ಮಂಗಳೂರಿನಲ್ಲಿ ಬಾಂಬ್ ಪತ್ತೆ ಪ್ರಕರಣ; ಎನ್ ಐಎ ಅಧಿಕಾರಿಗಳ ಭೇಟಿ
ಮಂಗಳೂರು, ಜನವರಿ 21: ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ನಿನ್ನೆ ಸಜೀವ ಬಾಂಬ್ ಪತ್ತೆಯಾಗಿದ್ದು, ಪ್ರಕರಣದ ಕುರಿತಂತೆ ಪೊಲೀಸರು ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ವ್ಯಕ್ತಿ ಬಗ್ಗೆ ಶೋಧ ನಡೆಯುತ್ತಿದೆ. ಪೊಲೀಸರಿಂದ ನೂರಾರು ಸಿಸಿ ಟಿವಿಗಳ ಪರಿಶೀಲನೆ ಸಾಗಿದ್ದು, ಮಂಗಳೂರಿನಿಂದ ಏರ್ ಪೋರ್ಟ್ ಗೆ ಹೋಗುವ ರಸ್ತೆಯಲ್ಲಿನ ಸಿಸಿ ಟಿವಿಗಳನ್ನು ಶೋಧಿಸುತ್ತಿದ್ದಾರೆ.
ಮಂಗಳೂರು: ಇನ್ನೂ ಮೂರು ಬಾಂಬ್ ಇಟ್ಟಿರುವುದಾಗಿ ಬೆದರಿಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಮಂದಿಯ ವಿಚಾರಣೆ ಕೈಗೊಂಡಿದ್ದಾರೆ. ಬಾಂಬ್ ಇಟ್ಟು ಕಾವೂರು ಬಳಿ ಬಸ್ ನಿಂದ ಇಳಿದ ಆ ವ್ಯಕ್ತಿ ಬಗ್ಗೆ ಕಾರ್ಯಾಚರಣೆ ಆರಂಭವಾಗಿದೆ. ನಿನ್ನೆ ಬೆಳಗ್ಗೆ ಆ ವ್ಯಕ್ತಿ ಸಂಚರಿಸಿದ ಬಸ್, ಆಟೋ ಚಾಲಕನ ವಿಚಾರಣೆಯೂ ನಡೆಯುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ನಾಲ್ಕು ಮಂದಿ ಅಧಿಕಾರಿಗಳ ತಂಡ ಮಂಗಳೂರಿಗೆ ಭೇಟಿ ನೀಡಲಿದ್ದು, ವಿಮಾನ ನಿಲ್ದಾಣ, ಕೆಂಜಾರು ಪ್ರದೇಶವನ್ನು ಪರಿಶೀಲಿಸಲಿದ್ದಾರೆ. ಬಾಂಬ್ ಸ್ಪೋಟಿಸಿದ ಸ್ಥಳವನ್ನೂ ಪರಿಶೀಲನೆ ಮಾಡಲಿದ್ದಾರೆ.
ಜೊತೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಎನ್ ಎಸ್ ಜಿ ಕಮಾಂಡೋ ಭಧ್ರತೆ ನೀಡಲಾಗಿದೆ. ಎನ್ ಎಸ್ ಜಿ 27ನೇ ಬೆಟಾಲಿಯನ್ ನ 16 ಮಂದಿ ಭದ್ರತೆಗಾಗಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದಾರೆ.