್ಟಿದ ಹಬ್ಬ ಸೇರಿದಂತೆ ಯಾವ ಕಾರ್ಯಕ್ರಮ ಮಾಡುವಂತಿಲ್ಲ. ಮೇ.15ರ ಮೇಲೆ ಅನುಮತಿ ನೀಡಿರುವ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಈ ಸಂಬಂಧ ಈಗಾಗಲೇ ಅನುಮತಿ ನೀಡಿದವರ ಮನವೊಲಿಸಿ ಕಾರ್ಯಕ್ರಮ ರದ್ದುಗೊಳಿಸಲು ಸೂಚಿಸುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ನೀಡಿದ್ದಾರೆ.