ಧಾರ್ಮಿಕ ಕಾರ್ಯಕ್ರಮ ರದ್ದು ಮಾಡೋದು ಜನಪ್ರಿಯ ಸರ್ಕಾರದ ಲಕ್ಷಣವಲ್ಲ
ಮಂಗಳೂರು, ಏಪ್ರಿಲ್ 18: ಕೊರೊನಾ ಎರಡನೇ ಅಲೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಕಠಿಣ ನಿಯಮ ಜಾರಿ ಮಾಡಿದೆ. ಜನ ಸೇರುವ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.
ಎಲ್ಲಾ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಸರ್ಕಾರದ ನಿಯಮವನ್ನು ಸರಿಯಾಗಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದ್ದರೆ, ಸರ್ಕಾರದ ನಿಯಮಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಉಡುಪಿ ಬಿಜೆಪಿ ಶಾಸಕ ರಘಪತಿ ಭಟ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ""ಕರಾವಳಿಯ ಜನ-ಜೀವನ ರಾಜ್ಯದ ಬೇರೆ ಜಿಲ್ಲೆಗಳ ಜನರಿಗಿಂತ ತುಂಬಾ ವಿಭಿನ್ನವಾಗಿದೆ. ಈಗಾಗಲೇ ಧಾರ್ಮಿಕ ಹಿನ್ನಲೆಯ ಚೌಕಟ್ಟನ್ನು ಒಳಗೊಂಡ ಯಕ್ಷಗಾನ ಹರಕೆ ಬಯಲಾಟಗಳು, ನೇಮ, ದೇವತಾ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಉತ್ಸವಾದಿ ಸೇವೆಗಳಿಗೆ ದಿನಾಂಕ ಮತ್ತು ಸಮಯ ಈಗಾಗಲೇ ನಿಗದಿಗೊಳಿಸಲಾಗಿದೆ. ಹಾಗಾಗಿ ಈಗ ಹೇರಿರುವ ಧಾರ್ಮಿಕ ಕ್ಷೇತ್ರಗಳ ಮೇಲಿನ ನಿಷೇಧದಿಂದ ಜನರ ಧಾರ್ಮಿಕ ನಂಬಿಕೆಗಳಿಗೆ ತೊಡಕು ಉಂಟಾಗುತ್ತದೆ. ನೂತನ ನಿಯಮದಿಂದ ಸಾಂಕೇತಿಕವಾಗಿ ಕಾರ್ಯಕ್ರಮ ನಡೆಸಲೂ ತೊಂದರೆಯಾಗುವುದರಿಂದ ಸರ್ಕಾರ ನಿಯಮ ಸಡಿಲಿಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಇನ್ನೂ ಸರ್ಕಾರ ನಿಯಮದ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ರಘಪತಿ ಭಟ್, ಕರಾವಳಿ ಜಿಲ್ಲೆಗಳಲ್ಲಿ ಅತೀ ಹೆಚ್ಚಾಗಿ ಈ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ರಾಜಕೀಯ ಕಾರ್ಯಕ್ರಮಗಳಿಗೆ 200 ಜನರ ಅವಕಾಶ ಮಾಡಿದ್ದಾರೆ. ಕರಾವಳಿಯಲ್ಲಿ ರಾಜಕೀಯ ಕಾರ್ಯಕ್ರಮಗಳ ಅವಶ್ಯಕತೆ ಇಲ್ಲ. ಧಾರ್ಮಿಕ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸೋದು ಜನಪ್ರಿಯ ಸರ್ಕಾರದ ಲಕ್ಷಣವಲ್ಲ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಶಾಸಕ ರಘಪತಿ ಭಟ್ ಆಕ್ರೋಶ ವ್ಯಕ್ತಪಡಿದ್ದಾರೆ.
ಕರಾವಳಿ ಜಿಲ್ಲೆಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಬೇಡಿ, ಜನರ ಭಾವನೆಗಳಿಗೆ ಅಡ್ಡಿ ಮಾಡದೆ ಸರ್ಕಾರ ಆದೇಶವನ್ನು ಹಿಂಪಡೆಯಬೇಕೆಂದು ಶಾಸಕ ರಘಪತಿ ಭಟ್ ಆಗ್ರಹಿಸಿದ್ದಾರೆ.