ಮಂಗಳೂರಿನ ಈ ವಿದ್ಯಾರ್ಥಿನಿಗೆ ವಿಷಕಾರಿ ಹಾವುಗಳೇ ಸ್ನೇಹಿತರು!
ಮಂಗಳೂರು, ಜನವರಿ 22: ಹಾವುಗಳೆಂದರೆ ಯಾರಿಗೆ ತಾನೇ ಭಯ ಇಲ್ಲ ಹೇಳಿ. ಹಾವು ಎದುರಲ್ಲಿ ಇರುವುದು ಬಿಡಿ, ಕನಸಲ್ಲೂ ಬಂದರೂ ಬೆಚ್ಚಿ ಬೀಳುತ್ತೇವೆ. ಆದರೆ ಮಂಗಳೂರಿನಲ್ಲೊಬ್ಬ ಪದವಿ ವಿದ್ಯಾರ್ಥಿನಿ ಯಾವ ಭಯವೂ ಇಲ್ಲದೆ, ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಣೆ ಮಾಡುವಲ್ಲಿ ನಿಷ್ಣಾತಳಾಗಿದ್ದಾರೆ. ಈ ವಿದ್ಯಾರ್ಥಿನಿ ಈಗಾಗಲೇ 100ಕ್ಕೂ ಅಧಿಕ ಹಾವುಗಳನ್ನು ಹಿಡಿದು ರಕ್ಷಿಸಿರುವುದು ವಿಶೇಷವಾಗಿದೆ.
ಮಂಗಳೂರಿನ ಈ ಪದವಿ ವಿದ್ಯಾರ್ಥಿನಿಗೆ ಹಾವುಗಳೆಂದರೆ ಪ್ರೀತಿ. ಹೌದು, ನಗರದ ಅಶೋಕನಗರ ನಿವಾಸಿ, ಸಂತ ಅಲೋಶಿಯಸ್ ಕಾಲೇಜಿನ ಅಂತಿಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿನಿ ಶರಣ್ಯಾ ಭಟ್ ಹಾವಿನ ರಕ್ಷಣೆ ಮಾಡುತ್ತಿರುವ ಯುವತಿ. ಎಲ್ಲಿಯೇ ಹಾವುಗಳು ಕಂಡುಬಂದರೂ ಶರಣ್ಯಾ ಭಟ್ ಅವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಕೆಲಸ ಮಾಡುತ್ತಿದ್ದಾರೆ.
2 ವರ್ಷಗಳಿಂದ ಹಾವು ರಕ್ಷಿಸುವ ಕಾರ್ಯ
ಈಗಾಗಲೇ ಈಕೆ ಅತೀ ವಿಷಕಾರಿಯಾದ ಕನ್ನಡಿ ಹಾವು, ಕಟ್ಟ ಹಾವು, ನಾಗರಹಾವು, ಹೆಬ್ಬಾವು, ಕೇರೆ ಹಾವು, ನೀರು ಹಾವು ಸೇರಿದಂತೆ ಹಲವಾರು ವಿಷಕಾರಿ ಸರಿಸೃಪಗಳನ್ನು ಹಿಡಿದು ರಕ್ಷಿಸಿದ್ದಾರೆ. ಕಳೆದ 2 ವರ್ಷಗಳಿಂದ ಶರಣ್ಯಾ ಹಾವು ಹಿಡಿದು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ
ಹಾವು ಮನೆಯೊಳಗೆ ಬಂದು, ಅದರಿಂದ ತೊಂದರೆ ಇದೆ ಎಂದಾದರೆ ಮಾತ್ರ ಅಂತಹ ಸ್ಥಳಕ್ಕೆ ಹೋಗಿ ಹಾವನ್ನು ಹಿಡಿದು ಕಾಡಿಗೆ ಬಿಡುತ್ತಾರೆ ಶರಣ್ಯ. ಒಂದು ವೇಳೆ ಅದು ಮನೆಯ ಪಕ್ಕ, ಬಿಲ, ತೋಡುಗಳಲ್ಲಿ ಕಂಡುಬಂದರೆ ಅದನ್ನು ಹಿಡಿಯುವುದಿಲ್ಲ. ಯಾಕೆಂದರೆ ಹಾವುಗಳ ಆವಾಸ ಸ್ಥಾನ ಅದೇ ಆಗಿರುವುದರಿಂದ ಕೇವಲ ಮನೆಯೊಳಗೆ ಬರುವ ಹಾವುಗಳನ್ನು ಮಾತ್ರ ಹಿಡಿಯುತ್ತೇನೆ ಅನ್ನೋದು ಶರಣ್ಯಾಳ ನಿರ್ಧಾರವಾಗಿದೆ.
ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ಎಂ.ಎಸ್ಸಿ ಮಾಡುವ ಗುರಿ
ಕಪ್ಪೆಗಳ ಬಗ್ಗೆಯೂ ಅಧ್ಯಯನ ಮಾಡುತ್ತಿರುವ ಶರಣ್ಯಾ ಭಟ್, ತನಗೆ ಹಾವು ಇನ್ನಿತರ ಜೀವಿಗಳ ಬಗ್ಗೆ ಆಸಕ್ತಿ ತಳೆಯಲು ಅಜ್ಜ ಪ್ರಕಾಶ ಬಾಳ್ತಿಲ್ಲಾಯರೇ ಪ್ರೇರಣೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿರುವ ಅವರ ಮನೆಗೆ ಹೋದಾಗ ಅಲ್ಲಿನ ಗುಡ್ಡ, ಕಾಡು, ಗದ್ದೆ, ಬಯಲು ಸುತ್ತಾಡಿಸಿ ಪರಿಸರ ಜೀವಿಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತಾರೆ. ಇದರಿಂದಲೇ ಈ ಬೆಳವಣಿಗೆ ಸಾಧ್ಯವಾಯಿತು ಎನ್ನುತ್ತಾರೆ.
ವಿಷಪೂರಿತ ಹಾವು ಹಿಡಿಯಲು ಉಜಿರೆಯ ಸ್ನೇಕ್ ಜಾಯ್ ತರಬೇತಿ ನೀಡಿದರೆ, ಅಶೋಕ ನಗರದ ಉರಗ ತಜ್ಞ ಅತುಲ್ ಪೈ ನನ್ನ ಆಸಕ್ತಿಗೆ ಸಾಥ್ ನೀಡಿದರು. ಹಾವುಗಳ ಬಗ್ಗೆ ಡಾ. ವರದಗಿರಿ ಮುಂಬೈ ಮಾರ್ಗದರ್ಶನ ನೀಡಿದ್ದರು. ಕಪ್ಪೆಗಳ ಪ್ರಬೇಧಗಳ ಬಗ್ಗೆ ಡಾ. ವಿನೀತ್ ಕುಮಾರ್ರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಮುಂದೆ ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ಎಂ.ಎಸ್ಸಿ ಮಾಡಿ, ಅರಣ್ಯ ಇಲಾಖೆಗೆ ಸೇರ್ಪಡೆಯಾಗಬೇಕು ಎಂಬುದು ಶರಣ್ಯಾಳ ಗುರಿಯಾಗಿದೆ. ಇದರೊಂದಿಗೆ ಸಂಗೀತ, ನೃತ್ಯದಲ್ಲಿ ಆಸಕ್ತಿ ಹೊಂದಿರುವ ಶರಣ್ಯಾ ಭಟ್, ಕರ್ನಾಟಕ ಸಂಗೀತದಲ್ಲಿ ವಿದ್ವತ್ ಪೂರ್ವ ಹಂತ ಹಾಗೂ ಭರತನಾಟ್ಯದಲ್ಲಿ ವಿದ್ವತ್ ಪದವಿ ಅಭ್ಯಾಸ ನಡೆಸುತ್ತಿದ್ದಾರೆ.
ಗೆಳತಿಯರೇ ಹಾವು ಹಿಡಿಯುವ ಚಾಲೆಂಜ್ ನೀಡಿದ್ದರು
ಶರಣ್ಯಾಳಿಗೆ ಮೊದಮೊದಲು ಹಾವನ್ನು ಹಿಡಿಯುವ ಧೈರ್ಯ ಇರಲಿಲ್ಲ. ಹಾವಿನ ಬಗ್ಗೆ ಆಸಕ್ತಿ ಇದ್ದಿದ್ದರಿಂದ ಅವುಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಶರಣ್ಯಾಳಿಗೆ ಮೊದಲು ಅವರ ಗೆಳತಿಯರೇ ಹಾವು ಹಿಡಿಯುವ ಬಗ್ಗೆ ಚಾಲೆಂಜ್ ನೀಡಿದ್ದರು. ಎರಡು ವರ್ಷಗಳ ಹಿಂದೆ ಮಂಗಳೂರಿನ ಬಿಜೈ ಬಳಿ ಕನ್ನಡಿ ಹಾವು ಪತ್ತೆಯಾಗಿದ್ದು, ಕೂಡಲೇ ಶರಣ್ಯಾಳ ಸ್ನೇಹಿತೆಯರು ಕರೆ ಮಾಡಿ, ಹಾವು ಹಿಡಿಯಲು ಹೇಳಿದ್ದರು. ಸ್ನೇಹಿತೆಯರ ಚಾಲೆಂಜ್ ಸ್ವೀಕರಿಸಿದ ಶರಣ್ಯಾ ಹಾವನ್ನು ಯಶಸ್ವಿಯಾಗಿ ಹಿಡಿದಿದ್ದರು.
ಪೃಕೃತಿ, ವನ್ಯ ಜೀವಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಶರಣ್ಯಾ, ಕಾಲೇಜಿನ ರಜಾ ಸಮಯದಲ್ಲಿ ಆಸಕ್ತರೊಂದಿಗೆ ಪಶ್ಚಿಮ ಘಟ್ಟ, ಮಡಿಕೇರಿಗೆ ಚಾರಣಕ್ಕೆ ತೆರಳುತ್ತಾರೆ. ಗುಡ್ಡ, ಗ್ರಾಮೀಣ ಭಾಗಗಳಿಗೆ ತೆರಳಿ ಅಧ್ಯಯನ ಮಾಡುತ್ತಾರೆ. ಪ್ರಾಣಿ- ಪಕ್ಷಿಗಳ ಡಾಕ್ಯುಮೆಂಟರಿಯನ್ನು ನೋಡಿ ಅವುಗಳ ಬಗ್ಗೆ ಆಸಕ್ತಿ ಹೆಚ್ಚಿಸಿಕೊಂಡಿದ್ದಾರೆ.
ಬದುಕುವ ಹಕ್ಕು ಪ್ರಾಣಿ- ಪಕ್ಷಿಗಳಿಗೂ ಇದೆ
ತನ್ನ ವಿಶೇಷ ಆಸಕ್ತಿಯ ಬಗ್ಗೆ ಮಾತನಾಡಿದ ಶರಣ್ಯಾ ಭಟ್, ಮನುಷ್ಯನ ಹಾಗೆಯೇ ಭೂಮಿಯಲ್ಲಿ ಬದುಕುವ ಹಕ್ಕು ಪ್ರಾಣಿ- ಪಕ್ಷಿ, ಸರೀಸೃಪಕ್ಕೆ ಇವೆ. ಸರಿಸೃಪಗಳು ಯಾವತ್ತೂ ಅಪಾಯ ಅಲ್ಲ. ಅವುಗಳ ಮನಸ್ಸನ್ನು ಅರ್ಥ ಮಾಡಿಕೊಂಡರೆ ಅವುಗಳೂ ಸ್ನೇಹ ಜೀವಿಯೇ ಆಗಿರುತ್ತವೆ. ಮನುಷ್ಯನ ಅತಿಮಾನುಷ ನಡೆಯಿಂದ ಅಳಿಸಿಹೋಗುತ್ತಿರುವ ಜೀವಿಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬನದ್ದಾಗಿರಬೇಕೆಂದು ಶರಣ್ಯಾ ಹೇಳಿದ್ದಾರೆ.
Recommended Video