ಶಾಲೆಯಲ್ಲಿ ಗಣಹೋಮ ನಡೆಸಿದಕ್ಕೆ ನೋಟಿಸ್ ಕೊಟ್ಟ ಬಿಇಒ!
ಮಂಗಳೂರು, ಮೇ 27: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪಡಿಬಾಗಿಲು ಎನ್ನುವ ಶಾಲೆಯಲ್ಲಿ ಆರಂಭೋತ್ಸವದ ಸಂದರ್ಭ ಗಣಪತಿ ಹವನ ಮಾಡಿ ಪ್ರಾರಂಭ ಮಾಡಿದ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರನ್ನು ವಿಚಾರಣೆ ನಡೆಸಿರುವ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಾಥಮಿಕ ತನಿಖೆ ವರದಿಯನ್ನು ಡಿಡಿಪಿಐಗೆ ವರದಿ ನೀಡಿದ್ದಾರೆ.
ವಿಟ್ಲ ಹೋಬಳಿ ವ್ಯಾಪ್ತಿಯ ಪಡಿಬಾಗಿಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಹದಿನೈದು ವರ್ಷಗಳಿಂದ ಶಾಲಾ ಪ್ರಾರಂಭೋತ್ಸವದಂದು ಗಣಪತಿ ಹವನವನ್ನು ನಡೆಸಿಕೊಂಡು ಬರುವ ಸಂಪ್ರದಾಯವನ್ನು ಇಟ್ಟುಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಗಣಪತಿ ಹವನ ನಡೆಸಿ ಶಾಲೆ ಪ್ರಾರಂಭ ಮಾಡುವ ಬಗ್ಗೆ ಎಸ್ಡಿಎಂಸಿ 2022 ರ ಮೇ 6 ರಂದು ನಡೆಸಿದ ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಅದರಂತೆ ಹವನವನ್ನು ನಡೆಸಲಾಗಿತ್ತು.
ಮತ್ತೊಂದು ಜೆಎನ್ಯು ಮಾಡಲೊರಟಿದ್ದಾರೆ: ಮಂಗಳೂರಿನಲ್ಲಿ ಮತ್ತೆ ಹಿಜಾಬ್ ವಿವಾದ
ಅದರಂತೆ ಮೇ 16ರಂದು ಸೋಮವಾರ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳು ಪ್ರಾರಂಭಗೊಂಡಿದ್ದವು. ಈ ಸಂದರ್ಭದಲ್ಲಿ ಶಿಕ್ಷಕರು ಆತ್ಮೀಯವಾಗಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ್ದರು.
ತಲಪಾಡಿ: ಭಾರಿ ಮಳೆಗೆ ಕುಸಿದ ಶಿಥಿಲಾವಸ್ಥೆಯ ಶಾಲೆ!
ಆದರೆ ದಕ್ಷಿಣ ಕನ್ನಡದ ಕೆಲವೆಡೆ ಗಣಹೋಮ ನಡೆಸಲಾಗಿತ್ತು. ಇದರ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ಭಾರೀ ವೈರಲ್ ಆಗಿದ್ದವು. ಹಿಜಾಬ್ ಧರಿಸಲು ಶಾಲೆಗಳಲ್ಲಿ ಅವಕಾಶ ನೀಡಬಾರದು ಎಂಬ ವಿವಾದ ರಾಜ್ಯದಲ್ಲಿರುವಾಗ, ಶಾಲೆಯಲ್ಲಿ ಹಿಂದೂ ಧರ್ಮದ ಸಂಪ್ರದಾಯವಾದ ಹೋಮ ಪೂಜೆಗಳನ್ನು ನಡೆಸಿರುವುದೇಕೆ? ಎಂಬ ಟೀಕೆಗಳು ವ್ಯಕ್ತವಾಗಿದ್ದವು.
ಪೋಷಕರಿಂದ ಭಾರೀ ವಿರೋಧ
ಶಿಕ್ಷಣ ಇಲಾಖೆಯ ಯಾವುದೇ ಸೂಚನೆಯಲ್ಲೂ ಶಾಲಾ ಪ್ರಾರಂಭೋತ್ಸವದ ಸಮಯ ಹಿಂದು ಧಾರ್ಮಿಕ ಆಚರಣೆಯನ್ನು ಮಾಡಬಾರದೆಂದು ಮಾಹಿತಿಯಿಲ್ಲ. ಶಾಲೆ ಪ್ರಾರಂಭೋತ್ಸವದ ಸುತ್ತೋಲೆಯಲ್ಲಿಯೂ ಇಂತಹ ಆಚರಣೆ ಮಾಡಬಾರದೆಂದು ಹೇಳಿಲ್ಲ. ಶಾಲೆಯ ವಿದ್ಯಾರ್ಥಿಗಳ ಪೋಷಕರಿಂದಲೂ ಯಾವುದೇ ತಕರಾರು ಇಲ್ಲ. ಹಾಗೆಂದು ಶಿಕ್ಷಣ ಇಲಾಖೆಗೆ ದೂರು ಹೋಗಿ ಮೂರು ಮಂದಿ ಅಧಿಕಾರಿಗಳು ಶಾಲೆಗೆ ಬಂದು ತೀವ್ರವಾದ ವಿಚಾರಣೆಯನ್ನು ಕೈಗೊಂಡಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಈ ವರ್ತನೆಗೆ ಶಾಲಾಭಿವೃದ್ಧಿ ಸಮಿತಿ ಹಾಗು ಪೋಷಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷ ಶಾಲೆಯಲ್ಲಿ ಗಣಪತಿ ಹವನ
ಶಾಲೆ ಹಾಗೂ ಊರಿನಲ್ಲಿ ಅನ್ಯೋನ್ಯತೆಯಿಂದ ಇರುವ ಸಂದರ್ಭದಲ್ಲಿ ಶಾಲೆಯಲ್ಲಿ ನಡೆಯುವ ಧಾರ್ಮಿಕ ಆಚರಣೆಗೆ ಎಲ್ಲಾ ಸಮುದಾಯದ ಜನರೂ ಯಾವುದೇ ಆಕ್ಷೇಪಣೆಯನ್ನು ಮಾಡಿಲ್ಲ. ಶಾಲೆ ಆರಂಭಗೊಂಡಾಗಿನಿಂದ ಶೈಕ್ಷಣಿಕ ವರ್ಷ ಆರಂಭಗೊಂಡಾಗ ಪ್ರತಿ ವರ್ಷ ಶಾಲೆಯಲ್ಲಿ ಗಣಪತಿ ಹವನ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಗಣಪತಿ ಹವನವನ್ನು ಮಾಡಲಾಗಿದೆ. ಎಲ್ಲಾ ಪೋಷಕರೂ ಇದಕ್ಕೆ ತಮ್ಮ ಬೆಂಬಲ-ಸಹಕಾರವನ್ನೂ ನೀಡಿದ್ದಾರೆ. ಆದರೆ ಯಾವುದೇ ದೂರುಗಳಿಲ್ಲದಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸುಖಾಸುಮ್ಮನೆ ಈ ವಿಚಾರವನ್ನು ವಿವಾದವಾಗಿ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಶಾಲೆಯಲ್ಲಿ ಪ್ರತಿ ಗುರುವಾರ ಈಗಲೂ ಭಜನೆಯನ್ನು ಮಾಡಲಾಗುತ್ತಿದ್ದು,ಎಲ್ಲಾ ಮಕ್ಕಳೂ ಇದರಲ್ಲಿ ಭಾಗವಹಿಸುತ್ತಿರುವಾಗ ಅಧಿಕಾರಿಗಳೇಕೆ ಈ ರೀತಿಯ ವರ್ತನೆ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಧಾರ್ಮಿಕವಾಗಿ ಯಾವುದೇ ಸಮಸ್ಯೆಯಾಗಬಾರದು
ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಡಿಡಿಪಿಐ ಸುಧಾಕರ್, ಸರ್ಕಾರದ ಹಾಗೂ ನ್ಯಾಯಲಯದ ಆದೇಶವನ್ನು ಕಾಲಕಾಲಕ್ಕೆ ಪಾಲಿಸಬೇಕಾಗುತ್ತದೆ. ಶಾಲೆಗಳಲ್ಲಿ ಧಾರ್ಮಿಕವಾಗಿ ಯಾವುದೇ ಸಮಸ್ಯೆಯಾಗಬಾರದು ಮತ್ತು ಸಮಾನತೆ ಇರಬೇಕು. ಶಾಲೆಯಿಂದ ಬಂಟ್ವಾಳ ಬಿಇಒ ಮಾಹಿತಿಯನ್ನು ಕೇಳಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಎಸ್ಡಿಎಂಸಿ ಅಧ್ಯಕ್ಷ ರಾಜೀನಾಮೆ
ಗಣಪತಿ ಹವನ ನಡೆಸಿದ ಕಾರಣಕ್ಕೆ ತಮ್ಮನ್ನು ವಿಚಾರಣೆ ನಡೆಸಿದ ಹಿನ್ನಲೆಯಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಬಾಲಕೃಷ್ಣ ಕಾರಂತ್ ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಈ ಬೆಳವಣಿಗೆ ಇದೀಗ ಮತ್ತೆ ವಿವಾದಕ್ಕೆ ಕಾರಣವಾಗಿದ್ದು, ಶಾಲೆ ಮುಚ್ಚಿ ಹೋಗುವ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಗ್ರಾಮಸ್ಥರು ಶಾಲೆಯನ್ನು ಮುಂದುವರಿಯುವಂತೆ ಮಾಡಿದ್ದಾರೆ. ಆಗ ಶಾಲೆಯ ಬಗ್ಗೆ ಇಲ್ಲದ ಕಾಳಜಿ ಅಧಿಕಾರಿಗಳಿಗೆ ಈಗ ಬರಲು ಕಾರಣವೇನು ಎನ್ನುವ ಪ್ರಶ್ನೆಯನ್ನೂ ಗ್ರಾಮಸ್ಥರು ಹಾಕಲಾರಂಭಿಸಿದ್ದಾರೆ.
Recommended Video