ಚಾರಣದಲ್ಲಿ ನಾಪತ್ತೆಯಾಗಿದ್ದ ಯುವಕ ಪತ್ತೆ; ಜೀವ ಉಳಿಸಿತು ಕುಕ್ಕೆಯ ಪೈಪ್ ಲೈನ್
ಮಂಗಳೂರು, ಸೆಪ್ಟೆಂಬರ್ 17: ಪುಷ್ಪಗಿರಿ ವನ್ಯಧಾಮದ ಕುಮಾರ ಪರ್ವತ ಚಾರಣಕ್ಕೆ ತೆರಳಿದ್ದಾಗ ತಂಡದಿಂದ ನಾಪತ್ತೆಯಾಗಿದ್ದ ಬೆಂಗಳೂರಿನ ಗಾಯತ್ರಿ ನಗರ ನಿವಾಸಿ ಸಂತೋಷ್ (24) ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ತೆಯಾಗಿದ್ದಾರೆ.
ಇಂದು ಬೆಳಿಗ್ಗೆ ತಾವೇ ನಡೆದುಕೊಂಡುಬಂದು ಕುಕ್ಕೆ ಸುಬ್ರಹ್ಮಣ್ಯ ತಲುಪಿದ್ದಾರೆ. ಕುಮಾರ ಪರ್ವತದ ಗಿರಿಗದ್ದೆ ಎಂಬಲ್ಲಿ ಸೆಪ್ಟೆಂಬರ್ 15ರಂದು ನಾಪತ್ತೆಯಾಗಿದ್ದ ಯುವಕನನ್ನು ಹುಡುಕಿಕೊಂಡು ಇಂದು ಪೊಲೀಸ್, ಅರಣ್ಯ ಇಲಾಖೆಯ ಸಿಬ್ಬಂದಿ ಐದು ತಂಡಗಳಾಗಿ ಜಂಟಿ ಕಾರ್ಯಾಚಾರಣೆ ಆರಂಭಿಸಿದ್ದರು. ಆದರೆ ಅಚ್ಚರಿ ಎಂಬಂತೆ ಸಂತೋಷ್ ತಾವೇ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದಾರೆ.
ಸುಬ್ರಹ್ಮಣ್ಯದಲ್ಲಿ ಟ್ರೆಕಿಂಗ್ ಹೋದ ವೇಳೆ ಬೆಂಗಳೂರಿನ ಯುವಕ ನಾಪತ್ತೆ
ಪರ್ವತದಲ್ಲಿ ಚಾರಣ ವೇಳೆ ದಾರಿ ತಪ್ಪಿದ್ದ ಸಂತೋಷ್ ಕುಕ್ಕೆ ದೇವಾಲಯಕ್ಕೆ ಸಂಪರ್ಕಿಸುವ ಪೈಪ್ ಮೂಲಕ ದಾರಿ ಅರಸಿಕೊಂಡು ಬಂದಿದ್ದಾರೆ. ಕುಮಾರ ಪರ್ವತದ ಬಳಿಯ ಗುಡ್ಡದಿಂದ ಕುಕ್ಕೆ ದೇವಾಲಯಕ್ಕೆ ಪೈಪ್ ಲೈನ್ ಅಳವಡಿಸಲಾಗಿತ್ತು. ಈ ಪೈಪನ್ನು ದಾರಿ ಸೂಚಕವಾಗಿ ಬಳಸಿ ಅವರು ಇಂದು ಸುಬ್ರಹ್ಮಣ್ಯ ತಲುಪಿದ್ದಾರೆ.
ಸೆ.14 ರಂದು ಬೆಂಗಳೂರು ಮೂಲದ 12 ಮಂದಿ ಚಾರಣಕ್ಕೆ ಹೋಗಿದ್ದರು. ತಂಡವು ಶನಿವಾರ ಪುಷ್ಪಗಿರಿ ತಪ್ಪಲಿನ ಕುಮಾರ ಪರ್ವತಕ್ಕೆ ಚಾರಣಕ್ಕೆ ತೆರಳಿ, ಭಾನುವಾರ ಗಿರಿಗದ್ದೆಯಿಂದ ವಾಪಸ್ ಆಗುವ ವೇಳೆ ಸಂತೋಷ್ ನಾಪತ್ತೆಯಾಗಿದ್ದರು. ತಂಡದಲ್ಲಿದ್ದವರು ಹುಡುಕಾಟ ನಡೆಸಿದ್ದರು. ಆದರೆ ಪತ್ತೆಯಾಗಿರಲಿಲ್ಲ. ಬೆಂಗಳೂರು ಕಾಳಿಕಾ ನಗರ ನಿವಾಸಿ ದರ್ಶನ್ ಎಂಬುವರು ದೂರು ದಾಖಲಿಸಿದ್ದರು.