ವರನ ಕೈತಾಗಿದ್ದಕ್ಕೆ ನಿಂತ ಮದುವೆ: ನಿಶ್ಚಿತಾರ್ಥ ಮಾಡಿಕೊಂಡವ ಒಬ್ಬ, ಮದುವೆಯಾಗಲು ಬಂದವ ಇನ್ನೊಬ್ಬ
ಮಂಗಳೂರು, ಮೇ 28: ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು, ಮದುವೆಯೆನ್ನುವುದು ಬ್ರಹ್ಮ ಗಂಟು, ಹಾಗಾಗಿ ಸ್ವರ್ಗದಲ್ಲಿಯೇ ಮದುವೆ ನಿಶ್ಚಯವಾಗಿರುತ್ತದೆ ಎನ್ನುವ ಮಾತಿದೆ. ತಂದೆ ತಾಯಿಗಳಿಗೆ ಮಗಳನ್ನು ಉತ್ತಮ ಸಂಬಂಧವಿರುವ ಕಡೆ ಮದುವೆ ಮಾಡಿಕೊಟ್ಟು ಕೈತೊಳೆದುಕೊಳ್ಳಬೇಕು ಎನ್ನುವ ಜವಾಬ್ದಾರಿ.
ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಎಲ್ಲರೂ ಮದುವೆಯ ಸಂಭ್ರಮದಲ್ಲಿದ್ದರು. ಎರಡೂ ಕಡೆಯ ಸಂಬಂಧಿಕರು ಕಲ್ಯಾಣ ಮಂಟದಲ್ಲಿ ಹಾಜರಿದ್ದರು. ಇನ್ನೇನು ಮಹೂರ್ತದ ಸಮಯ ಬಂತು, ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ಈ ಮದುವೆ ಬೇಡ ಎಂದಿದ್ದಾಳೆ.
ಕನ್ಯಾಡಿ ಶ್ರೀಗಳನ್ನು ಭೇಟಿಯಾದ ನಾಗಾಸಾಧು ನಿಯೋಗ; ರಾಜ್ಯ ಚುನಾವಣೆಯಲ್ಲಿ ಸ್ಪರ್ಧೆಯ ಎಚ್ಚರಿಕೆ
ಹಾರ ಬದಲಾಯಿಸಿ, ತಾಳಿ ಕಟ್ಟಲು ಬಂದಾಗ ವರನ ಕೈ, ತನ್ನ ಕೊರಳು ಮತ್ತು ಕಿವಿಗೆ ತಾಗಿತು ಎನ್ನುವ ನೆಪವೊಡ್ಡಿ ವಧು ಈ ಮದುವೆ ಬೇಡ ಎಂದು ತಗಾದೆ ತೆಗೆದಿದ್ದಾಳೆ. ಏಕಾಏಕಿ ವಧುವಿನ ಈ ನಿರ್ಧಾರದಿಂದ ಎರಡೂ ಕಡೆಯವರು ಒಂದು ಕ್ಷಣ ದಿಗ್ಬ್ರಾಂತರಾಗಿದ್ದಾರೆ.
ವಧುವಿಗೆ ಈ ಮದುವೆ ಇಷ್ಟವಿರಲಿಲ್ಲ ಎನ್ನುವ ಕಾರಣಕ್ಕಾಗಿ, ಎರಡೂ ಕುಟುಂಬದವರು ಮಾತುಕತೆ ನಡೆಸಿ ಮದುವೆಗೆ ದಿನ ನಿಗದಿ ಮಾಡಿದ್ದರು. ಕುಟುಂಬದ ಒತ್ತಾಯಕ್ಕೆ ಮಣಿದಿದ್ದ ವಧುಗೆ ಕಾರಣ ಒಂದು ಬೇಕಿತ್ತೋ ಏನೋ? ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಸಿಟ್ಟಿಗೆದ್ದ ವಧು, ತಾಳಿ ಸಹಿತ ಹೂವಿನ ಹಾರವನ್ನು ಎಸೆದು ಈ ಮದುವೆಯೇ ಬೇಡ ಎಂದಿದ್ದಾಳೆ.
ಈ ಘಟನೆಯ ನಂತರ ಎರಡೂ ಕುಟುಂಬದ ನಡುವೆ ಸಣ್ಣಮಟ್ಟಿನ ಜಗಳ ಏರ್ಪಟ್ಟಿತ್ತು. ಸ್ಥಳಕ್ಕೆ ಆಗಮಿಸಿದ ಜಿಲ್ಲೆಯ ವೇಣೂರು ಪೊಲೀಸರು, ಎರಡೂ ಕುಟುಂಬದವರ ಸಮ್ಮುಖ ಮಾತುಕತೆ ನಡೆದರೂ ಪ್ರಯೋಜನವಾಗಲಿಲ್ಲ. ಮದುವೆ ನಡೆಯಲಿಲ್ಲ, ಯಾಕೆಂದರೆ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅಲ್ಲವೇ?
ಆದರೆ, ವಧು ಕೈತಾಗಿದ್ದಕ್ಕೆ ಮದುವೆ ನಿಂತು ಹೋಯಿತು ಎನ್ನುವುದು ಕ್ಷುಲ್ಲಕ ಕಾರಣವೆಂದು ಅನಿಸಬಹುದು. ಆದರೆ, ವಧು ಮದುವೆ ಬೇಡ ಎಂದಿದ್ದಕ್ಕೆ ಕಾರಣ ಇನ್ನೊಂದು ಇದೆ ಎಂದು ಇಡೀ ಪ್ರಹಸನಕ್ಕೆ ಹೊಸ ತಿರುವು ಸಿಕ್ಕಿದೆ.
ಅದು, ನಿಶ್ಚಿತಾರ್ಥ ಸಂದರ್ಭ ಬಂದಿದ್ದ ಹುಡುಗನೇ ಬೇರೆ, ಹೆಣ್ಣು ನೋಡಲು ಬಂದವನೇ ಬೇರೆ, ಈಗ ಮದುವೆ ಆಗುತ್ತಿರುವವನೇ ಬೇರೆ. ಮೂರು ಬಾರಿಯೂ ಬಂದದ್ದು ಬೇರೆ ಬೇರೆ ಹುಡುಗರು. ಇದೇ ಕಾರಣಕ್ಕೆ ವಧು ಮದುವೆಯನ್ನ ತಿರಸ್ಕರಿಸಲು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.