ಜೆಡಿಎಸ್ ಗೆ ಸೇರುವವರು ಮೂರೂ ಬಿಟ್ಟವರು ತಾನೆ:ಶಾಸಕ ಸಿಟಿ ರವಿ ಪ್ರಶ್ನೆ
Recommended Video
ಮಂಗಳೂರು, ಏಪ್ರಿಲ್ 14: ಹಿಂದೂಗಳಾದ ದಲಿತರನ್ನು ಬೇರ್ಪಡಿಸುವ ಯತ್ನ ನಡೆಯುತ್ತಿದೆ. ಹಿಂದೂಗಳು ಬೇರೆಯಲ್ಲ, ದಲಿತರು ಬೇರೆಯಲ್ಲ. ಅಂಬೇಡ್ಕರ್, ಶ್ರೀರಾಮನನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಆದರೆ ಅಂಬೇಡ್ಕರ್, ಶ್ರೀ ರಾಮನನ್ನು ಬೇರ್ಪಡಿಸಲು ಸಾಕಷ್ಟು ಪ್ರಯತ್ನ ನಡೆದಿದೆ ಎಂದು ಶಾಸಕ ಸಿಟಿ ರವಿ ಹೇಳಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಶನಿವಾರ ದಂದು (ಏ.13) ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದುತ್ವ ನೆಲೆ ನಿಂತಲ್ಲಿ ದಲಿತರಿಗೆ ಅಪಮಾನವಿಲ್ಲ. ಈ ಬಾರಿ ನಡೆಯುತ್ತಿರುವ ಚುನಾವಣೆ ಚೌಕಿದಾರ್ ಹಾಗೂ ಚೋರರ ನಡುವಿನ ಚುನಾವಣೆ. "ಮೈ ನಹೀ ಖಾವುಂಗಾ, ಖಾನೆ ಭೀ ನಹೀ ದೂಂಗಾ" ಅನ್ನೋ ಪ್ರಮಾಣ ಮಾಡಿದವರು ಮೋದಿ. ಆದರೆ ಚೋರರ ನೇತೃತ್ವದಲ್ಲಿ ಕಾಂಗ್ರೆಸ್ ನಡಿತಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್-ಜೆಡಿಎಸ್ನದ್ದು ವಂಶೋದಯ, ನಮ್ಮದು ಅಂತ್ಯೋದಯ: ಮೋದಿ
ಸಿದ್ದರಾಮಯ್ಯ ಹೇಳಿದರು ಕುಂಕುಮ ಇಟ್ಟವರನ್ನು ನೋಡಿದ್ರೆ ಹೆದರಿಕೆಯಾಗುತ್ತೆಂದು. ಮತಯಾಚನೆ ಮಾಡುವಾಗ ರಾಹುಲ್ ಗಾಂಧಿ ದೊಡ್ಡ ದೊಡ್ಡ ನಾಮ ಹಾಕಿಕೊಂಡಿದ್ರು. ಮಾರಮ್ಮನ ಹಬ್ಬದಲ್ಲಿ ಹರಕೆ ಕುರಿಗೆ ಹಾಕಿದ ಹಾಗೆ ಕಾಣ್ತಿದ್ರು ಎಂದು ರವಿ ವ್ಯಂಗ್ಯವಾಡಿದರು.
ಹೊಟ್ಟೆಗಿಲ್ಲದವರು ಸೈನ್ಯ ಸೇರ್ತಾರೆ ಅಂತ ಹೇಳಿ ಕುಮಾರಸ್ವಾಮಿ ಸೈನಿಕರನ್ನು ಅವಮಾನಿಸಿದ್ದಾರೆ. ಹಾಗಾದರೆ ಜೆಡಿಎಸ್ ಗೆ ಸೇರೋರೆಲ್ಲಾ ಮೂರೂ ಬಿಟ್ಟವರು ತಾನೆ? ಎಂದು ರವಿ ಕಿಡಿಕಾರಿದರು. ಈ ಸಮಾವೇಶದಲ್ಲಿ ಯಾರು ಏನೇನು ಹೇಳಿದ್ದಾರೆ ಎಂಬುದರ ಪೂರ್ತಿ ವಿವರ ಇಲ್ಲಿದೆ.
ಕಾಂಗ್ರೆಸ್ ಸಂವಿಧಾನ ಪಾಲನೆ ಮಾಡಿಲ್ಲ
ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ದನ ಪೂಜಾರಿಯವರು ನಳಿನ್ ಹಾಗೂ ಮೋದಿ ಗೆಲ್ತಾರೆಂದು ಹೇಳಿದ್ರು. ಅವರಿಗೆ ಪ್ರಣಾಮ ಸಲ್ಲಿಸುತ್ತೇನೆ. ನವಭಾರತದ ನಿರ್ಮಾಣದ ಕೆಲಸವೆಂದರೆ ಸಂವಿಧಾನದ ಬದಲಾವಣೆಯಲ್ಲ. ತುರ್ತು ಪರಿಸ್ಥಿತಿ ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ ಸಂವಿಧಾನ ಪಾಲನೆ ಮಾಡಿಲ್ಲ. ಈ ಬಾರಿ ಮೇಕ್ ಇನ್ ಇಂಡಿತಾ ವರ್ಸಸ್ ಬ್ರೇಕ್ ಇನ್ ಇಂಡಿಯಾ ನಡುವೆ ನಡೆಯುತ್ತಿರುವ ಚುನಾವಣೆ. ಬ್ರೇಕ್ ಇನ್ ಇಂಡಿಯಾದ ನೇತೃತ್ವ ತುಕುಡೆ ತುಕುಡೆ ಗ್ಯಾಂಗ್ ರಾಹುಲ್ ಗಾಂಧಿಯದ್ದು, ಮೇಕ್ ಇನ್ ಇಂಡಿಯಾದ ನೇತೃತ್ವ ಪ್ರಧಾನಿ ಮೋದಿ ವಹಿಸಿದ್ದಾರೆ. ದೇಶಕ್ಕಾಗಿ ಮೋದಿ ಮತ್ತೆ ಗೆದ್ದು ಬರಬೇಕಿದೆ ಎಂದು ರವಿ ಹೇಳಿದರು.
ಮಿಥುನ್ ರೈ ವಿರುದ್ಧ ಕಿಡಿಕಾರಿದ ನಳಿನ್
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನದ ಸೆರೆಯಿಂದ 48 ಗಂಟೆಗಳಲ್ಲಿ ಬಿಡಿಸಿದವರು ಮೋದಿ. ಭಾರತದೆದುರು ಪಾಕಿಸ್ತಾನವನ್ನು ಶರಣಾಗುವಂತೆ ಮಾಡಿದ್ದಾರೆ. ಅಮೃತಾ ಹಾಗೂ ಸ್ಮಾರ್ಟ್ ಸಿಟಿ ಯೋಜನೆ, ರೈಲ್ವೆ ಅಭಿವೃದ್ಧಿ, ಕರಾವಳಿ ರಕ್ಷಣಾ ಪಡೆ ತರಬೇತಿ ಕೇಂದ್ರ , ಪ್ಲಾಸ್ಟಿಕ್ ಪಾರ್ಕ್ ಮಂಗಳೂರು ಜಿಲ್ಲೆಗೆ ಬಂದಿದೆ. ಜಿಲ್ಲೆಯ ಸಂಸ್ಕೃತಿ, ಪರಂಪರೆಯ ಉಳಿವಿಗೆ ಸಾಕಷ್ಟು ಹೋರಾಟ ಮಾಡಿದ್ದಕ್ಕೆ ನನ್ನ ಮೇಲೆ ಕೇಸ್ ದಾಖಲಿಸಿದ್ದಾರೆ. ಆದರೆ ಗೂಂಡಾಗಿರಿ, ಪಬ್ ಗಾಗಿ ನನ್ನ ವಿರುದ್ಧ ಪ್ರಕರಣ ದಾಖಲಾಗಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿರುದ್ಧ ಕಿಡಿಕಾರಿದರು.
ಭಾರತ ಇಂದು ಬೆಳಗುತ್ತಿರುವುದು ನೀವು ಹಾಕಿದ ಮತದಿಂದ: ಮೋದಿ
ಮೋದಿಯನ್ನು ಹಾಡಿಹೊಗಳಿದ ಶೋಭಾ
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ , ದೇಶದಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಂಡವರು ಪ್ರಧಾನಿ ನರೇಂದ್ರ ಮೋದಿ. ದೇಶದ ಸೈನ್ಯಕ್ಕೆ ಸ್ವಾವಲಂಬಿಯಾಗಿ ಶಸಸ್ತ್ರ ತಯಾರಿಕೆಗೆ ವ್ಯವಸ್ಥೆ ಕಲ್ಪಿಸಿದವರು ಮೋದಿ. ಹಿಂದೆ ಗಡಿಯಲ್ಲಿ ಉಗ್ರರ ದಾಳಿಯಾದಾಗ ಸೈನಿಕರು ದೆಹಲಿಗೆ ಕರೆ ಮಾಡಿ ಅನುಮತಿ ಕೇಳಬೇಕಿತ್ತು. ಮೋದಿ ಬಂದ ಮೇಲೆ ಉಗ್ರರಿಗೆ ತಕ್ಷಣ ಗುಂಡು ಹಾರಿಸಲು ಅನುಮತಿ ನೀಡಿದವರು ಮೋದಿ. ಪುಲ್ವಾಮಾ ಘಟನೆಯಲ್ಲಿ ಉಗ್ರ ದಾಳಿಗೆ ಹಲವು ಸೈನಿಕರು ಸಾವಿಗೀಡಾಗಿದ್ದರು. ಆದರೆ, ಕೇವಲ 11 ದಿನದೊಳಗೆ ಉಗ್ರರ ನೆಲೆಗೆ ಹೋಗಿ ಉಗ್ರರನ್ನು ಸದೆ ಬಡಿಯಲಾಯಿತು. ಈ ಹಿಂದೆ ಪ್ರಧಾನಿಯಾಗಿದ್ದ ಮನ್ ಮೋಹನ್ ಸಿಂಗ್ ಉಗ್ರವಾಗಿ ಖಂಡಿಸುವುದಾಗಿ ಹೇಳಿದ್ರು ಬಿಟ್ರೆ ಏನೂ ಮಾಡಿಲ್ಲ. ಆದರೆ, ಅಭಿನಂದನ್ ಉಗ್ರರ ಕೈಗೆ ಸಿಕ್ಕಾಗ ಕೂಡಲೇ ಬಿಡಿಸಿದವರು ಮೋದಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸರ್ಕಾರ ಕರಾವಳಿಗೆ ಅನುದಾನ ನೀಡಿಲ್ಲ
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಕಳ ಶಾಸಕ ಸುನಿಲ್ ಕುಮಾರ್, ಕರಾವಳಿಯ ಜನರು ಬುದ್ಧಿವಂತರಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ರು. ಹೌದು, ಕರಾವಳಿಯ ಜನರು ಬುದ್ಧಿವಂತರಲ್ಲ. ಯಾಕಂದ್ರೆ, ಕರಾವಳಿಯ ಯಾವ ಪೋಷಕನೂ ತನ್ನ ಮಗನನ್ನ ಎಲ್ಲಿದ್ಯಾ ನಿಖಿಲ್ ಅಂತಾ ಕೇಳಿಲ್ಲ ಎಂದು ವ್ಯಂಗ್ಯ ವಾಡಿದರು. ರಾಜ್ಯ ಬಜೆಟ್ ನಲ್ಲಿ ಕರಾವಳಿಗೆ ಅನುದಾನವನ್ನು ಸರಕಾರ ನೀಡಿಲ್ಲ. ಯಾವ ಯೋಜನೆಯನ್ನೂ ನೀಡಿಲ್ಲ. ಮಂಗಳೂರಿನ ಉಳಾಯಿಬೆಟ್ಟು ಕೋಮು ಘರ್ಷಣೆಯ ಪ್ರಕರಣದ ಆರೋಪಿಗಳ ವಿರುದ್ಧ ಇದ್ದ ಕೇಸ್ ಗಳನ್ನು ರಾಜ್ಯ ಸರಕಾರ ಹಿಂಪಡೆದಿದೆ. ಮುಸಲ್ಮಾನರ ಪ್ರಕರಣಗಳನ್ನು ಮಾತ್ರ ಹಿಂಪಡೆದಿದ್ಯಾಕೆ ? ಎಂದು ಸುನಿಲ್ ಕುಮಾರ್ ಪ್ರಶ್ನಿಸಿದರು.