ಅರಬ್ಬೀ ಸಮುದ್ರದ ಬೋಟ್ ದುರಂತ: ಮೀನುಗಾರ ಬಿಚ್ಚಿಟ್ಟ ಜೀವನ್ಮರಣ ಹೋರಾಟದ ಕಥೆ
ಮಂಗಳೂರು, ಏಪ್ರಿಲ್ 15: ಮಂಗಳೂರಿನ ಬಂದರಿನಿಂದ ಅರಬ್ಬೀ ಸಮುದ್ರದ 42 ನಾಟಿಕಲ್ ಮೈಲ್ ದೂರದಲ್ಲಿ ಉಂಟಾದ ಬೋಟ್ ಅವಘಡದಲ್ಲಿ ಮೂರು ಜನ ಮೃತಪಟ್ಟಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ 9 ಮಂದಿಯನ್ನು ಆಳ ಸಮುದ್ರದಲ್ಲಿ ಹುಡುಕಾಟ ಮಾಡಲಾಗುತ್ತಿದೆ. ಘಟನೆಯಲ್ಲಿ ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು, ರಕ್ಷಣೆಗೊಳಗಾದ ಇಬ್ಬರು ಬದುಕುಳಿದ ಸಾಹಸಮಯ ಸನ್ನಿವೇಶವನ್ನು ತೆರದಿಟ್ಟಿದ್ದಾರೆ.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ವೇಲುಮುರುಗನ್ (37) ಹಾಗೂ ಪಶ್ಚಿಮ ಬಂಗಾಳದ ಕಾಕ್ದ್ವೀಪ್ ಜಿಲ್ಲೆಯ ಸುನಿಲ್ ದಾಸ್(28) ಬೋಟ್ ದುರಂತದಲ್ಲಿ ಬದುಕುಳಿದವರು.
ಯಮಧರ್ಮರಾಯನ ಜೊತೆ ಹೋರಾಡಿದ ಅನುಭವ
ಕೋಸ್ಟ್ ಗಾರ್ಡ್ನ ಮೂರು ನೌಕೆ, ಎರಡು ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ಮಾಡುತ್ತಿದೆ. ಕೋಸ್ಟ್ ಗಾರ್ಡ್ ಸಿಬ್ಬಂದಿಯ ನಿರಂತರ ಕಾರ್ಯಾಚರಣೆ ನಡುವೆಯೂ ಇಬ್ಬರು ಮಾತ್ರ ಜೀವಂತವಾಗಿ ಮರಳಿ ಬರಲು ಸಾಧ್ಯವಾಗಿದ್ದು, ನಾಪತ್ತೆಯಾಗಿರುವ 9 ಮಂದಿಯೂ ಮತ್ತೆ ಜೀವಂತವಾಗಿ ಸಿಗೋದು ಅನುಮಾನವಾಗಿದೆ.
ಕಡಲ ಮಧ್ಯೆ ಜೀವನ್ಮರಣ ಹೋರಾಟದ ಬಗ್ಗೆ ವೇಲುಮುರುಗನ್ ಮಾತನಾಡಿದ್ದು, ಸಾಕ್ಷಾತ್ ಯಮಧರ್ಮರಾಯನ ಜೊತೆ ಹೋರಾಡಿದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಆಳ ಸಮುದ್ರ ಮೀನುಗಾರಿಕೆ ನಡೆಸಲು ನಿರ್ಧಾರ
ವೇಲು ಮುರುಗನ್ ಹೇಳುವ ಪ್ರಕಾರ "ನಾನು ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಇತರ 13 ಜನರೊಂದಿಗೆ ಏಪ್ರಿಲ್ 11ರ ರವಿವಾರದಂದು ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಬೇಪೂರ್ನಿಂದ ಮೀನುಗಾರಿಕೆಗೆ ತೆರಳಿದ್ದೆವು.
ಈ ವೇಳೆ ನಮಗೆ ಅಧಿಕ ಮೀನುಗಳು ದೊರಕದ ಕಾರಣ ನಾವು ಆಳ ಸಮುದ್ರ ಮೀನುಗಾರಿಕೆ ನಡೆಸಲು ನಿರ್ಧರಿಸಿದ್ದು, 70 ನಾಟಿಕಲ್ ಮೈಲುಗಳಷ್ಟು ದೂರ ಸಾಗಿದೆವು. ನಾವು ಮುಂದೆ ಚಲಿಸುತ್ತಿದ್ದಂತೆ ಹವಾಮಾನ ಸ್ಥಿತಿಯೂ ಕೆಟ್ಟದಾಗಿತ್ತು. ನಾವು ಮುಂದೆ ಸಾಗುತ್ತಿದ್ದಂತೆ ಮಳೆ ಸುರಿಯಲು ಆರಂಭವಾಯಿತು.
ಹವಾಮಾನ ಕೂಡಾ ಹದಗೆಟ್ಟಿತ್ತು
ಬಳಿಕ ನಮ್ಮ ಬೋಟ್ನ ಸೀ ಮ್ಯಾನ್ ಊಟ ಮಾಡುವಂತೆ ತಿಳಿಸಿದರು. ಆದರೆ, ನಾವು ನಮ್ಮ ಪ್ರಯಾಣವನ್ನು ಮುಂದುವರೆಸಿದೆವು. ಈ ವೇಳೆ ಬೋಟ್ನ ಎಲ್ಲಾ ಲೈಟ್ಗಳನ್ನು ಆನ್ ಮಾಡಲಾಗಿತ್ತು. ಊಟದ ಬಳಿಕ ನಾವೆಲ್ಲರೂ ವಿಶ್ರಾಂತಿ ಪಡೆದೆವು. ಸ್ವಲ್ಪ ಸಮಯದ ಬಳಿಕ ಭಾರೀ ಮಳೆ ಸುರಿಯಲು ಪ್ರಾರಂಭವಾಯಿತು. ನಾನು ಸೀ ಮ್ಯಾನ್ ಬಳಿ ಮಲಗಲು ಹೋದೆ. ಮಳೆ ಜೋರಾಗಿ ಸುರಿಯುತ್ತಿದ್ದ ಕಾರಣ ಉಬ್ಬರವಿಳಿತ ಹೆಚ್ಚಿರುವುದು ನಮ್ಮ ಗಮನಕ್ಕೆ ಬಂತು. ಹವಾಮಾನ ಕೂಡಾ ಹದಗೆಟ್ಟ ಕಾರಣ, ನಮ್ಮ ಮುಂದಿನ ದಾರಿಯೂ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ.
ಬೋಟ್ ಮೇಲ್ಭಾಗವನ್ನು ತಲುಪಿದೆ
ನಾನು ದಣಿದಿದ್ದ ಕಾರಣ ನಿದ್ರೆಗೆ ಜಾರಿದ್ದೆ. ಸ್ವಲ್ಪ ಸಮಯದ ಬಳಿಕ ದೊಡ್ಡ ಸದ್ದು ಕೇಳಿ ನನಗೆ ಎಚ್ಚರವಾಯಿತು. ಈ ವೇಳೆ ನಾನು ಎದ್ದೇಳಲು ಪ್ರಯತ್ನಿಸುತ್ತಿದ್ದೆ. ಜನರು ಕಿರುಚಾಡುತ್ತಿರುವುದು ನನಗೂ ಕೇಳಿಸುತ್ತಿತ್ತು. ಈ ವೇಳೆ ನಾನು ಕೂಡಾ ನೀರಿಗೆ ಬಿದ್ದೆ. ಕೆಲವು ಸಮಯದ ಬಳಿಕ ನಾನು ಬೋಟ್ ಮೇಲ್ಭಾಗವನ್ನು ತಲುಪಿದೆ. ನಮ್ಮ ಬೋಟ್ಗೆ ಹಡಗು ಡಿಕ್ಕಿಯಾಗಿತ್ತು. ಈ ವೇಳೆ ಹಡಗಿನ ಸಿಬ್ಬಂದಿಗಳು ನಮ್ಮನ್ನು ಪತ್ತೆಹಚ್ಚಿ ಹಡಗಿಗೆ ಬರಲು ಸಹಾಯ ಮಾಡಿದರು. ನಮಗೆ ಪ್ರಥಮ ಚಿಕಿತ್ಸೆ ನೀಡಿದರು.
ಕಣ್ಣಾಲಿಗಳು ತೇವಗೊಂಡಿದ್ದವು
ಆ ಸಂದರ್ಭ ನನಗೆ ಮಾತನಾಡಲು ಕೂಡಾ ಆಗಲಿಲ್ಲ. ಮುಳುಗಿದ ಬೋಟ್ನಲ್ಲಿ ಇನ್ನೂ ಅನೇಕರು ಇದ್ದಾರೆ ಎಂದು ನಾನು ಅವರಿಗೆ ತಿಳಿಸಿದೆ. ಆದರೆ, ದುರಾದೃಷ್ಟವಶಾತ್ ನನಗೆ ಅವರನ್ನು ಹುಡುಕಲು ಆಗಲಿಲ್ಲ. ಬಡತನದ ಕಾರಣದಿಂದ ನಾನು ಹಾಗೂ ನನ್ನ ಕುಟುಂಬದ ಸದಸ್ಯರ ಜೀವನೋಪಾಯಕ್ಕಾಗಿ ನಾನು ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದೇನೆ ಅಂತಾ ವೇಲುಮುರುಗನ್ ಹೇಳಿದ್ದಾರೆ. ವೇಲುಮುರುಗನ್ ನಡೆದ ಘಟನೆ ಹೇಳುವ ಸಂದರ್ಭದಲ್ಲಿ ಅವರ ಕಣ್ಣಾಲಿಗಳು ತೇವಗೊಂಡು, ಭೀಕರ ಸಮಯದ ಭಯದಿಂದ ಹೊರಗೆ ಬರಲಾರದ ಸ್ಥಿತಿಯಲ್ಲಿದ್ದರು.
ನಿಜಕ್ಕೂ ಆಘಾತಕಾರಿ ಘಟನೆ
ಇನ್ನು ರಭಾ ಬೋಟ್ ಮಾಲೀಕ ಜಾಫರ್ ಮಾತನಾಡಿ, ಕರಾವಳಿಯ ಭದ್ರತಾ ಪೊಲೀಸರ ಮೂಲಕ ಈ ಘಟನೆ ತಿಳಿದುಬಂದಿದೆ. ನನ್ನ ಬೋಟ್ ಡಿಕ್ಕಿಯಾಗಿದೆ ಎಂದು ಅವರು ನನಗೆ ಮಾಹಿತಿ ನೀಡಿದರು. ಇದು ನಿಜಕ್ಕೂ ಆಘಾತಕಾರಿ ಘಟನೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೇರಳದ ಕೋಯಿಕೋಡ್ ಜಿಲ್ಲೆಯ ಬೇಪೋರ್ ನಿಂದ 14 ಮಂದಿ ಮೀನುಗಾರರನ್ನೊಳಗೊಂಡ ರಭಾ(ID No KL 07 MM 5065) ಎಂಬ ಮೀನುಗಾರಿಕಾ ಬೋಟ್, ಕೋಸ್ಟ್ ಗಾರ್ಡ್ ಹಡಗಿನೊಂದಿಗೆ ಆಳ ಸಮುದ್ರದಲ್ಲಿ ಡಿಕ್ಕಿ ಹೊಡೆದಿತ್ತು. ತಮಿಳುನಾಡಿನ ಅಲೆಕ್ಸಾಂಡರ್ ಸ್ಯಾರಂಗ್ ಮತ್ತು ಆತನ ಮಾವ ಮತ್ತು ಪಶ್ಚಿಮ ಬಂಗಾಳ ಮಾಣಿಕ್ ದಾಸ್ ಬೋಟ್ ಅಪಘಾತದಲ್ಲಿ ಸಾವನ್ನಪ್ಪಿದ್ದರು.