ಮಂಗಳೂರು: ಬಾಂಬ್ ಪತ್ತೆಯಿಂದ ಸ್ಫೋಟದವರೆಗೆ ನಡೆದಿದ್ದೇನು?
ಮಂಗಳೂರು, ಜನವರಿ 20: ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ 10:30 ರ ವರೆಗೆ ಎಲ್ಲವೂ ಸರಿಯಿತ್ತು. ಆಗಲೇ ಅಲ್ಲಿನ ಸಿಬ್ಬಂದಿಗಳ ಕಣ್ಣಿಗೆ ಬಿತ್ತು ವಿಐಪಿ ಲಾಂಚ್ ಬಳಿ ಇದ್ದ ಕಪ್ಪು ಬಣ್ಣದ ಅನಾಥ ಲ್ಯಾಪ್ಟಾಪ್ ಬ್ಯಾಗ್.
ವಿಮಾನ ನಿಲ್ದಾಣಗಳಲ್ಲಿ ಕಾಣುವ ಇಂತಹಾ ಮಾಲೀಕರಿಲ್ಲದ ಬ್ಯಾಗುಗಳು ತಂದೊಡ್ಡುವ 'ಅನಾಹುತಗಳ' ಬಗ್ಗೆ ಗೊತ್ತಿದ್ದ ಸಿಬ್ಬಂದಿ ತಡಮಾಡದೆ ವಿಮಾನ ನಿಲ್ದಾಣ ಭದ್ರತೆ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ.
ಬಾಂಬ್ ಅನ್ನು ಸುರಕ್ಷಿತವಾಗಿ ಸ್ಫೋಟಗೊಳಿಸಿದ ಪೊಲೀಸರು
ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಶ್ವಾನದಳದೊಂದಿಗೆ ಆಗಮಿಸಿ ತಪಾಸಣೆ ನಡೆಸಿದಾಗ ಬ್ಯಾಗಿನಲ್ಲಿ ಸಜೀವ ಬಾಂಬ್ ಇರುವುದು ಖಾಯಂ ಆಗಿದೆ. ಕೂಡಲೇ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಣೆಯಾಗಿದೆ. ಮಂಗಳೂರು ನಗರದಲ್ಲಿಯೂ ಹೈ ಅಲರ್ಟ್ ಘೋಷಣೆ ಆಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಪಿ. ಎಸ್. ಹರ್ಷಾ, ಕೈಗಾರಿಕಾ ಭದ್ರತಾ ಪಡೆಯ ಮುಖ್ಯಸ್ಥರು, ಬಾಂಬ್ ನಿಷ್ಕ್ರಿಯ ದಳ ತಂಡ ಕೆಲವೇ ನಿಮಿಷದಲ್ಲಿ ವಿಮಾನ ನಿಲ್ದಾಣ ತಲುಪಿದರು. ಬಾಂಬ್ ಇದ್ದ ಸುಮಾರು ಹತ್ತು ಕೆ.ಜಿ ತೂಕವಿದ್ದ ಬಾಂಬ್ ಅನ್ನು ಬಾಂಬ್ ನಿಷ್ಕ್ರಿಯ ದಳ ತನ್ನ ವಶಕ್ಕೆ ತೆಗೆದುಕೊಂಡಿತು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಶಂಕಿತನ ಚಿತ್ರ ಬಿಡುಗಡೆ
ಬಾಂಬ್ ಇಟ್ಟದ್ದ ಬ್ಯಾಗ್ ಅನ್ನು ಬಾಂಬ್ ಸ್ಫೋಟಿಸಿದರೂ ತೀವ್ರತೆ ಹೊರಗೆ ಚಾಚದಂತೆ ತಡೆಯುವ ವಾಹನವೊಂದರಲ್ಲಿಟ್ಟು (ಬಾಂಬ್ ಪ್ರೂಫ್) ವಿಮಾನ ನಿಲ್ದಾಣದಿಂದ ಹೊರಕ್ಕೆ ತರಲಾಯಿತು. ಬಾಂಬ್ ಪ್ರೂಫ್ ವಾಹನದೊಳಕ್ಕೆ ಇಳಿದು ಗಂಗಯ್ಯ ಎಂಬ ಬಾಂಬ್ ನಿಷ್ಕ್ರಿಯ ತಜ್ಞ ಬಾಂಬ್ ಅನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನ ಮಾಡಿದರು.
ವಿಮಾನ ನಿಲ್ದಾಣದಿಂದ ಪೆಣಂಬೂರು ಬೀಚ್ಗೆ ಬಾಂಬ್ ಪ್ರೂಫ್ ವಾಹನವನ್ನು ತರಲು ವ್ಯವಸ್ಥೆ ಮಾಡಲಾಯಿತು. ಅದಕ್ಕಾಗಿ ಝೀರೋ ಟ್ರಾಫಿಕ್ ವ್ಯವಸ್ಥೆ ಸಹ ಆಗಿತ್ತು. ಆದರೆ ನಂತರ ಈ ಯೋಜನೆ ಕೈಬಿಟ್ಟು ವಿಮಾನ ನಿಲ್ದಾಣದಿಂದ ಎರಡು ಕಿ.ಮೀ ದೂರದಲ್ಲಿದ್ದ ಕೆಂಜಾರು ಮೈದಾನಕ್ಕೆ ತರಲಾಯಿತು. ಅಷ್ಟರಲ್ಲಾಗಲೇ ಸಮಯ ಮೂರು ಗಂಟೆ ಆಗಿತ್ತು.
ಮಂಗಳೂರು: ಇನ್ನೂ ಮೂರು ಬಾಂಬ್ ಇಟ್ಟಿರುವುದಾಗಿ ಬೆದರಿಕೆ
ಇತ್ತಕಡೆ ಬಾಂಬ್ ಪ್ರೂಫ್ ವಾಹನ ವಿಮಾನ ನಿಲ್ದಾಣ ಬಿಟ್ಟಕೂಡಲೇ ಪೊಲೀಸರು ಬಾಂಬ್ ಇಟ್ಟವನಿಗಾಗಿ ತನಿಖೆ ಪ್ರಾರಂಭಿಸಿದ್ದರು. ಆಟೋದಲ್ಲಿ ಬಂದ ಒಬ್ಬ ವ್ಯಕ್ತಿ ಬಾಂಬ್ ಅನ್ನು ಇರಿಸಿ ಹೋಗಿರುವುದಾಗಿ ಶಂಕಿತ ವ್ಯಕ್ತಿ ಹಾಗೂ ಆತ ವಿಮಾನ ನಿಲ್ದಾಣಕ್ಕೆ ಬಂದಿದ್ದ ಆಟೋದ ಚಿತ್ರವನ್ನು ಬಿಡುಗಡೆಗೊಳಿಸಿದರು. ವಿಮಾನ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದರು.
ಈ ನಡುವೆ ಹಾವೇರಿಯಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, 'ಬಾಂಬ್ ನಿಷ್ಕ್ರಿಯಗೊಳಿಸಲಾಗುತ್ತಿದೆ, ಬಾಂಬ್ ಇಟ್ಟವರನ್ನು ನಿಷ್ಕ್ರಿಯಗೊಳಿಸಬೇಕಿದೆ' ಎಂದು ಮಾರ್ಮಿಕವಾಗಿ ಹೇಳಿದರು.
ಶೃಂಗೇರಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, 'ಬಾಂಬ್ ಸಿಕ್ಕಿರುವ ಬಗ್ಗೆ ಮಾಹಿತಿ ಇಟ್ಟಿದ್ದಾರೆ. ಬಾಂಬ್ ಇಡಲು ಏನು ಕಾರಣ ಅನ್ನೋದನ್ನ ಪತ್ತೆ ಹಚ್ಚಲಿ ಅದು ದೊಡ್ಡ ವಿಷಯವಲ್ಲ. ಮತ್ತೆ ಪೊಲೀಸ್ ಇಲಾಖೆ ೧೫ ದಿನ 1 ತಿಂಗಳು ಸಮಯ ತೆಗೆದುಕೊಂಡು ಪತ್ತೆಮಾಡೋಕೆ ಮತ್ತೊಂದು ಕಥೆ ಸೃಷ್ಟಿ ಮಾಡದಿರಲಿ. ವಾಸ್ತವಾಂಶ ಜನತೆಯ ಮುಂದೆ ಇಡಬೇಕು, ಜನರಲ್ಲಿ ಸಂಘರ್ಷದ ಮನೋಭಾವನೆಯನ್ನು ಉಂಟು ಮಾಡವ ರೀತಿಯಲ್ಲಿ ಸರ್ಕಾರವೇ ಕೆಲ ಪೊಲೀಸ್ ಅಧಿಕಾರಿಗಳನ್ನು ಬಳಸಿ ಕೊಳ್ಳುತ್ತಿದ್ದಾರೆ ಅನ್ನೋ ಅನುಮಾನವಿದೆ' ಎಂದರು.
ಇತ್ತ ಕೆಂಜಾರು ಮೈದಾನಕ್ಕೆ ತಂದ ಬಾಂಬ್ ಅನ್ನು ಐದು ಅಡಿ ಆಳದ ಸಿಮೆಂಟ್ ಗೋಡೆಗಳುಳ್ಳ ಹಳ್ಳವೊಂದರಲ್ಲಿ ಇಟ್ಟು ಸುತ್ತಲೂ ಮರಳು ತುಂಬಿದ ಮೂಟೆಗಳನ್ನು ಇಡಲಾಯಿತು. ಬಾಂಬ್ ಅನ್ನು ನಿಷ್ಕ್ರಿಯಗೊಳಿಸುವುದು ಅಸಾಧ್ಯ ಎಂಬುದು ಗೊತ್ತಾಗುತ್ತಿದ್ದಂತೆ ಸುರಕ್ಷಿತ ಸ್ಫೋಟಕ್ಕೆ ಸಕಲ ವ್ಯವಸ್ಥೆಯನ್ನೂ ಮಾಡಲಾಯಿತು.
ವೈರ್ಗಳನ್ನು ಬಳಸಿ ಡೆಟೋನೆಟರ್ ತಯಾರು ಮಾಡಿ ಬಾಂಬ್ಗೆ ಸಂಪರ್ಕ ಕಲ್ಪಿಸಲಾಯಿತು. ಈ ಕಾರ್ಯದಲ್ಲಿ ಗಂಗಯ್ಯ ಪ್ರಮುಖ ಪಾತ್ರ ವಹಿಸಿದರು. ವಯರ್ಗಳ ಮೂಲಕ ಬಾಂಬ್ ಅನ್ನು ಸಂಪರ್ಕಿಸಿ ರಿಮೋಟ್ ಗೊಳಿಸುವ ಕಾರ್ಯ ದೀರ್ಘವಾಗಿ ನಡೆಯಿತು.
ಕೆಂಜಾರು ಮೈದಾನಕ್ಕೆ ಆ ಹೊತ್ತಿಗಾಗಲೇ ನೂರಾರು ಜನ ಸೇರಿದ್ದರು. ಎಲ್ಲರನ್ನೂ ದೂರ ಕಳುಹಿಸಿ 5:35 ರ ಹೊತ್ತಿಗೆ ಬಾಂಬ್ ಅನ್ನು ಸ್ಫೋಟಿಸಲಾಯಿತು. ಶಬ್ದ ಮಾಡುತ್ತಾ ಬೆಂಕಿ-ಹೊಗೆಯುಗುಳಿ ಬಾಂಬ್ ಸ್ಫೋಟಗೊಂಡಿತು. ಆಗಬಹುದಾದ ಅನಾಹುತವನ್ನು ತಪ್ಪಿಸಿದ ಪೊಲೀಸರ ಶ್ರಮಕ್ಕೆ ನೆರೆದಿದ್ದ ಜನ ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು.
ಮಂಗಳೂರು ಎಸ್ಪಿ ಹರ್ಷಾ ಮಾತನಾಡಿ, ಬಾಂಬ್ ಕುರಿತು ತನಿಖೆ ನಡೆಸುತ್ತಿದ್ದೇವೆ. ಎನ್ಐಎ ಜೊತೆ ಮಾಹಿತಿ ಹಂಚಿಕೆ ಆಗಿದೆ. ಶಂಕಿತರನ್ನು ಪತ್ತೆ ಮಾಡಿದ್ದು, ಹುಡುಕುವ ಕಾರ್ಯ ಚಾಲ್ತಿಯಲ್ಲಿದೆ ಎಂದರು.