"ಮೂರು ಉಪಮುಖ್ಯಮಂತ್ರಿಗಳು; ಇದು 3ಡಿ ಎಫೆಕ್ಟ್ ಸರ್ಕಾರನಾ?": ಐವನ್ ಡಿಸೋಜಾ
ಮಂಗಳೂರು, ಆಗಸ್ಟ್ 27: "ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಬಿಜೆಪಿ ಸರಕಾರದ ಸಂಪುಟ ಪ್ರಾತಿನಿಧ್ಯ ಹಾಗೂ ಖಾತೆ ಹಂಚಿಕೆ ಗೊಂದಲದ ಗೂಡಾಗಿದ್ದು, ಇದು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಕ್ಕೆ ಕಾರಣವಾಗಿದೆ" ಎಂದು ಹೇಳಿದ್ದಾರೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, "ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಬಿಜೆಪಿ ಹೈಕಮಾಂಡ್ ಹಾಗೂ ಆರ್ ಎಸ್ ಎಸ್ ವಿಶ್ವಾಸ ಕಳೆದುಕೊಂಡಿದೆ. ಅತೃಪ್ತ ಸಚಿವರು ಸ್ವಾಭಿಮಾನವಿದ್ದರೆ ಈ ಕೂಡಲೇ ರಾಜೀನಾಮೆ ನೀಡಲಿ" ಎಂದು ಸವಾಲು ಹಾಕಿದರು. "ಈಗ ಬಿಜೆಪಿಯಲ್ಲಿ ಲಕೋಟೆ ಆಡಳಿತ ನಡೆಯುತ್ತಿದೆ. ದೆಹಲಿ ಮತ್ತು ನಾಗಪುರದ ಸೂಚನೆಯನ್ನಷ್ಟೆ ಯಡಿಯೂರಪ್ಪ ಪಾಲಿಸಬೇಕಾಗಿದೆ. 2008ರ ಬಿಜೆಪಿ ಆಡಳಿತ ಪರಿಸ್ಥಿತಿಯೇ ಈಗಲೂ ಮುಂದುವರಿಯುತ್ತಿದೆ" ಎಂದು ವ್ಯಂಗ್ಯವಾಡಿದರು.
ನಳಿನ್ ಕುಮಾರ್ ಕಟೀಲ್ ಆಯ್ಕೆ ಸಮರ್ಥಿಸಿಕೊಂಡ ಕೋಟ ಶ್ರೀನಿವಾಸ್ ಪೂಜಾರಿ
"ಆಗ ಇಬ್ಬರು ಉಪ ಮುಖ್ಯಮಂತ್ರಿಗಳು ಇದ್ದರೆ, ಈಗ ಮೂರು ಮಂದಿ ಇದ್ದಾರೆ. ಇದು ತ್ರಿಡಿ ಆಯಾಮದ ಸರ್ಕಾರ. ಖಾತೆ ಹಂಚಿಕೆ ಬಳಿಕ ಸಿ.ಟಿ.ರವಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಅಶೋಕ್, ಸಚಿವ ಸ್ಥಾನ ಸಿಗದ ಅಂಗಾರ, ರೇಣುಕಾಚಾರ್ಯ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಗೆ ಉಪ ಮುಖ್ಯಮಂತ್ರಿ ಸ್ಥಾನ ಕೂಡ ಸಿಕ್ಕಿಲ್ಲ. ಬಿಜೆಪಿ ಸಚಿವರಿಗೆ ಸ್ವಾಭಿಮಾನ ಇದ್ದರೆ ರಾಜಿನಾಮೆ ನೀಡಲಿ" ಎಂದು ಅವರು ಹೇಳಿದರು.
"ಇದು ಅಲ್ಪಮತದ ಸರ್ಕಾರ. ಕನಿಷ್ಠ 6 ತಿಂಗಳಿಗಿಂತ ಹೆಚ್ಚಿಗೆ ಬಾಳಿಕೆ ಬರುವುದಿಲ್ಲ. ಜನತೆಯ ತೆರಿಗೆ ದುಡ್ಡನ್ನು ಲೂಟಿ ಮಾಡಲು ಸರ್ಕಾರ ಹೊರಟಿದೆ" ಎಂದು ಆರೋಪಿಸಿದರು.
"ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ತಂಡ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರೂ ಕಾರಿನಿಂದ ಇಳಿಯದೆ ನೆಪ ಮಾತ್ರ ಪರಿಶೀಲನೆ ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಹಾನಿ ಸಂಭವಿಸಿದರೂ ಇಲ್ಲಿಗೆ ಕೇಂದ್ರ ತಂಡ ಆಗಮಿಸುತ್ತಿಲ್ಲ. ಇದು ಕರಾವಳಿ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಇರುವ ನಿರ್ಲಕ್ಷ್ಯವನ್ನು ಸಾಬೀತುಪಡಿಸಿದೆ" ಎಂದು ಅವರು ಕಿಡಿಕಾರಿದರು.